ಛಾಪಾ ಕಾಗದ ಹಗರಣದ ರೂವಾರಿ ಕರೀಂ ಲಾಲಾ ತೆಲಗಿ ನಿಧನ
ಬೆಂಗಳೂರು, ಅಕ್ಟೋಬರ್ 26: ಬಹುಕೋಟಿ ಛಾಪಾ ಕಾಗದ ಹಗರಣದ ರೂವಾರಿ ಕರೀಂ ಲಾಲಾ ತೆಲಗಿ (56) ಗುರುವಾರ ಬಹು ಅಂಗ ವೈಫಲ್ಯದಿಂದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾನೆ.
ಛಾಪಾ ಕಾಗದ ಹಗರಣದ ರೂವಾರಿ ಕರೀಂ ಲಾಲ್ ತೆಲಗಿ ಆರೋಗ್ಯ ಸ್ಥಿತಿ ಗಂಭೀರ
ಬೆಳಗಾವಿಯ ಖಾನಾಪುರ ಮೂಲದ ತೆಲಗಿ ಮೆದುಳುಜ್ವರದಿಂದ ಬಳಲುತ್ತಿದ್ದ. ಕಳೆದ ಏಳೆಂಟು ದಿನದಿಂದ ಕೃತಕ ಉಸಿರಾಟ ವ್ಯವಸ್ಥೆ ಅಳವಡಿಸಲಾಗಿತ್ತು. ಆತನ ಸಂಬಂಧಿಕರು ಆಸ್ಪತ್ರೆಯಲ್ಲಿ ಜಮೆಯಾಗಿದ್ದರು. ಕಳೆದ ಸೋಮವಾರ ರಾತ್ರಿಯೇ ತೆಲಗಿ ಮೃತಪಟ್ಟಿರುವುದಾಗಿ ಕೆಲವು ಮಾಧ್ಯಮಗಳಲ್ಲಿ ವರದಿಯಾಗಿತ್ತು. ಆತನ ಕುಟುಂಬ ಮೂಲಗಳು ಸುದ್ದಿಯನ್ನು ನಿರಾಕರಿಸಿದ್ದವು.
ಬಹುಕೋಟಿ ನಕಲಿ ಛಾಪಾ ಕಾಗದ ಹಗರಣದಲ್ಲಿ ಕರೀಂ ಲಾಲಾ ತೆಲಗಿಯನ್ನು ಬಂಧಿಸಲಾಗಿತ್ತು. ಆತ ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ಇದ್ದ. ಆತನ ವಿರುದ್ಧದ ಇನ್ನೂ ಕೆಲ ಪ್ರಕರಣಗಳು ವಿಚಾರಣೆ ಹಂತದಲ್ಲಿವೆ. ಡಿಐಜಿ ರೂಪಾ ಅವರು ಪರಪ್ಪನ ಅಗ್ರಹಾರದಲ್ಲಿ ಶಶಿಕಲಾಗೆ ರಾಜಾತಿಥ್ಯ ದೊರೆಯುತ್ತಿದೆ ಎಂಬ ವರದಿ ಸಲ್ಲಿಸಿದ್ದರು. ಅದೇ ಸಂದರ್ಭದಲ್ಲಿ ತೆಲಗಿಗೆ ನೀಡಿದ್ದ ಕೆಲ ಸೌಕರ್ಯಗಳನ್ನು ಕೂಡ ತೆಗೆಯಲಾಗಿತ್ತು.
ಆ ನಂತರ ಆತನ ಆರೋಗ್ಯ ಸ್ಥಿತಿ ಮತ್ತಷ್ಟು ಬಿಗಡಾಯಿಸಿತ್ತು ಎಂದು ಮೂಲಗಳು ತಿಳಿಸಿವೆ. ನಕಲಿ ಛಾಪಾ ಕಾಗದ ಹಗರಣದಲ್ಲಿ 2006 ರಿಂದ ಜೈಲಿನಲ್ಲಿ ತೆಲಗಿ ಶಿಕ್ಷೆ ಅನುಭವಿಸುತ್ತಿದ್ದ. 30 ವರ್ಷ ಜೈಲು ಶಿಕ್ಷೆ ವಿಧಿಸಲಾಗಿತ್ತು. ಈಗ 11 ವರ್ಷಗಳ ಶಿಕ್ಷೆಯು ಪೂರ್ಣಗೊಂಡಿದೆ