ಆಧಾರ್ ತೀರ್ಪು ಭಷ್ಟಾಚಾರ ಮುಕ್ತ ಭಾರತಕ್ಕೆ ಪೂರಕ: ರಾಜೀವ್
ಬೆಂಗಳೂರು, ಸೆ.26:ದೇಶದ ಆರ್ಥಿಕ ವ್ಯವಸ್ಥೆಯಿಂದ ಭ್ರಷ್ಟಾಚಾರವನ್ನು ಸಂಪೂರ್ಣ ತೊಲಗಿಸಲು ನರೇಂದ್ರ ಮೋದಿ ಸರ್ಕಾರ ನಡೆಸಿರುವ ಹೋರಾಟಕ್ಕೆ ಆಧಾರ್ ಕಾರ್ಡ್ ವಿಚಾರವಾಗಿ ಸುಪ್ರೀಂಕೋರ್ಟ್ ನೀಡಿರುವ ತೀರ್ಪು ಪೂರಕವಾಗಿದೆ ಎಂದು ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಬಣ್ಣಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು ಆಧಾರ್ ಕಾಯ್ದೆ ಹಾಗೂ ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರದಲ್ಲಿರುವ ಹಲವು ನ್ಯೂನತೆಗಳನ್ನು ಸರಿಪಡಿಸುವ ಮೂಲಕ ನಾಗರಿಕರಿಗೆ ಸರ್ಕಾರದ ನೇರ ಸೌಲಭ್ಯಗಳನ್ನು ಒದಗಿಸುವ ವ್ಯವಸ್ಥೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಸುಪ್ರೀಂಕೋರ್ಟ್ ತೀರ್ಪು ನೀಡಿದೆ ಎಂದು ವಿಶ್ಲೇಷಿಸಿದ್ದಾರೆ.
ಯಾವುದಕ್ಕೆ ಆಧಾರ್ ಕಡ್ಡಾಯ? ಯಾವುದಕ್ಕೆ ಕಡ್ಡಾಯವಲ್ಲ? ಚಿತ್ರ ಮಾಹಿತಿ
ನರೇಂದ್ರ ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಭಾರತೀಯ ವಿಶಿಷ್ಟ ಪ್ರಾಧಿಕಾರ ಹಾಗೂ ಆಧಾರ್ ಕಾಯ್ದೆಯಲ್ಲಿದ್ದ ನ್ಯೂನತೆ ಸರಿಪಡಿಸಲಾಗಿದೆ, ಯುಪಿಎ ಸರ್ಕಾರದ ಕೇವಲ ಕಣ್ಣೊರೆಯುವ ತಂತ್ರವಾಗಿದ್ದ ಆಧಾರ್ ಕಾರ್ಡ್ ವ್ಯವಸ್ಥೆಯನ್ನು ಸಂಪೂರ್ಣ ಕಾಯ್ದೆ ಚೌಕಟ್ಟಿನಲ್ಲಿ ತಂದು ಆಧಾರ್ ಕಾರ್ಡ್ ವಿತರಣಾ ವ್ಯವಸ್ಥೆಗೆ ಒಂದು ಸಾಂಸ್ಥಿಕ ರೂಪ ತಂದುಕೊಟ್ಟ ಕೀರ್ತಿ ಮೋದಿ ಸರ್ಕಾರಕ್ಕೆ ಸಲ್ಲುತ್ತದೆ.
ಆ ನಿಟ್ಟಿನಲ್ಲಿ 2013ರಲ್ಲಿ ತಾವು ಹೂಡಿದ್ದ ಅರ್ಜಿಗೆ ಪೂರಕವಾಗಿ ಸುಪ್ರೀಂಕೋರ್ಟ್ ನೀಡಿದ್ದ ತೀರ್ಪು ಪ್ರತಿಧ್ವನಿಸುತ್ತದೆ ಎಂದು ಹೇಳಿದ್ದಾರೆ.
ಆಧಾರ್ ಗೆ ಸಾಂವಿಧಾನಿಕ ಮಾನ್ಯತೆ: ಯಾರು ಏನಂದರು?
ನಾಗರಿಕರ ಮೂಲ ದತ್ತಾಂಶಗಳು ಆಧಾರ್ ಕಾರ್ಡ್ ನಲ್ಲಿ ಭದ್ರವಾಗಿರಬೇಕು ಎಂದು ತಾವು ಪ್ರತಿಪಾದಿಸಿದ್ದ ಅಂಶವನ್ನು ಕೂಡ ಸುಪ್ರೀಂಕೋರ್ಟ್ ಎತ್ತಿ ಹಿಡಿದಿದ್ದು, ಅದರ ಸುರಕ್ಷತೆ ಕುರಿತಂತೆ ತಿದ್ದುಪಡಿ ಸ್ವಾಗತಾರ್ಹ ಎಂದಿದ್ದಾರೆ.