ಮೋನಿಕಾ ಗುರ್ಡೆ ಹತ್ಯೆ : ಬೆಂಗಳೂರಿನಲ್ಲಿ ಹಂತಕನ ಬಂಧನ
ಬೆಂಗಳೂರು, ಅಕ್ಟೋಬರ್, 10: ಪ್ರಮುಖ ಸುಗಂಧ ದ್ರವ್ಯ ತಜ್ಞೆ ಮೋನಿಕಾ ಗುರ್ಡೆ(36) ಅವರನ್ನು ಕೊಲೆಮಾಡಿದ್ದ ಹಂತಕ ರಾಜ್ ಕುಮಾರ್ ಅಲಿಯಾಸ್ ರಾಜೇಶ್(25)ನನ್ನು ಬೆಂಗಳೂರಿನ ಬಸವನಗುಡಿ ಪೊಲೀಸರು ಭಾನುವಾರ ಬಂಧಿಸಿದ್ದಾರೆ.
ಪಂಜಾಬ್ ಮೂಲದ ರಾಜೇಶ್, ಮೋನಿಕಾ ಅವರು ವಾಸವಿದ್ದ ಗೋವಾದ ಪಣಜಿಯ ಅಪಾರ್ಟ್ ಮೆಂಟ್ ನಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ 6 ತಿಂಗಳಿನಿಂದ ಕೆಲಸ ನಿರ್ವಹಿಸುತ್ತಿದ್ದ. ಅ.6ರಂದು ಮೋನಿಕಾ ಅವರ ನಗ್ನ ಮೃತದೇಹ ಫ್ಲಾಟ್ ನಲ್ಲಿ ಪತ್ತೆಯಾಗಿತ್ತು. ಮೊನಿಕಾ ಅವರು ಕೊಲೆಯಾದ ದಿನದಂದೇ ರಾಜೇಶ್ ಪರಾರಿಯಾಗಿರುವುದು ಅನುಮಾನ ಮೂಡಿಸಿತ್ತು. ಆರೋಪಿ ಕೊಲೆ ಮಾಡಿ ಮೊನಿಕಾ ಅವರ ಎಟಿಎಮ್ ಕಾರ್ಡ್ ನ್ನು ಜೊತೆಗೆ ತೆಗೆದುಕೊಂಡು ಹೋಗಿದ್ದ.
ಆರೋಪಿ ಭಾನುವಾರ ಬೆಂಗಳೂರಿನ ಬಸವನಗುಡಿಯ ಎಟಿಎಮ್ ವೊಂದರಲ್ಲಿ ಮೊನಿಕಾ ಅವರ ಕಾರ್ಡ್ ನಿಂದ ಹಣ ಡ್ರಾ ಮಾಡಿದ್ದ. ಅಷ್ಟೇ ಅಲ್ಲದೇ ಅದೇ ಕಾರ್ಡ್ ಬಳಸಿ ಬಟ್ಟೆ ಕೂಡ ಖರೀದಿಸಿದ್ದ. ಹಣ ವರ್ಗಾವಣೆ ಆಗಿರುವ ಮಾಹಿತಿ ಪೊಲೀಸರಿಗೆ ತಿಳಿದು ಬಂತು.ಕಾಟನ್ ಪೇಟೆ ಲಾಡ್ಜ್ ವೊಂದರಲ್ಲಿ ಆರೋಪಿ ತಂಗಿರುವ ವಿಷಯ ತಿಳಿದ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮೋನಿಕಾ ಅವರ ಮೇಲೆ ಅತ್ಯಾಚಾರವೆಸಗಿ ಉಸಿರುಗಟ್ಟಿಸಿ ಕೊಲೆ ಮಾಡಿರುವುದಾಗಿ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಶವಪರೀಕ್ಷೆಯಲ್ಲಿ ಮೊನಿಕಾ ಅವರ ಮೇಲೆ ಅತ್ಯಾಚಾರವೆಸಗಿರುವುದು ದೃಢಪಟ್ಟಿಲ್ಲ.