ಮಾ.8ರಿಂದ ಅಪಘಾತಕ್ಕೆ ತುತ್ತಾದವರಿಗೆ ಉಚಿತ ತುರ್ತು ಚಿಕಿತ್ಸೆ
ಬೆಂಗಳೂರು,ಮಾರ್ಚ್,05: ಆರೋಗ್ಯ ಮತ್ತು ಕುಟುಂಬ ಇಲಾಖೆಯು ರಾಷ್ಟ್ರದಲ್ಲೇ ಪ್ರಥಮ ಬಾರಿಗೆ ರಸ್ತೆ ಅಪಘಾತದ ಗಾಯಾಳುಗಳಿಗೆ ಉಚಿತ ತುರ್ತು ಚಿಕಿತ್ಸೆ ಒದಗಿಸುವ 'ಮುಖ್ಯಮಂತ್ರಿಗಳ ಸಾಂತ್ವನ ಯೋಜನೆಗೆ' ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಗರದ ವಿಧಾನ ಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಮಾರ್ಚ್ 8ರ ಮಂಗಳವಾರದಂದು ಚಾಲನೆ ನೀಡಲಿದ್ದಾರೆ.
ನೆಲಮಂಗಲದಲ್ಲಿ ನಡೆದ ಅಪಘಾತದಲ್ಲಿ ಸಾವನ್ನಪ್ಪಿ, ತನ್ನ ಕಣ್ಣುಗಳನ್ನು ದಾನ ಮಾಡುವ ಮೂಲಕ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದ ಹರೀಶ್ ನೆನಪಿಗಾಗಿ 'ಮುಖ್ಯಮಂತ್ರಿಗಳ ಸಾಂತ್ವನ ಯೋಜನೆ'ಯನ್ನು 'ಮುಖ್ಯಮಂತ್ರಿಗಳ ಹರೀಶ್ ಸಾಂತ್ವನ ಯೋಜನೆ' ಎಂದು ಬದಲಾಯಿಸಲು ಸರ್ಕಾರ ನಿರ್ಧರಿಸಿದೆ.[ಕರಾಳ ಶುಕ್ರವಾರ, ಅಪಘಾತಕ್ಕೆ 18 ಜನರು ಬಲಿ]
ಈ ನೂತನ ಯೋಜನಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮೂಲ ಸೌಲಭ್ಯ ಅಭಿವೃದ್ಧಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಹಾಗೂ ಹಜ್ ಸಚಿವ ಆರ್.ರೋಷನ್ ಬೇಗ್ ವಹಿಸಲಿದ್ದಾರೆ. ಈ ಸಂದರ್ಭದಲ್ಲಿ ರಾಜ್ಯ ವೈದ್ಯಕೀಯ ಶಿಕ್ಷಣ ಸಚಿವರಾದ ಡಾ|| ಶರಣ ಪ್ರಕಾಶ್ ಆರ್. ಪಾಟೀಲ್ ಅವರು ನೂತನ ಯೋಜನೆಗೆ ಸಂಬಂಧಿಸಿದ ಕೈಪಿಡಿಯನ್ನು ಲೋಕಾರ್ಪಣೆಗೊಳಿಸಲಿದ್ದಾರೆ.[ವೇಗಯುತ ದ್ವಿಚಕ್ರ ವಾಹನಗಳಿಗೆ ಬ್ರೇಕ್ ಹಾಕುತ್ತಾ ಸರ್ಕಾರ?]
ಮುಖ್ಯಮಂತ್ರಿಗಳ ಸಾಂತ್ವನ ಯೋಜನೆಗೆ ಕೇಂದ್ರ ಕಾನೂನು ಸಚಿವ ಡಿ.ವಿ ಸದಾನಂದ ಗೌಡ, ಗೃಹ ಸಚಿವ ಜಿ. ಪರಮೇಶ್ವರ್, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ರಸಗೊಬ್ಬರ ಸಚಿವ ಅನಂತಕುಮಾರ್, ಹೀಗೆ ಅನೇಕ ರಾಜಕೀಯ ಮುಖಂಡರು, ಗಣ್ಯರು ಆಗಮಿಸಲಿದ್ದಾರೆ.
ಏನಿದು ಯೋಜನೆ?
ಅಪಘಾತಕ್ಕೀಡಾದ ವ್ಯಕ್ತಿಗೆ 48 ಗಂಟೆ ಅವಧಿಗೆ ಗರಿಷ್ಠ 25 ಸಾವಿರ ರೂ. ವರೆಗಿನ ಚಿಕಿತ್ಸೆಯನ್ನು ಮಾನವೀಯ ನೆಲೆಯಲ್ಲಿ ಒದಗಿಸುವ ಯೋಜನೆ ಇದಾಗಿದ್ದು, ಏಷ್ಯಾದಲ್ಲೇ ಮೊದಲ ಬಾರಿಗೆ ರಾಜ್ಯದಲ್ಲಿ ಪರಿಚಯವಾಗಲಿದೆ. ಈ ಯೋಜನೆ 72 ಕೋಟಿ ರೂ. ನೀಡಲು ಸಚಿವ ಸಂಪುಟ ಒಪ್ಪಿಗೆ ನೀಡಿದ್ದು ಈಗ 10 ಕೋಟಿ ರೂ. ಬಿಡುಗಡೆಯಾಗಿದೆ.
ಅಂದು ಏನಾಗಿತ್ತು?
ನೆಲಮಂಗಲದ ಬೇಗೂರ್ ಗೇಟ್ ಬಳಿ ಫೆ.16 ರಂದು ಲಾರಿ ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿತ್ತು. ಈ ಅಪಘಾತದಲ್ಲಿ ಬೈಕ್ನಲ್ಲಿದ್ದ ಹರೀಶ್ ದೇಹ ಎರಡು ಭಾಗವಾಗಿ ರಸ್ತೆಯಲ್ಲಿ ಬಿದ್ದಿತ್ತು. ದೇಹ ಎರಡು ತುಂಡಾದರೂ ಎರಡೂ ಕೈಯನ್ನು ಮೇಲಕ್ಕೆ ಎತ್ತಿ ಜೀವ ಉಳಿಸಿ ಎಂದು ಕೂಗಿಕೊಂಡು ತನ್ನ ಅಂಗಾಂಗ ದಾನ ಮಾಡಲು ಸಹಾಯ ಮಾಡುವಂತೆ ಕೇಳಿಕೊಂಡು ಪ್ರಾಣ ಬಿಟ್ಟಿದ್ದರು. ಹರೀಶ್ ಆಸೆಯಂತೆ ಅವರ ಕಣ್ಣುಗಳನ್ನು ಬೇರೆಯವರಿಗೆ ದಾನ ಮಾಡಲಾಗಿತ್ತು. ಪ್ರಾಣ ಹೋಗುತ್ತಿದ್ದರೂ ಸಾವಿನಲ್ಲೂ ಸಾರ್ಥಕತೆ ತೋರಿದ್ದಕ್ಕೆ ಆರೋಗ್ಯ ಇಲಾಖೆ ಹರೀಶ್ಗೆ ಈ ಮೂಲಕ ಕೊಡುಗೆಯನ್ನು ನೀಡುತ್ತಿದೆ.