ಪುತ್ತೂರಿನಲ್ಲಿ ಫೆ. 6ಕ್ಕೆ ಕುಮ್ಕಿ ರೈತರ ಜಾಗೃತಿ ಸಮಾವೇಶ
ಮಂಗಳೂರು, ಜನವರಿ, 27: ಕಾಂಗ್ರೆಸ್ ಸರ್ಕಾರದ ನಿರ್ಲಕ್ಷ್ಯದಿಂದ ರೈತರು ಕುಮ್ಕಿ ಹಕ್ಕು ಕಳೆದುಕೊಳ್ಳುವ ಭೀತಿ ಎದುರಿಸುತ್ತಿದ್ದು, ಈ ಸಲುವಾಗಿ ಫೆಬ್ರವರಿ 6ರಂದು ಪುತ್ತೂರಿನಲ್ಲಿ ಕುಮ್ಕಿ ರೈತರ ಜಾಗೃತಿ ಸಮಾವೇಶ ನಡೆಸಲಾಗುವುದು ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು.
ಮಂಗಳೂರಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ರೈತರಿಗೆ ಕುಮ್ಕಿ ಹಕ್ಕನ್ನು ನೀಡಿಯೇ ನೀಡುತ್ತೇವೆ. ಬಿಜೆಪಿ, ಈ ಪರವಾಗಿ ಕಾನೂನು ಮತ್ತು ಜನತಾ ನ್ಯಾಯಾಲಯದಲ್ಲಿ ಹೋರಾಟ ನಡೆಸಲಿದೆ' ಎಂದು ಭರವಸೆ ವ್ಯಕ್ತಪಡಿಸಿದರು.[ಮೋದಿ ಅಭಿಮಾನಿಗಳು ಮೆಚ್ಚಿದ ಬೆಳಗಾವಿಯ ರೈತ]
ರಾಜಕೀಯ ಲಾಭಕ್ಕಾಗಿ ಕುಮ್ಕಿ ಹೋರಾಟ ನಡೆಸುತ್ತಿಲ್ಲ. ನಮಗೆ ರಾಜಕೀಯ ಲಾಭ ಬೇಡ. ಕಾಂಗ್ರೆಸ್ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಕುಮ್ಕಿ ಜಾಗ ರೈತರಿಗೆ ಕೊಡುವುದಾಗಿ ಭರವಸೆ ನೀಡಿತ್ತು. ಆದರೆ ಅಧಿಕಾರಕ್ಕೆ ಬಂದ ಬಳಿಕ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸರ್ಕಾರವನ್ನು ಟೀಕಿಸಿದರು.
ಬಿಜೆಪಿ ಸರ್ಕಾರ ಭೂ ಮಂಜೂರಾತಿ ನಿಯಮಕ್ಕೆ ತಿದ್ದುಪಡಿ ಮಾಡಿ ಕುಮ್ಕಿ ಹಕ್ಕನ್ನು ಸೇರ್ಪಡೆ ಮಾಡಿತ್ತು. ರೈತರಿಗೆ ಕುಮ್ಕಿ ಹಕ್ಕು ಮಂಜೂರು ಮಾಡಲು ಸಿದ್ಧತೆ ನಡೆದಿತ್ತು. ಆದರೆ ರಾಜ್ಯಪಾಲರು ಅಂಕಿತ ಹಾಕದ ಕಾರಣ ಹಿನ್ನೆಡೆಯಾಗಿತ್ತು. ಕಾಂಗ್ರೆಸ್ ನಾಯಕರು ರಾಜಕೀಯ ಪ್ರಭಾವ ಬೀರಿ ಹಿಂದಿನ ರಾಜ್ಯಪಾಲರು ಹಂಸರಾಜ್ ಭಾರದ್ವಾಜ್ ಸಹಿ ಹಾಕದಂತೆ ಮಾಡಿದ್ದರು ಎಂದು ಆರೋಪಿಸಿದರು.[ಧಾರವಾಡದ ಧೂಪನಟ್ಟಿ, ಕಿವುಡೆಬೈಲ ರೈತರ ಬೇಡಿಕೆಗಳೇನು?]
ಕುಮ್ಕಿ ಭೂಮಿ ಎಂದರೆ ಏನು?
ಕೃಷಿಭೂಮಿಗಳಿಂದ 100 ಯಾರ್ಡ್ ದೂರದಲ್ಲಿರುವ ಬಳಕೆಯಾಗದ ಸರ್ಕಾರಿ ಜಮೀನುಗಳನ್ನು ಕೃಷಿ ಚಟುವಟಿಕೆಗೆ ಪೂರಕವಾಗಿ ಬಳಸುವ ಅಧಿಕಾರಕ್ಕೆ ಕುಮ್ಕಿ ಎನ್ನಲಾಗುತ್ತದೆ. ಇವು ಖಾಲಿಬಿದ್ದ ಭೂಮಿಗಳಾಗಿದ್ದರಿಂದ ಷರತ್ತಿನ ಅನ್ವಯ ಕೃಷಿ ಚಟುವಟಿಕೆ ನಡೆಸಲು ಭೂಮಾಲೀಕರಿಗೆ ಬ್ರಿಟಿಷರ ಕಾಲದಲ್ಲಿ ಹಂಚಲಾಗಿತ್ತು. ದಕ್ಷಿಣಕನ್ನಡದ ಸುಳ್ಯ ಭಾಗದಲ್ಲಿ ಇದಕ್ಕೆ ಬಾಣೆ, ಉತ್ತರಕನ್ನಡದಲ್ಲಿ ಬೆಟ್ಟ ಮತ್ತು ಹಾದಿ, ಮೈಸೂರಿನಲ್ಲಿ ಸೊಪ್ಪಿನಬೆಟ್ಟ ಹಾಗೂ ಕೊಡಗಿನಲ್ಲಿ ಜಮ್ಮ ಮತ್ತು ಬಾಣೆ ಎಂದು ಕರೆಯುತ್ತಾರೆ.