ಹುತಾತ್ಮ ನಿರಂಜನ್ ಮನೆಗೆ ಬಿಬಿಎಂಪಿಯಿಂದ ಇದೆಂಥ ಗೌರವ?
ಬೆಂಗಳೂರು, ಆಗಸ್ಟ್ 11 : ಪಠಾಣ್ಕೋಟ್ನಲ್ಲಿ ಜನವರಿ 4ರಂದು ನಡೆದ ಉಗ್ರರ ದಾಳಿಯಲ್ಲಿ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಬೆಂಗಳೂರಿನ ಲೆಫ್ಟಿನೆಂಟ್ ಕರ್ನಲ್ ನಿರಂಜನ್ ಕುಮಾರ್ ಅವರ ಮನೆ ರಾಜ ಕಾಲುವೆ ಒತ್ತುವರಿ ತೆರವಿನಲ್ಲಿ ಸಿಲುಕಿದ್ದು ಗೊತ್ತೆ ಇದೆ. ಮೊದಲೇ ಆತಂಕದಲ್ಲಿದ್ದ ನಿರಂಜನ್ ಕುಟುಂಬಕ್ಕೆ ಬಿಬಿಎಂಪಿ ಮತ್ತೊಂದು ಆಘಾತದ ಸುದ್ದಿಯನ್ನು ನೀಡಿದೆ.
ಬೆಂಗಳೂರಿನ ವಿದ್ಯಾರಣ್ಯಪುರದ ಬಳಿಯಿರುವ ದೊಡ್ಡಬೊಮ್ಮಸಂದ್ರದಲ್ಲಿರುವ ನಿರಂಜನ್ ಮನೆ ಮುಂದಿನ ಮೂರು ಪಿಲ್ಲರ್ ಗಳನ್ನು ಧ್ವಂಸ ಮಾಡಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮುಂದಾಗಿದ್ದ ಬಿಬಿಎಂಪಿ ಹೊಸ ಸರ್ವೆ ಹೆಸರಲ್ಲಿ ಮತ್ತೊಂದು ಪಿಲ್ಲರ್ ತೆರವು ಮಾಡುತ್ತೇನೆ ಎಂದು ಹೇಳಿದೆ.[ಹುತಾತ್ಮ ಲೆ.ಕ ನಿರಂಜನ್ ಮನೆ ಒಡೆಯುವುದೆ ಬಿಬಿಎಂಪಿ?]
ಬಿಬಿಎಂಪಿ ಮೊದಲು ಹೇಳಿದ ಪ್ರಕಾರ ತೆರವಿಗೆ ಅವಕಾಶ ಮಾಡಿಕೊಟ್ಟಿದ್ದೇವು. ಈಗ ಸಪೋರ್ಟ್ ಗಾಗಿ ನೀಡಿದ್ದ ಪಿಲ್ಲರ್ ಗಳನ್ನು ಧ್ವಂಸ ಮಾಡುತ್ತೇವೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಅಲ್ಲದೇ ಕಾಲವಕಾಶ ಸಹ ನೀಡುತ್ತಿಲ್ಲ ಎಂದು ಮನೆಯಲ್ಲಿ ವಾಸವಿದ್ದ ಶಶಾಂಕ್ ಹೇಳುತ್ತಾರೆ.[ರಾಜಕಾಲುವೆ ಒತ್ತುವರಿ ವಿವರ ಈಗ ವೆಬ್ಸೈಟ್ನಲ್ಲಿ ಲಭ್ಯ]
ಒಮ್ಮೆ ಹೀಗೆ ಹೇಳುವ ಪಾಲಿಕೆ ಮತ್ತೊಂದು ದಿನ ಬಂದು ಇನ್ನಷ್ಟು ಜಾಗ ಹೋಗುತ್ತದೆ ಎಂದು ಹೇಳುತ್ತದೆ. ನಮಗೆ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಲು ಅವಕಾಶ ನೀಡುತ್ತಿಲ್ಲ. ಮನೆಗೆ ಆಧಾರ ನೀಡಲು ಬೇರೆ ಪಿಲ್ಲರ್ ನಿರ್ಮಿಸಕೊಳ್ಳುವುದಕ್ಕಾದರೂ ಬಿಬಿಎಂಪಿ ಅವಕಾಶ ನೀಡಬೇಕು ಎಂದು ಶಶಾಂಕ್ ಮನವಿ ಮಾಡುತ್ತಾರೆ. ಒಟ್ಟಿನಲ್ಲಿ ದೇಶಕ್ಕೆ ಪ್ರಾಣ ತ್ಯಾಗ ಮಾಡಿದ ಯೋಧನ ಮುಕ್ಕಾಲು ಭಾಗ ಮನೆ ರಾಜ ಕಾಲುವೆ ಹೆಸರಲ್ಲಿ ನೆಲಸಮವಾಗಲಿದೆ.