ನಿತ್ಯಾನಂದ ಆಶ್ರಮದ ಯುವತಿ ಸಾವು : ತನಿಖೆಗೆ ತಾಯಿ ದೂರು
ರಾಮನಗರ, ಜ. 3: ಬಿಡದಿಯಲ್ಲಿರುವ ನಿತ್ಯಾನಂದ ಆಶ್ರಮದಲ್ಲಿ ಸನ್ಯಾಸತ್ವ ತರಬೇತಿ ಪಡೆಯುತ್ತಿದ್ದ ಸಂಗೀತಾ (24) ಎಂಬ ಭಕ್ತೆ ಆಶ್ರಮದಲ್ಲಿಯೇ ಮೃತಪಟ್ಟಿರುವುದು ಈಗ ವಿವಾದವಾಗಿ ಪರಿಣಮಿಸಿದೆ.
ಸಂಗೀತಾ ತಾಯಿ ಝಾನ್ಸಿರಾಣಿ ಅವರು ಶನಿವಾರ ರಾಮನಗರ ಪೊಲೀಸ್ ವರಿಷ್ಠಾಧಿಕಾರಿಯವರನ್ನು ಭೇಟಿಯಾಗಿ ಮಗಳ ಸಾವಿನ ಕುರಿತು ತನಿಖೆ ನಡೆಸಬೇಕೆಂದು ದೂರು ನೀಡಿದ್ದಾರೆ.
"ನನ್ನ ಮಗಳು ನಾಲ್ಕು ವರ್ಷಗಳಿಂದ ನಿತ್ಯಾನಂದ ಸ್ವಾಮೀಜಿ ಆಶ್ರಮದಲ್ಲಿದ್ದಳು. ಈಗ ಮನೆಗೆ ವಾಪಸ್ ಬರುವ ಯೋಚನೆ ಹೊಂದಿದ್ದಳು. ಈ ಸಂದರ್ಭದಲ್ಲಿಯೇ ಆಕೆಯ ಸಾವು ಸಂಭವಿಸಿದೆ. ಆದ್ದರಿಂದ ಸಾವಿನ ಕುರಿತು ತನಿಖೆ ನಡೆಸಬೇಕು" ಎಂದು ಕೋರಿದ್ದಾರೆ. ಅವರ ಜೊತೆ ಮೃತ ಸಂಗೀತಾ ಸೋದರ ಮಾವ ಹಾಗೂ ಇಬ್ಬರು ವಕೀಲರು ಆಗಮಿಸಿದ್ದರು. [ಸನ್ಯಾಸಿಯಾದಳು ನಟಿ ರಂಜಿತಾ]
ಸಂಗೀತಾ ಸಾವನ್ನು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಮಂಜುಳಾ ಮಾನಸ ಗಂಭೀರವಾಗಿ ಪರಿಗಣಿಸಿದ್ದಾರೆ. ಪ್ರಕರಣ ಕುರಿತು ತನಿಖೆ ನಡೆಸಿ ವರದಿ ನೀಡಬೇಕೆಂದು ರಾಮನಗರ ಪೊಲೀಸ್ ವರಿಷ್ಠಾಧಿಕಾರಿ ಚಂದ್ರಗುಪ್ತ ಅವರಿಗೆ ಸೂಚನೆ ನೀಡಿದ್ದಾರೆ.
ಏನಾಗಿತ್ತು? : ಬಿಡದಿ ನಿತ್ಯಾನಂದ ಆಶ್ರಮದಲ್ಲಿದ್ದ ಸಂಗೀತಾ ಅವರಿಗೆ 2014ರ ಡಿಸೆಂಬರ್ 28ರಂದು ರಾತ್ರಿ ಇದ್ದಕ್ಕಿದ್ದಂತೆ ಎದೆನೋವು ಕಾಣಿಸಿಕೊಂಡಿತ್ತು. ತಕ್ಷಣ ಅವರನ್ನು ಬೆಂಗಳೂರಿನ ರಾಜರಾಜೇಶ್ವರಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅಲ್ಲಿಂದ ಬಿಜಿಎಸ್ ಅಪೊಲೋ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗಮಧ್ಯದಲ್ಲಿಯೇ ಸಂಗೀತಾ ಮೃತಪಟ್ಟಿದ್ದರು. [ನಾನು ರಕ್ತಬೀಜಾಸುರ ದೇವ ಅಂತಾರೆ ನಿತ್ಯಾನಂದ]
ಆ ಸಂದರ್ಭದಲ್ಲಿ ಮಗಳಿಗೆ ಹೃದಯ ಸಂಬಂಧಿ ಕಾಯಿಲೆ ಇತ್ತು ಎಂಬುದನ್ನು ತಾಯಿ ಝಾನ್ಸಿರಾಣಿ ಒಪ್ಪಿಕೊಂಡಿದ್ದರು. ಅಲ್ಲದೆ, ತಮ್ಮ ಕುಟುಂಬದಲ್ಲಿ ಇತರರಿಗೂ ಹೃದಯಾಘಾತ ಆಗಿರುವ ಇತಿಹಾಸವಿದೆ ಎಂದು ತಿಳಿಸಿದ್ದರು. ಆದರೆ, ಈಗ ಅನುಮಾನದ ಹಿನ್ನೆಲೆಯಲ್ಲಿ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಿದ್ದಾರೆ.
ಸಿಸಿಟಿವಿಯಲ್ಲಿ ದಾಖಲಾಗಿದೆ : ಸಂಗೀತಾ ಅವರು ಆಶ್ರಮದಲ್ಲಿದ್ದಾಗ ಇದ್ದಕ್ಕಿದ್ದಂತೆ ನಿತ್ರಾಣಳಾಗಿದ್ದು, ತಕ್ಷಣ ಸ್ವಯಂಸೇವಕರು ಅವರನ್ನು ಆಸ್ಪತ್ರೆಗೆ ಸಾಗಿಸಿದ್ದು ಸಿಸಿಟಿವಿಯಲ್ಲಿ ದಾಖಲಾಗಿದೆ.