ಬಿಎಂಟಿಸಿ ಬಸ್ಸಿನಲ್ಲಿ ಕೊಲೆ, ಸಿಕ್ಕಿಬಿದ್ದ ಅಪ್ಪ, ಇಬ್ಬರು ಮಕ್ಕಳು!
ಬೆಂಗಳೂರು, ಜೂನ್ 11 : ಬಿಎಂಟಿಸಿ ಬಸ್ಸಿನಲ್ಲಿ ನಡೆದ ಹತ್ಯೆ ಪ್ರಕರಣದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಡಕಾಯಿತರ ಕುರಿತು ಪೊಲೀಸರಿಗೆ ಸುಳಿವು ನೀಡಲು ಹೊರಟಿದ್ದ ಕಾರಣಕ್ಕೆ ಚಲಿಸುತ್ತಿದ್ದ ಬಸ್ಸಿನಲ್ಲಿಯೇ ವ್ಯಕ್ತಿಯನ್ನು ಹತ್ಯೆ ಮಾಡಲಾಗಿತ್ತು.
ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ಪಾಲಬ್ರಹ್ಮಯ್ಯ (60), ಆತನ ಮಕ್ಕಳಾದ ಅಭಿಷೇಕ್ (32), ಧನರಾಜ್ (24) ಬಂಧಿತ ಆರೋಪಿಗಳು. ಮೂವರು ಸೇರಿ ಫೆ.21ರಂದು ಕೋನಪ್ಪನ ಅಗ್ರಹಾರ ಬಳಿ ಬಿಎಂಟಿಸಿ ಬಸ್ಸಿನಲ್ಲಿ ಸುರೇಶ್ (46) ಹತ್ಯೆ ಮಾಡಿದ್ದರು.
ಬಿಎಂಟಿಸಿ ಬಸ್ಗೆ ನುಗ್ಗಿ ವ್ಯಕ್ತಿಗೆ ಚಾಕುವಿನಿಂದ ಇರಿದು ಕೊಲೆ
ಹತ್ಯೆಯಾದ ಸುರೇಶ್ ಆರೋಪಿ ಪಾಲಬ್ರಹ್ಮಯ್ಯ ನಾದಿನಿಯ ಗಂಡ. 1991ರಿಂದ ಇಬ್ಬರೂ ಒಟ್ಟಾಗಿ ಡಕಾಯಿತಿ ಮಾಡುತ್ತಿದ್ದರು. ಹಣ ಹಂಚಿಕೊಳ್ಳುವ ವಿಚಾರಕ್ಕೆ ಇಬ್ಬರ ನಡುವೆ ಜಗಳ ನಡೆದು ಬೇರೆ-ಬೇರೆಯಾಗಿದ್ದರು.
ಇದರಿಂದ ಕೋಪಗೊಂಡಿದ್ದ ಪಾಲಬ್ರಹ್ಮಯ್ಯ ಗುಡಿಯಾತ್ತಮ್ ಪೊಲೀಸರಿಗೆ ಸುರೇಶ್ನನ್ನು ಹಿಡಿದುಕೊಟ್ಟಿದ್ದ. ಸುರೇಶ್ ಸಹೋದರ ಸಾಯಿ ಕುಮಾರ್ ಕಡಪ ಪೊಲೀಸರಿಗೆ ಮಾಹಿತಿ ನೀಡಿ ಪಾಲಬ್ರಹ್ಮಯ್ಯ ಬಂಧಿಸಲು ಸಹಕಾರ ನೀಡಿದ್ದ.
ಬಿಎಂಟಿಸಿ ದಿನದ ಪಾಸಿನ ಮೇಲೆ 10 ರೂ. ಕ್ಯಾಷ್ ಬ್ಯಾಕ್
ಇದರಿಂದಾಗಿ ಇಬ್ಬರ ನಡುವೆ ದ್ವೇಷ ಉಂಟಾಗಿತ್ತು. ಪಾಲಬ್ರಹ್ಮಯ್ಯನನ್ನು ಪೊಲೀಸರು ಬಂಧಿಸಿದಾಗ ಸುರೇಶ್ ಊರಿನಲ್ಲಿ ಅವರ ಬಗ್ಗೆ ಅಪಪ್ರಚಾರ ಮಾಡಿದ್ದ. ಇದರಿಂದಾಗಿ ಪಾಲಬ್ರಹ್ಮಯ್ಯ ಕೋಪಗೊಂಡಿದ್ದರು. ಸುರೇಶ್ ತಮ್ಮ ಬಗ್ಗೆ ಪೊಲೀಸರಿಗೆ ಸುಳಿವು ನೀಡಲು ಹೋಗುತ್ತಿದ್ದಾನೆ ಎಂಬುದನ್ನು ಅರಿತಿದ್ದ ಅವರು ಮಕ್ಕಳ ಜೊತೆ ಸೇರಿ ಸುರೇಶ್ ಹತ್ಯೆ ಮಾಡಿದ್ದರು.
ಸಿಕ್ಕಿಬಿದ್ದದ್ದು ಹೇಗೆ? :ಸುರೇಶ್ ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿದ್ದ ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಮೂರು ತಂಡಗಳನ್ನು ರಚನೆ ಮಾಡಿಕೊಂಡು ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದರು. ಮೊಬೈಲ್ ಕಳವು ಮಾಡಲು ಪ್ರಯತ್ನ ನಡೆಸುತ್ತಿದ್ದಾಗ ಪೊಲೀಸರ ಕೈಗೆ ಸಿಕ್ಕಿಬಿದ್ದರು. ಠಾಣೆಗೆ ಕರೆದುಕೊಂಡು ಬಂದು ವಿಚಾರಣೆ ನಡೆಸಿದಾಗ ಕೊಲೆ ರಹಸ್ಯ ಬಯಲಾಗಿದೆ.