ಹಜ್ ಘರ್ಗೆ ಟಿಪ್ಪು ಸುಲ್ತಾನ್ ಹೆಸರು: ವಿವಾದಕ್ಕೆ ಮುನ್ನುಡಿ?
ಬೆಂಗಳೂರು, ಜೂನ್ 22: ನಗರದ 'ಹಜ್ ಘರ್'ಗೆ ಟಿಪ್ಪು ಸುಲ್ತಾನ್ ಹೆಸರು ಇಡುವಂತೆ ಪ್ರಸ್ತಾಪ ಇದ್ದು ಈ ಬಗ್ಗೆ ಚರ್ಚಿಸಿ ನಿರ್ಧರಿಸಲಾಗುವುದು ಎಂದು ಸಚಿವ ಜಮೀರ್ ಅಹ್ಮದ್ ಹೇಳಿದ್ದಾರೆ. ಈ ಮೂಲಕ ಮತ್ತೊಂದು ವಿವಾದಕ್ಕೆ ಮುನ್ನುಡಿ ಬರೆದಂತೆ ಕಾಣುತ್ತಿದೆ.
ಹಜ್ ಭವನ ಒಂದು ಸ್ವಾಯತ್ತ ಸಂಸ್ಥೆ ಇದಕ್ಕೆ ಟಿಪ್ಪು ಸುಲ್ತಾನ್ ಹೆಸರು ಇಡಬೇಕು ಎಂದು ಮುಸ್ಲಿಂ ಮುಖಂಡರು ಒತ್ತಾಯಿಸಿದ್ದಾರೆ ಹಾಗಾಗಿ ಈ ಬಗ್ಗೆ ಪಕ್ಷದ ಹಿರಿಯರಲ್ಲಿ ಚರ್ಚೆ ನಡೆಸಲು ನಿರ್ಧರಿಸಿದ್ದೇನೆ ಎಂದು ಆಹಾರ ಮತ್ತು ನಾಗರೀಕ ಹಾಗೂ ವಕ್ತ್ ಸಚಿವರೂ ಆಗಿರುವ ಜಮೀರ್ ಅಹ್ಮದ್ ಹೇಳಿದ್ದಾರೆ.
ನಾನು ಬೇಕೆಂದೇ ಕನ್ನಡ ಮಾತಾಡದಿದ್ರೆ ಗಲ್ಲಿಗೇರಿಸಿ: ಜಮೀರ್ ಅಹ್ಮದ್
ಹಜ್ ಘರ್ಗೆ ಟಿಪ್ಪು ಹೆಸರಿಡುವ ಬಗ್ಗೆ ಬಿಜೆಪಿ ವಿರೋಧ ಮಾಡುವುದಿಲ್ಲ ಎಂಬ ವಿಶ್ವಾಸ ವಿದೆ ಎಂದಿರುವ ಅವರು, ಟಿಪ್ಪು ಜಯಂತಿ ಆಚರಣೆ ವಿಚಾರವೇ ಬೇರೆ, ಈ ವಿಚಾರವೇ ಬೇರೆ ಎಂದು ಹೇಳಿದ್ದಾರೆ.
ಕಳೆದ ವರ್ಷವೇ ಈ ಪ್ರಸ್ತಾಪ ಬಂದಿತ್ತು ಎಂದ ಅವರು, ಹಿರಿಯರಾದ ಕುಮಾರಸ್ವಾಮಿ, ಪರಮೇಶ್ವರ್, ಮಲ್ಲಿಕಾರ್ಜುನ ಖರ್ಗೆ, ಅವರುಗಳೊಂದಿಗೆ ಚರ್ಚಿಸಿ ಈ ನಿರ್ಣಯ ತೆಗೆದುಕೊಳ್ಳುತ್ತೇನೆ ಎಂದಿದ್ದಾರೆ.
ಜಮೀರ್ ಅಹಮದ್ ಸಿದ್ದರಾಮಯ್ಯ ಕಾರಿಗೆ ಬೇಡಿಕೆ ಇಟ್ಟಿದ್ದೇಕೆ?
ಈಗಾಗಲೇ ಟಿಪ್ಪು ಸುಲ್ತಾನ್ ಜಯಂತಿ ಆಚರಿಸಿತ್ತಿರುವುದಕ್ಕೆ ಬಿಜೆಪಿ ಭಾರಿ ವಿರೋಧ ವ್ಯಕ್ತಪಡಿಸುತ್ತಿದೆ. ಈಗ ಟಿಪ್ಪು ಹೆಸರು ಇಡುತ್ತಿರುವುದಕ್ಕೂ ಬಿಜೆಪಿ ವಿರೋಧ ವ್ಯಕ್ತಪಡಿಸಬಹುದು ಅಥವಾ ಹೆಸರು ಬದಲಾವಣೆ ನೆಪದಲ್ಲಿ ಟಿಪ್ಪು ಜಯಂತಿ ವಿವಾದ ಮತ್ತೆ ಮುನ್ನೆಲೆಗೆ ಬರುವ ಸಾಧ್ಯತೆಯೂ ಇದೆ.