ಅಪ್ಪಾಜಿ ಕ್ಯಾಂಟೀನ್ ನಲ್ಲಿ 3 ರುಪಾಯಿಗೆ ಕಾಫಿ, 5ಕ್ಕೆ ತಿಂಡಿ, 10ಕ್ಕೆ ಊಟ...
ಬೆಂಗಳೂರು, ಆಗಸ್ಟ್ 2: 'ನಮ್ಮ ಅಪ್ಪಾಜಿ ಕ್ಯಾಂಟೀನ್' ಬುಧವಾರ ಆರಂಭಗೊಂಡಿದೆ. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ಟಿ.ಎ.ಶರವಣ ಅವರ ಭಾವಚಿತ್ರವನ್ನು ನಾಮಫಲಕದಲ್ಲಿ ಬಳಸಲಾಗಿದ್ದು, 'ಹಸಿದವರಿಗಾಗಿ' ಎಂಬ ಶೀರ್ಷಿಕೆ ಕೂಡ ಇದೆ.
ತಮ್ಮ ಸ್ವಂತ ಹಣದಲ್ಲಿ ಈ ಕ್ಯಾಂಟೀನ್ ಆರಂಭಿಸಿರುವ ವಿಧಾನಪರಿಷತ್ ಸದಸ್ಯ್ ಟಿ.ಎ.ಶರವಣ ಅವರು ಒನ್ಇಂಡಿಯಾ ಕನ್ನಡದ ಜತೆ ಮಾತನಾಡಿ, ದೇವೇಗೌಡರು ಹಾಗೂ ನನ್ನ ಮಧ್ಯೆ ಆಪ್ತವಾದ ಬಾಂಧವ್ಯ ಇದೆ. ಹಿಂದೊಮ್ಮೆ ನನ್ನ ಜತೆ ಮಾತನಾಡುತ್ತಿದ್ದರು. "ಶರವಣ ಅವರೇ ವೈಕುಂಠ ಏಕಾದಶಿಯಂದು ಲಾಡು ವಿತರಿಸುತ್ತೀರಿ. ಅದೇ ರೀತಿ ಬಡವರಿಗೆ ಊಟದ ವ್ಯವಸ್ಥೆ ಮಾಡಿ ಎಂದಿದ್ದರು"
ನಮ್ಮ ಅಪ್ಪಾಜಿ ಕ್ಯಾಂಟೀನ್ ಆರಂಭಕ್ಕೆ ನಿಮಗಿದೋ ಆಹ್ವಾನ!
"ಅವರ ಮಾತಿನಂತೆ ದೇವೇಗೌಡರ ಜನ್ಮದಿನದಂದೇ ಅಪ್ಪಾಜಿ ಕ್ಯಾಂಟೀನ್ ಆರಂಭಿಸುವುದಾಗಿ ಘೋಷಿಸಿದೆ. ಅದರಂತೆಯೇ ಮೊದಲಿಗೆ ಬಸವನಗುಡಿ ವಿಧಾನಸಭಾ ಕ್ಷೇತ್ರದಲ್ಲಿ ಆರಂಭಿಸಿದ್ದೇನೆ. ಬೆಂಗಳೂರಿನಾದ್ಯಂತ ಶುರು ಮಾಡುವ ಗುರಿ ಇದೆ. ಇಂದಿರಾ ಕ್ಯಾಂಟೀನ್ ಗೂ ಇದಕ್ಕೂ ಯಾವ ಸಂಬಂಧವೂ ಇಲ್ಲ. ಜಿಎಸ್ ಟಿ ಜಾರಿಯಾದ ಮೇಲೆ ಎಲ್ಲ ದುಬಾರಿ ಆಗಿದೆ. ಇಂಥ ಸಂದರ್ಭದಲ್ಲಿ ಅಪ್ಪಾಜಿ ಕ್ಯಾಂಟೀನ್ ನಿಂದ ಸಹಾಯವಾಗುತ್ತದೆ" ಎಂದರು.
ಕರ್ನಾಟಕ ವಿಧಾನಸಭೆ ಚುನಾವಣೆ ಘೋಷಣೆಯಾಗಿ, ನೀತಿಸಂಹಿತೆ ಜಾರಿಯಾದ ಮೇಲೆ ಕ್ಯಾಂಟೀನ್ ನಡೆಸುವುದಕ್ಕೆ ತಡೆ ಎದುರಾದರೆ ಏನು ಮಾಡ್ತೀರಿ ಎಂಬ ಪ್ರಶ್ನೆಗೆ, " ಆ ಬಗ್ಗೆ ಇನ್ನೂ ಏನೂ ಯೋಚನೆ ಮಾಡಿಲ್ಲ" ಎಂದು ಶರವಣ ಹೇಳಿದರು.
ಹನುಮಂತನಗರದ ಐವತ್ತು ಅಡಿ ರಸ್ತೆಯಲ್ಲಿ ನಿರ್ಮಲಾ ಸ್ಟೋರ್ ಬಳಿ ಬಸ್ಸುಗಳು ತಿರುವು ತೆಗೆದುಕೊಳ್ಳುವ ಜಾಗದಲ್ಲಿ ಅಪ್ಪಾಜಿ ಕ್ಯಾಂಟೀನ್ ಆರಂಭವಾಗಿದ್ದು, ಈ ಬಗ್ಗೆ ಒನ್ಇಂಡಿಯಾ ಕನ್ನಡಕ್ಕೆ ದೊರೆತಿರುವ ವಿವರಗಳು ಇಂತಿವೆ.
ಹತ್ತು ಲಕ್ಷ ರುಪಾಯಿ ಆರಂಭಿಕ ಖರ್ಚು
ಬಸವನಗುಡಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಆರಂಭಿಸಿರುವ ಈ ಕ್ಯಾಂಟೀನ್ ಗೆ ಹತ್ತು ಲಕ್ಷ ರುಪಾಯಿ ಖರ್ಚಾಗಿದೆ.
ತಿಂಗಳ ಖರ್ಚಿನ ಅಂದಾಜಿಲ್ಲ
ತಿಂಗಳಿಗೆ ಎಷ್ಟು ಖರ್ಚು ಬರಬಹುದು ಎಂಬ ಬಗ್ಗೆ ಈಗಲೇ ಯಾವುದೇ ಅಂದಾಜಿಲ್ಲ. ತಿಂಗಳ ನಂತರ ಗೊತ್ತಾಗುತ್ತದೆ. ರೈತರಿಂದಲೇ ನೇರವಾಗಿ ದವಸ-ಧಾನ್ಯ-ತರಕಾರಿ ಖರೀದಿಸುವ ಚಿಂತನೆ.
ದಿನಕ್ಕೆ ಇಷ್ಟೇ ಮಂದಿ ಎಂಬ ಮಿತಿಯಿಲ್ಲ
ದಿನಕ್ಕೆ ಇಷ್ಟೇ ಮಂದಿಗೆ ತಿಂಡಿ- ಊಟ ಎಂಬ ಮಿತಿ ಹಾಕಿಕೊಂಡಿಲ್ಲ.
ಹನ್ನೆರಡು ಮಂದಿ ಕೆಲಸಕ್ಕೆ
ಮೂವರು ಅಡುಗೆ ತಯಾರಕರು, ನಾಲ್ವರು ಸಹಾಯಕರು, ಐವರು ಸ್ವಚ್ಛತಾ ಕೆಲಸಕ್ಕಾಗಿ ನೇಮಕ ಮಾಡಲಾಗಿದೆ.
ಊಟ-ತಿಂಡಿಯ ದರದ ವಿವರ
ತಟ್ಟೆ ಇಡ್ಲಿ/ ವಡೆ/ ಖಾರಾಬಾತ್/ ಕೇಸರಿ ಬಾತ್ ಗೆ 5 ರುಪಾಯಿ, ಕಾಫಿ/ಟೀಗೆ 3 ರುಪಾಯಿ, ಮುದ್ದೆ-ಬಸ್ಸಾರು/ ಅನ್ನ-ಸಾಂಬಾರ್/ ರೈಸ್ ಬಾತ್ ಗೆ 10 ರುಪಾಯಿ ನಿಗದಿ. ಆದರೆ ಪಾರ್ಸೆಲ್ ತೆಗೆದುಕೊಂಡು ಹೋಗಲು ಅವಕಾಶ ಇಲ್ಲ.
ಆಗಸ್ಟ್ 2ರಂದು ಉಚಿತ ಮುದ್ದೆ ಊಟದ ವ್ಯವಸ್ಥೆ
ಆಗಸ್ಟ್ 2ರಂದು ಆರಂಭಿಕ ದಿನದ ಪ್ರಯುಕ್ತ ಒಂದರಿಂದ ಎರಡು ಸಾವಿರ ಮಂದಿಗೆ ಉಚಿತ ಮುದ್ದೆ ಊಟ. ಮಹಿಳೆಯರಿಗೆ ಉಚಿತವಾಗಿ ಸೀರೆ ವಿತರಣೆ. ಅದೇ ರೀತಿ ಆಟೋ ಚಾಲಕರಿಗೆ ಸಮವಸ್ತ್ರ ಹಾಗೂ ಹಿರಿಯ ನಾಗರಿಕರಿಗೆ ಕಂಬಳಿ ವಿತರಣೆ ಮಾಡಲಾಯಿತು.