ಮೈಸೂರು ಪಾಲಿಕೆ ಕಾರ್ಪೋರೇಟರ್ ಪುತ್ರಿ ಬೆಂಗ್ಳೂರಲ್ಲಿ ಆತ್ಮಹತ್ಯೆ
ಬೆಂಗಳೂರು, ನವೆಂಬರ್ 2: ಮೈಸೂರು ಪಾಲಿಕೆ ಕಾರ್ಪೋರೇಟರ್ ನಾಗಭೂಷಣ್ ಅವರ ಪುತ್ರಿ ಶುಕ್ರವಾರ ರಾತ್ರಿ ಬೆಂಗಳೂರಿನ ಹೆಚ್ಎಸ್ಆರ್ ಲೇಔಟ್ ನಲ್ಲಿರುವ ಗಂಡನ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮೈಸೂರು ಕಾರ್ಪೋರೇಟರ್ ನಾಗಭೂಷಣ್ ಪುತ್ರಿ ವನಿತಾ ಆತ್ಮಹತ್ಯೆ ಮಾಡಿಕೊಂಡಿರುವ ನವವಿವಾಹಿತೆ. ಆರು ತಿಂಗಳ ಹಿಂದೆಯಷ್ಟೇ ತಮಿಳುನಾಡು ಮೂಲದ ಟೆಕ್ಕಿ ವಸಂತ್ ಎಂಬವರ ಜೊತೆ ಮದ್ವೆಯಾಗಿದ್ದು, ಬೆಂಗಳೂರಿನ ಹೆಚ್ಎಸ್ಆರ್ ಲೇಔಟ್ ಗಂಡನ ಮನೆಯಲ್ಲಿ ವಾಸವಾಗಿದ್ದರು. ಆದರೆ, ವನಿತಾ ಶುಕ್ರವಾರ ಡೆತ್ ನೋಟ್ ಬರೆದಿಟ್ಟು ನೇಣು ಹಾಕಿಕೊಂಡು ಮಾಡಿಕೊಂಡಿದ್ದಾರೆ.
ಮೃತ ವನಿತಾ ಸಾಯುವ ಮುಂಚೆ 4 ಪುಟದ ಡೆತ್ನೋಟ್ ಬರೆದಿದ್ದಾರೆ. ನನ್ನ ಅತ್ತೆ ಗಾಯತ್ರಿ ಪ್ರತಿನಿತ್ಯ ಮನೆಯಲ್ಲಿ ಕಿರುಕುಳ ನೀಡುತಿದ್ದಾರೆ. ಅಪ್ಪನ ಮನೆಯಿಂದ ವರದಕ್ಷಿಣೆ ತರುವಂತೆ ಪೀಡಿಸುತ್ತಾರೆ.
ಅಷ್ಟೇ ಅಲ್ಲದೇ ಸರಿಯಾಗಿ ಊಟ ತಿಂಡಿಯನ್ನು ಸಹ ನೀಡದೆ ಹಿಂಸೆ ನೀಡುತ್ತಿದ್ದಾರೆ. ಇದರಿಂದ ನಾನು ಬೇಸತ್ತು ಅತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಸ್ಥಳಕ್ಕೆ ಹೆಚ್ಎಸ್ಆರ್ ಲೇಔಟ್ ಠಾಣೆ ಪೊಲೀಸರು ಭೇಟಿ ನೀಡಿ ಮೃತ ವನಿತಾಳ ಗಂಡ ವಸಂತ್ ಮತ್ತು ಅತ್ತೆ ಗಾಯತ್ರಿಯನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.