ಯುಬಿ ಸಿಟಿಯಿಂದ ಜೈಲು : ನಲಪಾಡ್ ಪ್ರಕರಣದ 10 ಬೆಳವಣಿಗೆ
Recommended Video
ಬೆಂಗಳೂರು, ಫೆಬ್ರವರಿ 21 : ಶಾಂತಿನಗರ ಕ್ಷೇತ್ರದ ಕಾಂಗ್ರೆಸ್ ಶಾಸಕ ಎನ್.ಎ.ಹ್ಯಾರೀಸ್ ಪುತ್ರ ಮೊಹಮ್ಮದ್ ನಲಪಾಡ್ ಜೈಲು ಸೇರಿದ್ದಾರೆ. ವಿದ್ವತ್ ಮೇಲೆ ಹಲ್ಲೆ ನಡೆಸಿದ ಪ್ರಕರಣದಲ್ಲಿ ಮೊಹಮ್ಮದ್ ನಲಪಾಡ್ ಜಾಮೀನು ಅರ್ಜಿ ತಿರಸ್ಕಾರಗೊಂಡಿದ್ದು, ಮಾ.7ರ ತನಕ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಬುಧವಾರ ಮೊಹಮ್ಮದ್ ನಲಪಾಡ್ ಪರ ವಕೀಲರು ಸಲ್ಲಿಸಿದ್ದ ಜಾಮೀನು ಅರ್ಜಿಯ ವಿಚಾರಣೆ ಬೆಂಗಳೂರಿನ 8ನೇ ಎಸಿಎಂಎಂ ಕೋರ್ಟ್ ನಲ್ಲಿ ನಡೆಯಿತು. ನ್ಯಾಯಾಧೀಶರಾದ ಮಹೇಶ್ ಬಾಬು ಅವರು ಜಾಮೀನು ಅರ್ಜಿ ವಿಚಾರಣೆಯನ್ನು ಫೆ.23ಕ್ಕೆ ಮುಂದೂಡಿದರು.
ಹ್ಯಾರಿಸ್ ಪುತ್ರನ ವಿರುದ್ಧ ಆರೋಪ: ವೈರಲ್ ಆಯ್ತು ಈ ವಿಡಿಯೋ
ಮೊಹಮ್ಮದ್ ನಲಪಾಡ್ ಮತ್ತು ಇತರ ಆರೋಪಿಗಳನ್ನು 14 ದಿನಗಳ ತನಕ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶ ಹೊರಡಿಸಿದರು. ಜಾಮೀನು ಸಿಗದಿರುವುದರಿಂದ ಮೊಹಮ್ಮದ್ ನಲಪಾಡ್ ಸೇರಿದಂತೆ ಎಲ್ಲಾ ಆರೋಪಿಗಳು ಪರಪ್ಪನ ಅಗ್ರಹಾರ ಜೈಲು ಸೇರಿದ್ದಾರೆ.
ಯುಬಿಸಿಟಿಯಲ್ಲಿ ನಡೆದದ್ದು ಪಕ್ಷಾತೀತ ರಂಗೀನ್ ಪಾರ್ಟಿ, ಆದ್ರೆ ಈಗ?
ಅತ್ತ ವಿದ್ವತ್ ಮಲ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮುಖದ ಬಾವು ಕಡಿಮೆಯಾಗಿದೆ. ಕಣ್ಣು ಮತ್ತು ಮೂಗಿನ ಮೂಳೆಗಳು ಮುರಿದಿವೆ. ತುಟಿಗಳು ಉದಿಕೊಂಡಿದ್ದು ಮಾತನಾಡಲು ಸಾಧ್ಯವಾಗುತ್ತಿಲ್ಲ. ದ್ರವಾಹಾರವನ್ನು ಮಾತ್ರ ನೀಡಲಾಗುತ್ತಿದೆ. ಸುಮಾರು 3 ವಾರಗಳ ಕಾಲ ಚಿಕಿತ್ಸೆ ಪಡೆಯಬೇಕಿದೆ ಎಂದು ವೈದ್ಯರು ಹೇಳಿದ್ದಾರೆ.
ಫೆ.17ರಂದು ವಿದ್ವತ್ ಮೇಲೆ ಹಲ್ಲೆ
ಬೆಂಗಳೂರಿನ ಯು.ಬಿ.ಸಿಟಿಯ ಫರ್ಜಿ ಕೆಫೆಯಲ್ಲಿ ಫೆ.17ರ ಶನಿವಾರ ಮೊಹಮ್ಮದ್ ನಲಪಾಡ್ ಮತ್ತು ಆತನ ಸ್ನೇಹಿತರು ವಿದ್ವತ್ ಎಂಬ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದರು. ವಿದ್ವತ್ನನ್ನು ಮಲ್ಯ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಆಸ್ಪತ್ರೆಗೂ ನುಗ್ಗಿದ ಗುಂಪು ಬೆದರಿಕೆ ಹಾಕಿತು. ವಿದ್ವತ್ ಸಹೋದರನ ಮೇಲೆಯೂ ಹಲ್ಲೆಗೆ ಮುಂದಾಯಿತು.
ಫೆ.18 ಭಾನುವಾರ : ಭಾರೀ ಆಕ್ರೋಶ
ಫೆ.18ರ ಭಾನುವಾರ ಬೆಳಗ್ಗೆ ಮೊಹಮ್ಮದ್ ನಲಪಾಡ್ ಕೃತ್ಯದ ವರದಿ ಮಾಧ್ಯಮಗಳಲ್ಲಿ ಪ್ರಸಾರವಾಯಿತು. ನಲಪಾಡ್ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಯಿತು. ಬಿಜೆಪಿ, ಆಮ್ ಆದ್ಮಿ ಪಕ್ಷದ ನಾಯಕರು ಮೊಹಮ್ಮದ್ ನಲಪಾಡ್ ಬಂಧಿಸಬೇಕು ಎಂದು ಒತ್ತಾಯಿಸಿ ಪ್ರತಿಭಟನೆ ನಡೆಸಿದರು. ಅತ್ತ ಮಲ್ಯ ಆಸ್ಪತ್ರೆಯ ಐಸಿಯುನಲ್ಲಿ ವಿದ್ವತ್ಗೆ ಚಿಕಿತ್ಸೆ ಮುಂದುವರೆಯಿತು.
ನಲಪಾಡ್ ಗ್ಯಾಂಗ್ ದಾಳಿಗೆ ನಲುಗಿದ ವಿದ್ವತ್ ಯಾರು?
ಪ್ರಕರಣ ದಾಖಲು, ಆರೋಪಿಗಳಿಗಾಗಿ ಹುಡುಕಾಟ
ಭಾನುವಾರ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಹಲ್ಲೆ ಪ್ರಕರಣ ದಾಖಲಾಯಿತು. ಆರೋಪಿಗಳಿಗಾಗಿ ಹುಡುಕಾಟವನ್ನು ಪೊಲೀಸರು ಆರಂಭಿಸಿದರು. ಆದರೆ, ಮೊಹಮ್ಮದ್ ನಲಪಾಡ್ ಸೇರಿದಂತೆ ಇತರ ಆರೋಪಿಗಳು ತಲೆ ಮರೆಸಿಕೊಂಡಿದ್ದರು. ಸಂಜೆಯ ವೇಳೆಗೆ ಮೊಹಮ್ಮದ್ ನಲಪಾಡ್ ಐವರು ಸ್ನೇಹಿತರನ್ನು ಪೊಲೀಸರು ಬಂಧಿಸಿದರು.
ರಾಮಲಿಂಗಾ ರೆಡ್ಡಿ ಹೇಳಿಕೆ
'ಇಂತಹ ಘಟನೆ ನಡೆದಿರುವುದು ದುರಾದೃಷ್ಟಕರ. ಆರೋಪಿಗಳನ್ನು ಬಂಧಿಸಲಾಗುವುದು. ಬಂಧಿಸಲು ಕಬ್ಬನ್ ಪಾರ್ಕ್ ಪೊಲೀಸರಿಗೆ ಸೂಚನೆ ನೀಡಲಾಗಿದೆ. ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಳ್ಳಲಿದೆ' ಎಂದು ಗೃಹ ಸಚಿವ ರಾಮಲಿಂಗಾ ರೆಡ್ಡಿ ಹೇಳಿದರು.
ಫೆ.19 ಸೋಮವಾರ : ಏನಾಯ್ತು?
ಮೊಹಮ್ಮದ್ ನಲಪಾಡ್ಗಾಗಿ ಹುಡುಕಾಟ ನಡೆಸಿದ ಪೊಲೀಸರು ಶಾಸಕ ಎನ್.ಎ.ಹ್ಯಾರೀಸ್ ಮನೆಗೆ ತೆರಳಿ ಬರಿಗೈಯಲ್ಲಿ ವಾಪಸ್ ಆದರು. 'ಮಗನ ಜೊತೆ ಮಾತನಾಡಿದ್ದೇನೆ. ಆತ ಪೊಲೀಸರ ಮುಂದೆ ಶರಣಾಗಲಿದ್ದಾನೆ' ಎಂದು ಹ್ಯಾರೀಸ್ ಮಾಧ್ಯಮಗಳಿಗೆ ಹೇಳಿಕೆ ನೀಡಿದರು.
ಸೋಮವಾರ ಬೆಳಗ್ಗೆ 11 ಗಂಟೆ ಸುಮಾರಿಗೆ ಮೊಹಮ್ಮದ್ ನಲಪಾಡ್ ಕಬ್ಬನ್ ಪಾರ್ಕ್ ಪೊಲೀಸರ ಮುಂದೆ ಶರಣಾದ. ಪೊಲೀಸರು ಆತನನ್ನು ವಶಕ್ಕೆ ಪಡೆದು ವಿಚಾರಣೆ ಆರಂಭಿಸಿದರು.
ಕೊಲೆ ಯತ್ನದ ಕೇಸು ದಾಖಲು
ಕಬ್ಬನ್ ಪಾರ್ಕ್ ಠಾಣೆ ಪೊಲೀಸರು ಮೊಹಮ್ಮದ್ ನಲಪಾಡ್ ಮತ್ತು ಇತರ ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 307 ಅಡಿ ಕೊಲೆ ಯತ್ನದ ಕೇಸು ದಾಖಲು ಮಾಡಿದರು. ವಿರೋಧ ಪಕ್ಷಗಳು ಮತ್ತು ವಿವಿಧ ಸಂಘಟನೆಗಳು 307 ದಾಖಲು ಮಾಡುವಂತೆ ಒತ್ತಾಯಿಸುತ್ತಿದ್ದವು.
2 ದಿನಗಳ ಕಾಲ ಪೊಲೀಸರ ವಶಕ್ಕೆ
ಸೋಮವಾರ ಸಂಜೆ ಮೊಹಮ್ಮದ್ ನಲಪಾಡ್ ಸೇರಿದಂತೆ ಎಲ್ಲಾ ಆರೋಪಿಗಳನ್ನು 8ನೇ ಎಸಿಎಂಎಂ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು. ಕೋರ್ಟ್ ಆರೋಪಿಗಳನ್ನು ಎರಡು ದಿನಗಳ ಕಾಲ ಪೊಲೀಸರ ವಶಕ್ಕೆ ಒಪ್ಪಿಸಿತು. ಕಬ್ಬನ್ ಪಾರ್ಕ್ ಠಾಣೆ ಪೊಲೀಸರು ಆರೋಪಿಗಳನ್ನು ಠಾಣೆಗೆ ಕರೆದುಕೊಂಡು ಬಂದರು.
ಫೆ.20ರ ಮಂಗಳವಾರ
ಫೆ.20ರ ಮಂಗಳವಾರ ಪೊಲೀಸರು ಮೊಹಮ್ಮದ್ ನಲಪಾಡ್ ಸೇರಿದಂತೆ ಎಲ್ಲಾ ಆರೋಪಿಗಳ ವಿಚಾರಣೆ ನಡೆಸಿದರು. ಅತ್ತ ಮೊಹಮ್ಮದ್ ನಲಪಾಡ್ ಪರ ವಕೀಲರು ಕೋರ್ಟ್ಗೆ ಜಾಮೀನು ಕೋರಿ ಅರ್ಜಿ ಸಲ್ಲಿಸಿದರು. ಕೋರ್ಟ್ ಫೆ.22ರಂದು ವಿಚಾರಣೆ ನಡೆಸುವುದಾಗಿ ಹೇಳಿತು.
ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ
ಫೆ.21ರ ಬುಧವಾರ ಮೊಹಮ್ಮದ್ ನಲಪಾಡ್ ಪರ ವಕೀಲರು ಸಲ್ಲಿಸಿದ್ದ ಜಾಮೀನು ಅರ್ಜಿಯ ವಿಚಾರಣೆ ಬೆಂಗಳೂರಿನ 8ನೇ ಎಸಿಎಂಎಂ ಕೋರ್ಟ್ ನಲ್ಲಿ ನಡೆಯಿತು. ನ್ಯಾಯಾಧೀಶರಾದ ಮಹೇಶ್ ಬಾಬು ಅವರು ಜಾಮೀನು ಅರ್ಜಿ ವಿಚಾರಣೆಯನ್ನು ಫೆ.23ಕ್ಕೆ ಮುಂದೂಡಿದರು.
ಮೊಹಮ್ಮದ್ ನಲಪಾಡ್ ಜೈಲಿಗೆ
ನ್ಯಾಯಾಧೀಶರಾದ ಮಹೇಶ್ ಬಾಬು ಅವರು ಜಾಮೀನು ಅರ್ಜಿಯ ವಿಚಾರಣೆ ಮುಂದೂಡಿದರು ಮತ್ತು ಮೊಹಮ್ಮದ್ ನಲಪಾಡ್ ಸೇರಿದಂತೆ ಎಲ್ಲಾ ಆರೋಪಿಗಳನ್ನು ಮಾ.7ರ ತನಕ (14 ದಿನ) ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದರು. ಇದರಿಂದಾಗಿ ಪೊಲೀಸರು ಮೊಹಮ್ಮದ್ ನಲಪಾಡ್ ಮತ್ತು ಇತರ ಆರೋಪಿಗಳನ್ನು ಪರಪ್ಪನ ಅಗ್ರಹಾರ ಜೈಲಿಗೆ ಕರೆದುಕೊಂಡು ಹೋದರು.