ಹಸಿರು ಮಾರ್ಗ: ಮೆಟ್ರೋ ಸಂಚಾರ ಪುನರಾರಂಭ
ಬೆಂಗಳೂರು, ಫೆಬ್ರವರಿ 26 : ಕ್ರಾಸ್ ಓವರ್ ಬದಲಿಸುವ ಕಾಮಗಾರಿ ಅಂದಾಜಿಗಿಂತ ಮುಂಚೆಯೇ ಮುಗಿದಿದ್ದು ಭಾನುವಾರ ಸಂಜೆಯಿಂದಲೇ ಮೂರು ನಿಲ್ದಾಣಗಳಲ್ಲಿ ನಮ್ಮ ಮೆಟ್ರೋ ರೈಲು ಸಂಚಾರ ಪುನರಾರಂಭವಾಗಿದೆ. ಈ ಮಧ್ಯೆ, ದೋಷಪೂರಿತ ಕ್ರಾಸ್ ಓವರ್ ಪೂರೈಸಿದ್ದ ಆಸ್ಟ್ರಿಯಾದ ವಿಎಇ ಕಂಪನಿಗೆ ನೋಟಿಸ್ ಜಾರಿ ಮಾಡಿದೆ.
ಕ್ರಾಸ್ ಓವರ್ ನಲ್ಲಿ ಬಿರುಕು ಕಂಡು ಬಂದ ಹಿನ್ನೆಲೆಯಲ್ಲಿ ಫೆ.24 ರ ರಾತ್ರಿ 9 ರಿಂದ ಬನಶಂಕರಿ, ಜೆಪಿನಗರ, ಯಲಚೇನಹಳ್ಳಿ ನಿಲ್ದಾಣಗಳನ್ನು ಮುಚ್ಚಿ ಕಾಮಗಾರಿ ಆರಂಭಿಸಿತ್ತು. ಆದರೆ ಕಾಮಗಾರಿ ಬೇಗ ಮುಗಿದಿದ್ದರಿಂದ ಭಾನುವಾರ ಸಂಜೆ7 ಗಂಟೆಗೆ ರೈಲು ಸಂಚಾರ ಆರಂಭಿಸಲಾಯಿತು.
ಹಳಿಯಲ್ಲಿ ಬಿರುಕು: ಮೂರು ನಿಲ್ದಾಣಗಳ ಮೆಟ್ರೋ ಸಂಚಾರ ಬಂದ್
ಭಾನುವಾರ ಈ ಮೂರು ನಿಲ್ದಾಣಗಳಿರುವ ಸ್ಥಳಕ್ಕೆ ಹೋಗಬೇಕಿದ್ದವರು ಆರ್.ವಿ. ರಸ್ತೆ ನಿಲ್ದಾಣದಲ್ಲಿ ಇಳಿದು ಬಸ್ ಹತ್ತಿದರು. ಭಾನುವಾರದಂದು ಕಡಿಮೆ ಪ್ರಯಾಣಿಕರು ಇದ್ದುದರಿಂದ ಹಾಗೂ ರಜಾ ದಿನವಾಗಿದ್ದರಿಂದ ಹೆಚ್ಚು ಸಮಸ್ಯೆಯಾಗಲಿಲ್ಲ.
ಯಲಚೇನಹಳ್ಳಿ ನಿಲ್ದಾಣದಲ್ಲಿ ಅಳವಡಿಸಿದ್ದ ಕ್ರಾಸ್ ಓವರ್ ಹಳಿಯಲ್ಲಿ ಫೆ.9 ರಂದು ಕೂದಲೆಳೆಯಷ್ಟು ಬಿರುಕು ಕಾಣಿಸಿಕೊಂಡಿತ್ತು. ಮುನ್ನೆಚ್ಚೆರಿಕೆ ಕ್ರಮವಾಗಿ ಬನಶಂಕರಿಯಿಂದ ಯಲಚೇನಹಳ್ಳಿ ನಿಲ್ದಾಣದವರೆಗೆ ಸುಮಾರು 5 ದಿನಗಳ ವರೆಗೆ ಒಂದೇ ಹಳಿಯಲ್ಲಿ ರೈಲು ಕಾರ್ಯಾಚರಣೆ ಗೊಳಿಸಲಾಗಿತ್ತು.
ಎಲ್ಲ ನಿಲ್ದಾಣಗಳ ಹಳಿಯನ್ನು ಮೆಟ್ರೋ ಅಧಿಕಾರಿಗಳು ಪರಿಶೀಲಿಸಿದ್ದು ಬೇರೆಲ್ಲೂ ಲೋಪವಿಲ್ಲ ಎಂದು ಖಚಿತಪಡಿಸಿದ್ದಾರೆ.