ಬೆಂಗಳೂರು ಸುಧಾರಣೆಗೆ ರಾಜೀವ್ ಚಂದ್ರಶೇಖರ್ 5 ಅದ್ಭುತ ಸಲಹೆ
ಬೆಂಗಳೂರು, ಅಕ್ಟೋಬರ್ 7: "ಇಂದಿನ ಬೆಂಗಳೂರು ನಗರದ ಸ್ಥಿತಿ ಯಾವುದೋ ಒಂದು ದಿನದಲ್ಲಿ ಆಗಿದ್ದಲ್ಲ. ಸರಣಿ ತಪ್ಪುಗಳನ್ನು ಮಾಡಿದ ಕಾರಣಕ್ಕೆ ಆಗಿರುವಂಥದ್ದು. ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಈ ನಾಲ್ಕು ವರ್ಷದಲ್ಲಿ ಗಂಭೀರ ಸ್ಥಿತಿಯನ್ನು ತಲುಪಿದೆ" ಎಂದು ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಹೇಳಿದರು.
ಸ್ವರಾಜ್ಯ ನಿಯತಕಾಲಿಕೆ, ನಮ್ಮ ಬೆಂಗಳೂರು ಫೌಂಡೇಷನ್ ನಿಂದ ಐಐಎಂ-ಬಿ ಹಾಗೂ ಪಬ್ಲಿಕ್ ಪಾಲಿಸಿ ಕ್ಲಬ್ ಸಂಯುಕ್ತಾಶ್ರಯದಲ್ಲಿ ಶನಿವಾರ ಆಯೋಜಿಸಿದ್ದ 'ಸಿಟಿಸ್ಕೇಪ್ಸ್ 2017 ಬೆಂಗಳೂರು' ವಿಚಾರ ಸಂಕಿರಣದಲ್ಲಿ ಆರಂಭಿಕ ಭಾಷಣಕಾರರಾಗಿ ಮಾತನಾಡಿದರು.
ಪೌರಕಾರ್ಮಿಕರ ಬಗ್ಗೆ ರಾಜ್ಯ ಸರಕಾರ ನಿರ್ಲಕ್ಷ್ಯ, ರಾಜೀವ್ ಚಂದ್ರಶೇಖರ್ ಖಂಡನೆ
ಕಳ್ಳರಿದ್ದಾರೆ ಅನ್ನೋದು ಗೊತ್ತಿದೆ. ಆದರೂ ಬಾಗಿಲನ್ನೂ ತೆರೆದಿಟ್ಟು, ಕಾವಲು ಸಹ ಕಾಯುವವರು ಇಲ್ಲದಿದ್ದರೆ ಈಗಿನ ಬೆಂಗಳೂರಿಗೆ ಏರ್ಪಟ್ಟಿರುವ ಸ್ಥಿತಿ ಆಗುತ್ತದೆ. ಯಾವುದೇ ಸರಕಾರವಿರಲಿ, ಪ್ರಜಾಪ್ರಭುತ್ವದ ಬಗ್ಗೆ ಇಷ್ಟುದ್ದದ ಮಾತುಗಳನ್ನು ಆಡುವುದಕ್ಕಿಂತ ಮೊದಲಿಗೆ ಜನರಿಗೆ ಪ್ರತಿಕ್ರಿಯೆ ನೀಡಬೇಕು. ಅದು ಮೊದಲ ಜವಾಬ್ದಾರಿ ಎಂದರು.
ಇನ್ನು ಮೆಟ್ರೋ ರೈಲು ವಿಸ್ತರಣೆ ವಿಚಾರವಾಗಿ ಜನರ ಜತೆಗೆ ಸಭೆ ನಡೆಸುವಂತೆ ಮೆಟ್ರೋದವರಿಗೆ ಆಹ್ವಾನ ನೀಡಿದರೆ, ಅಲ್ಲಿಗೆ ಮಾಧ್ಯಮದವರು ಬರುತ್ತಾರೆ, ಅದಕ್ಕೆ ನಾವು ಬರುವುದಿಲ್ಲ ಅಂತಾರೆ. ಮಾಧ್ಯಮದವರು, ಸಾರ್ವಜನಿಕರ ಎದುರು ಮಾತನಾಡುವುದಕ್ಕೆ ಇದೆಂಥ ಭಯ ಎಂದು ಪ್ರಶ್ನಿಸಿದರು.
ಕೆರೆ ರಕ್ಷಣೆ ಕಾರ್ಯಕ್ಕೆ ಯುನೈಟೆಡ್ ಬೆಂಗಳೂರು ಜತೆಗೆ ರಾಜೀವ್ ಚಂದ್ರಶೇಖರ್
ನಮ್ಮ್ ಆರೋಗ್ಯ, ರಸ್ತೆ, ನೀರು, ಮೂಲಸೌಕರ್ಯ ಎಲ್ಲವನ್ನೂ ನೋಡಿಕೊಳ್ಳಬೇಕಾದದ್ದು ಸ್ಥಳೀಯ ಸಂಸ್ಥೆಗಳು. ಅವುಗಳಿಗೆ ಚುನಾವಣೆಯಲ್ಲಿ ಶೇಕಡಾ ಮೂವತ್ತರಿಂದ- ನಲವತ್ತೈದರಷ್ಟು ಮತದಾನ ಆಗುತ್ತಿದೆ. ಇದು ಪ್ರಜೆಗಳಾಗಿ ನಮ್ಮ ನಿರ್ಲಕ್ಷ್ಯ ಅಲ್ಲವೆ? ನ್ಯಾಯಾಲಯಗಳಲ್ಲಿರುವ ಹಲವು ಪ್ರಕರಣಗಳು ಸರಕಾರಗಳ ಮೇಲೆ ಇವೆ. ಸಮಸ್ಯೆಗಳಿಗೆ ಪರಿಹಾರ ಆಗಬೇಕಾದ ಜನಪ್ರತಿನಿಧಿಗಳೇ ಸಮಸ್ಯೆಗಳಾಗಿದ್ದಾರೆ ಎಂದರು.
ನಮ್ಮ ನಿರ್ಲಕ್ಷ್ಯ, ಮೌನವೇ ಬೆಂಗಳೂರನ್ನು ಇಂದಿನ ಸ್ಥಿತಿಗೆ ನೂಕಿದೆ ಎಂದ ರಾಜೀವ್ ಚಂದ್ರಶೇಖರ್, ಸಮಸ್ಯೆಗೆ ಐದು ಪರಿಹಾರವನ್ನು ಕೂಡ ಸೂಚಿಸಿದರು. ಅವು ಹೀಗಿವೆ.
ವರ್ಷಗಳ ಮುನ್ನವೇ ಯೋಜನೆ
ಬೆಂಗಳೂರಿಗೆ ಏನು ಬೇಕು? ಆರೋಗ್ಯ, ರಸ್ತೆ, ನೀರು, ಫ್ಲೈ ಓವರ್, ಶವಾಗಾರ, ಸ್ಮಶಾನ... ಹೀಗೆ ಏನೇ ಬೇಕಿದ್ದರೂ ಅದಕ್ಕಾಗಿ ವರ್ಷಗಳ ಮುಂಚೆಯೇ ಯೋಜನೆ ಸಿದ್ಧಪಡಿಸಬೇಕು. ಜನರು, ಸರಕಾರ ಹಾಗೂ ವಿವಿಧ ಸಂಸ್ಥೆಗಳು ಒಗ್ಗೂಡಿ ವರ್ಷಗಳ ಮುಂಚೆಯೇ ಆಗಬೇಕಾದ ಕೆಲಸಗಳ ಬಗ್ಗೆ ಯೋಜನೆಯನ್ನು ಸಿದ್ಧ ಮಾಡಿಕೊಳ್ಳಬೇಕು.
ವಾರ್ಡ್ ಸಮಿತಿ ಬಲಗೊಳ್ಳಬೇಕು
ವಾರ್ಡ್ ಸಮಿತಿಗಳು ಚಟುವಟಿಕೆಯಿಂದ ಕೂಡಿರಬೇಕು. ಆಯಾ ಬಡಾವಣೆ, ವಾರ್ಡ್ ಮಟ್ಟದಲ್ಲಿ ಜನರೆಲ್ಲ ಒಗ್ಗೂಡಿ ತಮ್ಮ ಬೇಕು-ಬೇಡಗಳ ಬಗ್ಗೆ ಚರ್ಚೆ ಮಾಡಬೇಕು, ಅವುಗಳನ್ನು ಸರಕಾರದ ಗಮನಕ್ಕೆ ತರಬೇಕು.
ಸಾರ್ವಜನಿಕರನ್ನು ಸಂಪರ್ಕಿಸಬೇಕು
ಯಾವುದೇ ಯೋಜನೆ ಜಾರಿ ಆಗುವ ಮುನ್ನ ಅದರ ಬಗ್ಗೆ ಜನರ ಜತೆಗೆ ಸರಕಾರ ಚರ್ಚೆ ನಡೆಸಬೇಕು. ಯಾರದೋ ಒಬ್ಬರ ಮನಸ್ಸಿಗೆ ಬಂತು ಎಂದು ಯೋಜನೆಗಳು ಆಗುವ ಬದಲು ಸಾರ್ವಜನಿಕರ ಜತೆಗೆ ಚರ್ಚೆ ನಡೆಸಿ, ಅನುಷ್ಠಾನಕ್ಕೆ ತರಬೇಕು.
ಉತ್ತರದಾಯಿತ್ವ ನಿಗದಿಯಾಗಬೇಕು
ತಪ್ಪುಗಳಾದರೆ ಅದರ ಉತ್ತರದಾಯಿತ್ವ ಹಾಗೂ ಜವಾಬ್ದಾರಿ ಯಾರು ಎಂಬ ಬಗ್ಗೆ ಸ್ಪಷ್ಟನೆ ಇರಬೇಕು. ಬೆಂಗಳೂರಲ್ಲಿನ ಜನಸಂಖ್ಯೆ ಇನ್ನೇನು ಹನ್ನೆರಡು-ಹದಿಮೂರು ಮಿಲಿಯನ್ ತಲುಪಲಿದೆ. ಜಲಮಂಡಳಿ ಹಾಗೂ ಬಿಬಿಎಂಪಿಯಂಥದ್ದು ರಾಜಕಾರಣಿಗಳು, ಗುತ್ತಿಗೆದಾರರು ಹಾಗೂ ಅಧಿಕಾರಿಗಳ ಕೈಯಲ್ಲಿದೆ. ಆಗುವ ಭ್ರಷ್ಟಾಚಾರ ತಪ್ಪಿಗೆ ಇಲ್ಲಿ ಯಾರೂ ಜವಾಬ್ದಾರರಿಲ್ಲ. ಭ್ರಷ್ಟಾಚಾರದ ಹೆಡ್ ಆಫೀಸ್ ನಂತಿರುವ ಬಿಡಿಎ ಅನ್ನು ಮೊದಲು ರದ್ದು ಮಾಡಿ, ಶಕ್ತಿಯುತವಾದ ಸಂಸ್ಥೆ ಕಟ್ಟಬೇಕು.
ಯೋಜನೆಗಳ ಖರ್ಚು-ವೆಚ್ಚದಲ್ಲಿ ಪಾರದರ್ಶಕತೆ ತರಲಿ
ಯೋಜನೆಗಳಿಗೆ ಹಣ ಖರ್ಚು ಮಾಡುತ್ತಾರಲ್ಲಾ ಅದರಲ್ಲಿ ಪಾರದರ್ಶಕತೆ ತರಬೇಕು. ಸಾವಿರಾರು ಕೋಟಿ ರುಪಾಯಿಯನ್ನು ಬೆಂಗಳೂರಿಗಾಗಿ ಬಿಬಿಎಂಪಿ ಖರ್ಚು ಮಾಡುತ್ತಿದೆಯಂತೆ. ಯಾವ ಕೆರೆಯೂ ಸರಿ ಹೋಗಿಲ್ಲ, ರಸ್ತೆಗಳನ್ನಂತೂ ಕೇಳುವುದೇ ಬೇಡ. ಹಾಗಿದ್ದರೆ ಖರ್ಚು ಮಾಡಿದ ಹಣ ಎಲ್ಲಿ?