ಬಿಎಂಆರ್ ಸಿಎಲ್ ವಿರುದ್ಧ ನೌಕರರಿಂದ ನ್ಯಾಯಾಂಗ ನಿಂದನೆ ಆರೋಪ
ಬೆಂಗಳೂರು, ಏಪ್ರಿಲ್ 25: ಬಿಎಂಆರ್ ಸಿಎಲ್ ನೌಕರರ ಸಂಘಟನೆಗೆ ಮಾನ್ಯತೆ, ವೇತನ ಹೆಚ್ಚಳ ಸೇರಿ ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನಿಗಮದ ನೌಕರರು ಮುಷ್ಕರಕ್ಕೆ ಮತ್ತೆ ಸಜ್ಜಾಗಿದ್ದಾರೆ.
ಬಿಎಂಆರ್ ಸಿಎಲ್ ವಿರುದ್ಧ ನ್ಯಾಯಾಂಗ ನಿಂದನೆ ಆರೋಪ ಮಾಡಿರುವ ನೌಕರರ ಸಂಘಟನೆ ಹೈಕೋರ್ಟ್ ನಲ್ಲಿ ನಿಗಮದ ಅಧಿಕಾರಿಗಳ ವಿರುದ್ಧ ದೂರು ನೀಡು ನಿರ್ಧರಿಸಿದ್ದಾರೆ. ತಾತ್ಕಾಲಿಕವಾಗಿ ಮುಂದೂಡಲಾಗಿದ್ದ ಮುಷ್ಕರ ನಿರ್ಣಯ ಕೈಬಿಟ್ಟು, ಮುಷ್ಕರಕ್ಕೆ ಮತ್ತೆ ಸಜ್ಜಾಗಲು ನೌಕರರ ಸಂಘಟನೆ ನಿರ್ಧರಿಸಿದೆ.
ಬಿಎಂಆರ್ ಸಿಎಲ್ ನೌಕರರು ಮತ್ತೆ ಮುಷ್ಕರಕ್ಕೆ ಕರೆ ನೀಡುವ ಸಾಧ್ಯತೆ!
ನಿಗಮದ ಅಧಿಕಾರಿಗಳ ಜತೆ ಸಿಬ್ಬಂದಿ 1 ತಿಂಗಳ ಕಾಲ ನಡೆಸಿದ, ಸಂಧಾನ ಸಭೆ ಪೂರ್ಣ ವಿಫಲವಾಗಿದೆ. ಏ.22ರಂದು ನಡೆದ ಸಂಘದ ಪದಾಧಿಕಾರಿಗಳ ಸಭೆಯಲ್ಲಿ ನಿಗಮ ವರ್ತನೆ ಬಗ್ಗೆ ಚರ್ಚೆ ನಡೆದಿತ್ತು. ನಿಗಮದ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಹೈಕೋರ್ಟ್ ಗೆ ಮನವಿ ಸಲ್ಲಿಸಲಾಗುವುದು ಎಂದು ಸಂಘದ ಉಪಾಧ್ಯಕ್ಷ ಸೂರ್ಯನಾರಾಯಣ ಮೂರ್ತಿ ತಿಳಿಸಿದ್ದಾರೆ.
ವ್ಯರ್ಥವಾದ ಸಭೆಗಳು: ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ 2018 ಮಾ.22 ರಂದು ಮುಷ್ಕರಕ್ಕೆ ಸಿಬ್ಬಂದಿ ಸಜ್ಜಾಗಿದ್ದರು. ಆದರೆ ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ್ದ ಹೈಕೋರ್ಟ್ ಸಾರ್ವಜನಿಕರಿಗೆ ತೊಂದರೆಯಾಗುವ ಹಿನ್ನೆಲೆಯಲ್ಲಿ ಪರಸ್ಪರ ಮಾತುಕತೆ ಮೂಲಕ ಪರಿಹಾರ ಕಂಡುಕೊಳ್ಳಲು ಸೂಚಿಸಿತ್ತು. ಆದರೆ ಇದುವರೆಗೂ ಯಾವುದೇ ಪ್ರಯೋಜನವಾಗದ ಕಾರಣ ಮತ್ತೆ ಮುಷ್ಕರಕ್ಕೆ ಮುಂದಾಗಿದೆ.