'ನಮ್ಮ ಮೆಟ್ರೋ' ಬಂದ್: ಲಕ್ಷಾಂತರ ಪ್ರಯಾಣಿಕರ ಗೋಳು ಕೇಳೋರ್ಯಾರು?!
ಬೆಂಗಳೂರು, ಜುಲೈ 7: ಎಂದಿನಂತೆ ಇಂದು (ಜುಲೈ 7) ಇಂದು ಸಹ ಬೆಳ್ಳಂಬೆಳಗ್ಗೆ ಮೆಟ್ರೋ ನಿಲ್ದಾಣದತ್ತ ಬಂದಿದ್ದ ಲಕ್ಷಾಂತರ ಪ್ರಯಾಣಿಕರಿಗೆ ಅಚ್ಚರಿ ಕಾದಿತ್ತು! ಕಾರಣ ಪ್ರತಿದಿನ ಬೆಳಗ್ಗೆ 5 ಗಂಟೆಗೆಲ್ಲ ಆರಂಭವಾಗುತ್ತಿದ್ದ ಮೆಟ್ರೋ ಸೇವೆ ಸ್ಥಗಿತಗೊಂಡಿತ್ತು, ಮಾತ್ರವಲ್ಲ, ಮೆಟ್ರೋ ನಿಲ್ದಾಣಗಳೇ ಬಾಗಿಲು ಮುಚ್ಚಿದ್ದವು!
'ನಮ್ಮ ಮೆಟ್ರೋ' ಸಿಬ್ಬಂದಿ ಮುಷ್ಕರ: ಮೆಟ್ರೋ ರೈಲು ಸೇವೆ ಸ್ಥಗಿತ
'ನಮ್ಮ ಮೆಟ್ರೋ' ಸಿಬ್ಬಂದಿ ಹಾಗೂ ಕರ್ನಾಟಕ ರಾಜ್ಯ ಕೈಗಾರಿಕಾ ಭದ್ರತಾ (ಕೆಎಸ್ ಐಎಸ್ ಎಫ್) ಸಿಬ್ಬಂದಿ ನಡುವೆ ಜುಲೈ 6ರ (ಗುರುವಾರ) ಬೆಳಗ್ಗೆ ನಡೆದಿದ್ದ ಕಲಹದ ನಂತರ ಕೆಲ ಮೆಟ್ರೋ ಸಿಬ್ಬಂದಿಗಳನ್ನು ಬಂಧಿಸಲಾಗಿತ್ತು. ಅವರ ಬಂಧನವನ್ನು ವಿರೊಧಿಸಿ, ಮತ್ತು ಅವರನ್ನು ತಕ್ಷಣವೇ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿ ಪ್ರತಿಭಟನೆ ಆರಂಭವಾಗಿರುವ ಹಿನ್ನೆಲೆಯಲ್ಲಿ ನಮ್ಮ ಮೆಟ್ರೋ ಬಂದ್ ಆಗಿದೆ!
ಆದರೆ ನಮ್ಮ ಮೆಟ್ರೊ ಸಿಬ್ಬಂದಿ ಮತ್ತು ಕೆಎಸ್ ಐಎಸ್ ಎಫ್ ಸಿಬ್ಬಂದಿಗಳ ವೈಯಕ್ತಿಕ ಜಗಳದಿಂದಾಗಿ ಸಮಸ್ಯೆ ಎದುರಿಸುತ್ತಿರುವವರು ಮಾತ್ರ ಸಾಮಾನ್ಯ ಜನ. ಮೈಸೂರು ರಸ್ತೆಯಿಂದ ಬೈಯಪ್ಪನಹಳ್ಳಿ ಮತ್ತು ನಾಗಸಂದ್ರದಿಂದ ಯಲಚೇನಹಳ್ಳಿ ವರೆಗಿನ ಒಟ್ಟು 42 ಕಿ.ಮೀ.ಮಾರ್ಗದಲ್ಲಿ ದಿನವೊಂದಕ್ಕೆ ಪ್ರಯಾಣ ಬೆಳೆಸುವವರು ಸರಿಸುಮಾರು ಮೂರೂವರೆ ಲಕ್ಷಕ್ಕೂ ಹೆಚ್ಚು ಮಂದಿ!
ಇವರೆಲ್ಲರೂ ತಮ್ಮ ಪ್ರತಿದಿನದ ಪ್ರಯಾಣಕ್ಕೂ ಮೆಟ್ರೋವನ್ನೇ ಅವಲಂಬಿಸಿದ್ದಾರೆ. ಆದರೆ ಯಾವ ಮುನ್ಸೂಚನೆಯನ್ನೂ ನೀಡದೆ ಏಕಾಏಕಿ ಮೆಟ್ರೊ ನಿಲ್ದಾಣಗಳು ಬಾಗಿಲು ಮುಚ್ಚಿಕೊಂಡರೆ ಅದನ್ನೇ ನಂಬಿಕೊಂಡಿರುವ ಪ್ರಯಾಣಿಕರ ಕತೆ ಏನಾಗಬೇಕು? ಮೆಟ್ರೋಕ್ಕಾಗಿ ಕಾದು ಕುಳಿತು, ಕೊನೆಗೆ 'ಅಂತೆ, ಕಂತೆ' ಸುದ್ದಿಗಳನ್ನು ಕೇಳಿ, ಬೇರೆ ದಾರಿ ಹುಡುಕಿಕೊಂಡ ಪ್ರಯಾಣಿಕರು, ಇಂದು ಬೆಳಗ್ಗೆ ಮೆಟ್ರೋಕ್ಕೆ ಹಿಡಿಶಾಪ ಹಾಕಿದ್ದಂತೂ ಸತ್ಯ.
ಬೆಂಗಳೂರಿಗರ ಹೆಮ್ಮೆಯ ನಮ್ಮ ಮೆಟ್ರೋ, ಮೊದಲ ಹಂತ ಸಂಪೂರ್ಣ ಕಾಮಗಾರಿ ಮುಗಿದು, ಜೂನ್ 18 ರಂದು ಲೋಕಾರ್ಪಣೆಯಾಗಿ, ಮೊದಲ ಹಂತದ ಪೂರ್ಣ ಯೋಜನೆ ಸಾರ್ವಜನಿಕರ ಉಪಯೋಗಕ್ಕೆ ದಕ್ಕಿತ್ತು. ಆದರೆ ಉದ್ಘಾಟನೆಯಾಗಿ ಒಂದು ತಿಂಗಳೂ ಕಳೆಯದಿರುವಾಗ ಈ ಬಂದ್ ಆರಂಭವಾಗಿರುವುದು ಸಾರ್ವಜನಿಕರಲ್ಲಿ ಬೇಸರವನ್ನುಂಟುಮಾಡಿದೆ.