ಡಿಕೆ ರವಿಯದ್ದು ಆತ್ಮಹತ್ಯೆ : ಒಪ್ಪಲು ತಯಾರಿಲ್ಲ ತಾಯಿ ಗೌರಮ್ಮ
ಸಿಬಿಐ ಏನೇ ವರದಿ ನೀಡಲಿ ನನ್ನ ಮಗ ಆತ್ಮಹತ್ಯೆ ಮಾಡಿಕೊಂಡಿಲ್ಲ. ಆತ್ಮಹತ್ಯೆ ಮಾಡಿಕೊಂಡಿದ್ದರೆ ಅರ್ಧ ಗಂಟೆಯಲ್ಲೇ ಅವರ ನಾಲಿಗೆ ಹೊರಚಾಚಬೇಕಿತ್ತು. ನನ್ನ ಮಗನ ದಿಟ್ಟತನವನ್ನು ಸಹಿಸದವರು ಆತನ ಕೊಲೆ ಮಾಡಿದ್ದಾರೆ ಅಂತಾರೆ ತಾಯಿ ಗೌರಮ್ಮ.
ಬೆಂಗಳೂರು, ನವೆಂಬರ್ 24 : "ನನ್ನ ಮಗನ ಸಾವು ಸಂಭವಿಸಿದ್ದು ಆತ್ಮಹತ್ಯೆಯಿಂದ ಅಲ್ಲ. ನನ್ನ ಮಗ ಆತ್ಮಹತ್ಯೆ ಮಾಡಿಕೊಳ್ಳುವಂಥವನೇ ಅಲ್ಲ. ನನ್ ಮಗ ಕೊಲೆಯಾಗಿದ್ದಾನೆ. ಇದು ಆ ಭಗವಂತ ಸತ್ಯನಾರಾಯಣನಿಗೂ ಗೊತ್ತು" ಎಂದು ಸಾವಿಗೀಡಾಗಿರುವ ಡಿಕೆ ರವಿ ಅವರ ತಾಯಿ ಗೌರಮ್ಮ ಸಿಬಿಐ ಸಲ್ಲಿಸಿರುವ ವರದಿಯನ್ನು ಕಸದಬುಟ್ಟಿಗೆ ಎಸೆದಿದ್ದಾರೆ.
ಮರಳು ಗಣಿಗಾರಿಕೆ ಕುಳರ ವಿರುದ್ಧ ಸಿಂಹಸ್ವಪ್ನವಾಗಿದ್ದ ಐಎಎಸ್ ಅಧಿಕಾರಿ ಡಿಕೆ ರವಿ ಅವರ ಸಾವು ಸಂಭವಿಸಿದ್ದು ಆತ್ಮಹತ್ಯೆಯಿಂದಲೇ ಎಂದು ಸಿಬಿಐ ತನ್ನ ಅಂತಿಮ ವರದಿಯಲ್ಲಿ ಪ್ರಸ್ತಾಪಿಸುತ್ತಿದ್ದಂತೆಯೆ, ಕರುಳ ಕುಡಿಯನ್ನು ಕಳೆದುಕೊಂಡು ಇಂದಿಗೂ ಕಣ್ಣೀರಿಡುತ್ತಿರುವ ಗೌರಮ್ಮ ಅವರ ಮನದಾಳದಿಂದ ಬಂದ ಮಾತುಗಳಿವು.
2015ರ ಮಾರ್ಚ್ 16ರಂದು ಬೆಂಗಳೂರಿನ ಕೋರಮಂಗಲದಲ್ಲಿರುವ ಸೇಂಟ್ ಜಾನ್ಸ್ ವುಡ್ಸ್ ಅಪಾರ್ಟ್ಮೆಂಟಿನಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಅವರ ದೇಹ ಪತ್ತೆಯಾಗಿತ್ತು. ಕೋಲಾರದ ಜಿಲ್ಲಾಧಿಕಾರಿಯಾಗಿದ್ದಾಗ ಮರಳು ದಂಧೆಕೋರರಿಗೆ ಮತ್ತು ಬೆಂಗಳೂರಿನಲ್ಲಿ ವಾಣಿಜ್ಯ ತೆರಿಗೆ ಇಲಾಖೆಯಲ್ಲಿ ತೆರಿಗೆ ವಂಚಕರ ಬೆನ್ನತ್ತಿದ್ದ ರವಿ ಸಾವಿನ ಸುತ್ತ ಅನುಮಾನದ ಹುತ್ತ ಕಟ್ಟಿಕೊಂಡಿತ್ತು. [ಡಿ.ಕೆ.ರವಿ ಸಾವು ಆತ್ಮಹತ್ಯೆ: ಅಂತಿಮ ಶರಾ ಬರೆದ ಸಿಬಿಐ]
ಫ್ಯಾನಿಗೆ ಜೋತುಬಿದ್ದಿದ್ದ ರವಿಯವರ ದೇಹವನ್ನು ಹೆಣವನ್ನು ಕೆಳಗೆ ಇಳಿಸಿ ಕೆಲ ಗಂಟೆಗಳೂ ಆಗಿರಲಿಲ್ಲ, ಅಷ್ಟರಲ್ಲಾಗಲೇ ಇದು ಖಂಡಿತ 'ಆತ್ಮಹತ್ಯೆ' ಎಂಬಂತಹ ಮಾತನ್ನು ಅಂದಿನ ಬೆಂಗಳೂರು ನಗರ ಕಮಿಷನರಾಗಿದ್ದ ಎಂಎನ್ ರೆಡ್ಡಿಯವರು ಆಡಿ ವಿವಾದವನ್ನು ಮೈಮೇಲೆಳೆದುಕೊಂಡಿದ್ದರು, ಅಲ್ಲದೆ ರವಿ ಸಾವಿನ ಬಗ್ಗೆ ಮತ್ತಷ್ಟು ಅನುಮಾನಗಳೇಳುವಂತೆ ಮಾಡಿದ್ದರು. [ಡಿಕೆ ರವಿ ಸಾವಿನ ಸುದ್ದಿ ಕೇಳಿ ಸಿಹಿ ಹಂಚಿದ ಶಾಸಕರಾರು?]
ನನ್ನ ಮಗ ಆತ್ಮಹತ್ಯೆ ಮಾಡಿಕೊಂಡಿಲ್ಲ
ಕಾಂಗ್ರೆಸ್ ಸರಕಾರ ಏನೇ ಹೇಳಲಿ, ಸಿಬಿಐ ಏನೇ ವರದಿ ನೀಡಲಿ ನನ್ನ ಮಗ ಆತ್ಮಹತ್ಯೆ ಮಾಡಿಕೊಂಡಿಲ್ಲ. ಆತ್ಮಹತ್ಯೆ ಮಾಡಿಕೊಂಡಿದ್ದರೆ ಅರ್ಧ ಗಂಟೆಯಲ್ಲೇ ಅವರ ನಾಲಿಗೆ ಹೊರಚಾಚಬೇಕಿತ್ತು. ಆದರೆ ಹಾಗೇನೂ ಆಗಿರಲಿಲ್ಲ. ನನ್ನ ಮಗನ ದಿಟ್ಟತನವನ್ನು ಸಹಿಸದವರು ಅವನ ಕೊಲೆ ಮಾಡಿದ್ದಾರೆ ಎಂದೇ ಗೌರಮ್ಮನವರು ಕಣ್ಣೀರಿಡುತ್ತ ಹೇಳಿದರು. [ಮೃತ ಡಿಕೆ ರವಿಯ ಖಾಸಗಿ ವಿಷಯಗಳು ಬಹಿರಂಗ]
ರವಿ ಪತ್ನಿ ಕುಸುಮಾ ವಿರುದ್ಧ ಆಕ್ರೋಶ
ಡಿಕೆ ರವಿ ಹೆಂಡತಿ ಕುಸುಮಾ ಮತ್ತು ಅವರ ತಂದೆ ಹನುಮಂತರಾಯಪ್ಪ ಅವರ ವಿರುದ್ಧವೂ ಗೌರಮ್ಮ ಆಕ್ರೋಶ ವ್ಯಕ್ತಪಡಿಸಿದರು. ನನ್ನ ಮನೆಯನ್ನು, ನನ್ನ ಮಗನನ್ನು ಅವರೇ ಹಾಳು ಮಾಡಿದರು. ರವಿ ಸತ್ತಾಗ ಬಂದಿದ್ದು, ಇದುವರೆಗೂ ಇತ್ತ ಸುಳಿದಿಲ್ಲ ಎಂದು ಗೌರಮ್ಮ ಎದೆಬಡಿದುಕೊಂಡು ಮಾಧ್ಯಮದೆದಿರು ಗೋಳುತೋಡಿಕೊಂಡರು. [ಸೊಸೆ ಕುಸುಮಾ ಬಗ್ಗೆ ರವಿ ತಾಯಿ ಗೌರಮ್ಮ ಹೇಳಿದ್ದೇನು?]
ಸಿದ್ದರಾಮಯ್ಯ ಕೊನೆಗೂ ಮಣಿದಿದ್ದರು
ಮಗನ ಸಾವಿನ ರಹಸ್ಯ ಬಯಲಾಗಬೇಕು ಎಂದು ರವಿ ತಂದೆತಾಯಿ ಧರಣಿ ಕುಳಿತಿದ್ದರು, ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆಯೊಡ್ಡಿದ್ದರು. ವಿರೋಧ ಪಕ್ಷದವರು ತನಿಖೆಯಾಗಬೇಕೆಂದು ಪಟ್ಟುಹಿಡಿದಿದ್ದರು. ಕೊನೆಗೆ ಇಡೀ ನಾಡೇ ಸಿಬಿಐನಿಂದ ತನಿಖೆಯಾಗಬೇಕು ಒಕ್ಕೊರಲಿನಿಂದ ಕೂಗಿದಾಗ ಸಿದ್ದರಾಮಯ್ಯ ಮಣಿದು ಬಲವಂತದಿಂದಲೇ ತನಿಖೆಗೆ ಒಪ್ಪಿಸಿದ್ದರು. [ಡಿಕೆ ರವಿ ಕಳಿಸಿದ ಕೊನೆ ವಾಟ್ಸಪ್ ಸಂದೇಶದಲ್ಲಿ ಏನಿದೆ?]
ಅನೈತಿಕ ಸಂಬಂಧದ ವಾಸನೆ
ರವಿಯವರ ಸಾವಿನ ಹಿಂದೆ ಅನೈತಿಕ ಸಂಬಂಧದ ವಾಸನೆ ಇರಬಹುದಾ ಎಂಬ ಗಾಳಿಮಾತು ಕೂಡ ಸುತ್ತಾಡುತ್ತಿತ್ತು. ಮತ್ತೊಬ್ಬ ಐಎಎಸ್ ಅಧಿಕಾರಿ ಕೈಕೊಟ್ಟಿದ್ದರಿಂದ ಮನನೊಂದು ಡಿಕೆ ರವಿ ಸಾವಿಗೆ ಶರಣಾದರು ಎಂಬ ಮಾತುಗಳಿಗೆ ರೆಕ್ಕೆಪುಕ್ಕ ಬಂದಿದ್ದವು. ಕಡೆಗೆ ಅದೆಲ್ಲ ಗಾಳಿಸುದ್ದಿ ಎಂಬುದು ಮೇಲ್ನೋಟಕ್ಕೆ ಸಾಬೀತಾಗಿತ್ತು. ["ಡಿಕೆ ರವಿ ಸಂಸಾರದಲ್ಲಿ ಯಾವುದೇ ತೊಂದರೆ ಇರ್ಲಿಲ್ಲ"]
ಕಠೋರ ಸತ್ಯ ಮಣ್ಣುಪಾಲಾಯಿತಾ?
ಡಿಕೆ ರವಿಯವರು ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿದ್ದೇ ನಿಜಾನಾ? ಅಥವಾ ಕಠೋರ ಸತ್ಯವೊಂದನ್ನು ತುಮಕೂರು ಜಿಲ್ಲೆಯಲ್ಲಿರುವ ದೊಡ್ಡಕೊಪ್ಪಲು ಗ್ರಾಮದಲ್ಲಿರುವ ಗೋರಿಯಲ್ಲಿಯೇ ಸಮಾಧಿ ಮಾಡಲಾಯಿತಾ? [ಎಲ್ಲಿಯ ಅಕ್ರಮ ಲಾಟರಿ ದಂಧೆ, ಎಲ್ಲಿಯ ಡಿಕೆ ರವಿ ಸಾವು?]