ದೇವೇಗೌಡರ ವಿರುದ್ಧ ಮೌಲ್ವಿಗಳ ಬೃಹತ್ ಪ್ರತಿಭಟನೆ
ಬೆಂಗಳೂರು, ಫೆಬ್ರವರಿ 09 : ಮಾಜಿ ಪ್ರಧಾನಿ ಮತ್ತು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರ ವಿರುದ್ಧ ಮಂಗಳವಾರ ನೂರಾರು ಮೌಲ್ವಿಗಳು ಪ್ರತಿಭಟನೆ ನಡೆಸಿದರು. 'ಜಮೀರ್ ಅಹಮದ್ ಖಾನ್ ಅವರನ್ನು ಮೀರ್ ಸಾಧಿಕ್' ಎಂದು ಕರೆದ ಗೌಡರು ತಮ್ಮ ಹೇಳಿಕೆಯನ್ನು ವಾಪಸ್ ಪಡೆಯಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಜಾಮೀಯ ಮಸೀದಿಯ ಮೌಲ್ವಿ ಮಕ್ಬೂಲ್ ಇಮ್ರಾನ್ ನೇತೃತ್ವದಲ್ಲಿ ಬೆಂಗಳೂರಿನ ಟೌನ್ ಹಾಲ್ ಮುಂಭಾಗದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು. ದೇವೇಗೌಡರು ತಮ್ಮ ಹೇಳಿಕೆಯನ್ನು ವಾಪಸ್ ಪಡೆಯದಿದ್ದರೆ, ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಮೌಲ್ವಿಗಳು ಎಚ್ಚರಿಕೆ ನೀಡಿದರು. ['ಜೆಡಿಎಸ್ ಪಕ್ಷ ತಾಯಿ ಇದ್ದಂತೆ, ತಾಯಿ ಮರೆತರೆ ಅನ್ನ ಸಿಗುವುದಿಲ್ಲ']
ರಾಜಕೀಯವಾಗಿ ದೇವೇಗೌಡರು ಚಾಮರಾಜಪೇಟೆ ಶಾಸಕ ಜಮೀರ್ ಅಹಮದ್ ಖಾನ್ ಅವರನ್ನು ಏನು ಬೇಕಾದರೂ ಕರೆಯಲಿ. ಆದರೆ, ಮೀರ್ ಸಾಧಿಕ್ ಎಂದು ಕರೆದಿರುವುದು ಸರಿಯಲ್ಲ. ಜಮೀರ್ ಅವರು ಮೀರ್ ಸಾಧಿಕ್ ಅಲ್ಲ. ಅವರನ್ನು ಹಾಗೆ ಕರೆಯುವುದು ಮಾಜಿ ಪ್ರಧಾನಿಗಳಿಗೆ ಶೋಭೆ ತರುವುದಿಲ್ಲ. ಗೌಡರು ತಕ್ಷಣ ತಮ್ಮ ಹೇಳಿಕೆಯನ್ನು ವಾಪಸ್ ಪಡೆಯಬೇಕು ಎಂದು ಮೌಲ್ವಿಗಳು ಒತ್ತಾಯಿಸಿದರು. [ಗೌಡರ ವಿರುದ್ಧ ಗುಡುಗಿದ ಜಮೀರ್, ಚೆಲುವರಾಯಸ್ವಾಮಿ]
ಫೆ.7ರ ಭಾನುವಾರ ಹೆಬ್ಬಾಳ ಉಪ ಚುನಾವಣೆ ಪ್ರಚಾರದ ಸಂದರ್ಭದಲ್ಲಿ ದೇವೇಗೌಡರು, 'ಶಾಸಕ ಜಮೀರ್ ಅಹಮದ್ ಖಾನ್ ಮತ್ತು ಪಕ್ಷ ವಿರೋಧಿ ಚಟುವಟಿಕೆ ನಡೆಸುವ ಶಾಸಕರು ಮೀರ್ ಸಾಧಿಕ್' ಎಂದು ಹೇಳಿದ್ದರು. ಈ ಹೇಳಿಕೆಯನ್ನು ಖಂಡಿಸಿ ಇಂದು ಮೌಲ್ವಿಗಳು ಪ್ರತಿಭಟನೆ ನಡೆಸಿದರು. [ಜಮೀರ್ ಉಲ್ಟಾ ಹೊಡೆಯಲು ಕಾರಣ ಹೀಗೂ ಇರಬಹುದೇ?]
ಜಮೀರ್ ಅಹಮದ್ ಹೇಳುವುದೇನು? : 'ನಾನು ಜೆಡಿಎಸ್ ಪಕ್ಷದಲ್ಲೇ ಇದ್ದೇನೆ, ದೇವೇಗೌಡರು ನನ್ನನ್ನು ಮೀರ್ ಸಾಧಿಕ್, ಐಎಸ್ಐ ಏಜೆಂಟ್ ಎಂದು ಏನು ಬೇಕಾದರೂ ಕರೆಯಲಿ. ನಾನು ಪಕ್ಷದಲ್ಲಿದ್ದೇನೆ, ಪಕ್ಷಕ್ಕಾಗಿ ಕೆಲಸ ಮಾಡುತ್ತೇನೆ. ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆಗೆ ಪ್ರಚಾರ ನಡೆಸುತ್ತಿದ್ದೇನೆ' ಎಂದು ಜಮೀರ್ ಅಹಮದ್ ಖಾನ್ ಪ್ರತಿಕ್ರಿಯೆ ನೀಡಿದ್ದರು.