ಸೌಂದರ್ಯಲಹರೀ ಮಹಾಸಮರ್ಪಣೆ ಕಾರ್ಯಕ್ರಮಕ್ಕೆ ಸಕಲ ಸಿದ್ಧತೆ
ಬೆಂಗಳೂರು, ಅಕ್ಟೋಬರ್ 29 : ಪ್ರಧಾನಿ ನರೇಂದ್ರ ಮೋದಿ ಅವರು ಬೆಂಗಳೂರಿಗೆ ಆಗಮಿಸಲಿದ್ದಾರೆ. ಯಡತೊರೆಮಠದ ವೇದಾಂತ ಭಾರತಿ ಸಂಸ್ಥೆಯು ಆಯೋಜಿಸಿರುವ ಸೌಂದರ್ಯಲಹರೀ ಮಹಾಸಮರ್ಪಣೆ ಕಾರ್ಯಕ್ರಮದಲ್ಲಿ ಮೋದಿ ಪಾಲ್ಗೊಳ್ಳಲಿದ್ದಾರೆ.
ಹೆಗ್ಗಡೆ ಕಾರ್ಯಗಳನ್ನು ಕೊಂಡಾಡಿದ ಪ್ರಧಾನಿ ನರೇಂದ್ರ ಮೋದಿ
ಬೆಂಗಳೂರಿನ ಅರಮನೆ ಮೈದಾನದಲ್ಲಿ ಕಾರ್ಯಕ್ರಮ ನಡೆಯಲಿದೆ. ದೂರದ ಊರುಗಳಿಂದ ಬಂದಿರುವ ಸಾವಿರಾರು ಮಹಿಳೆಯರು ಮತ್ತು ಕಾರ್ಯಕರ್ತರು ಕಾರ್ಯಕ್ರಮಕ್ಕೆ ಆಗಮಿಸಿದ್ದಾರೆ. ಮಹಿಳೆಯರು ಹಸಿರು ಬಣ್ಣದ ಸೀರೆ ಉಟ್ಟಿದ್ದಾರೆ. ಅರಿಷಣ, ಕುಂಕುಮ ಕೆಂಪು, ಗಾಢ ನೀಲಿ ಬಣ್ಣದ ಸೀರೆಗಳನ್ನು ಹಲವರು ಉಟ್ಟಿದ್ದು, ಮೋದಿ ಸ್ವಾಗತಕ್ಕಾಗಿ ಕಾದು ಕುಳಿತಿದ್ದಾರೆ.
ಮೋದಿ ಸ್ವಾಗತಕ್ಕೆ ಸಜ್ಜು : ಅರಮನೆ ಮೈದಾನಕ್ಕೆ ಸಂಪ್ರದಾಯಿಕ ಉಡುಗೆ ತೊಟ್ಟು ಆಗಮಿಸಿರುವ ಮಹಿಳೆಯರು ನರೇಂದ್ರ ಮೋದಿ ಸ್ವಾಗತಕ್ಕಾಗಿ ಕಾಯುತ್ತಿದ್ದಾರೆ. ಬಹುತೇಕರು ಸಡಿಲ ಹೆರಳು ಹಾಕಿ, ಮಲ್ಲಿಗೆ ಮುಡಿದಿದ್ದಾರೆ. ಮಾಗಿದ ಅನುಭವ ಬಿಂಬಿಸುವಂತಿರುವ ಕೆಲ ಹಿರಿಯರ ಬಿಳಿಗೂದಲಿನಲ್ಲಿ ಕನಕಾಂಬರ ನಗುತಿದೆ.
ಕರ್ನಾಟಕದಲ್ಲಿ ನರೇಂದ್ರ ಮೋದಿ, ಕಾರ್ಯಕ್ರಮಗಳು
ಕಾರ್ಯಕ್ರಮಕ್ಕೆ ಆಗಮಿಸಿರುವ ಹಲವರು, ವೇದಾಂತ ಭಾರತಿ ಪ್ರಕಟಣೆಯ ತತ್ವಶಾಸ್ತ್ರದ ಪುಸ್ತಕಗಳು ಮತ್ತು ಇಸ್ಕಾನ್ ಪ್ರಕಟಣೆಯ ಧಾರ್ಮಿಕ ಪುಸ್ತಕಗಳನ್ನು ಗಮನಿಸುತ್ತಿದ್ದಾರೆ. ಸಂಸ್ಥೆಗಳ ಪ್ರತಿನಿಧಿಗಳು ಆಸಕ್ತರಿಗೆ ಲೇಖಕರು ಮತ್ತು ಗ್ರಂಥಗಳ ಪ್ರಾಮುಖ್ಯತೆ ವಿವರಿಸುತ್ತಿದ್ದಾರೆ.
ಕಾರ್ಯಕ್ರಮದಲ್ಲಿ ಪಾಲ್ಗೊಂಡವರಿಗೆ ಅದಮ್ಯ ಚೇತನ ಸಂಸ್ಥೆ ವತಿಯಿಂದ ಶುಚಿ-ರುಚಿಯಾದ ಊಟದ ವ್ಯವಸ್ಥೆ ಮಾಡಲಾಗಿಎ. ಮಹಿಳೆಯರಿಗೆ ಸಿಹಿಪೊಂಗಲ್, ಬಿಸಿಬೇಳೆಬಾತ್ ಮತ್ತು ಮೊಸರನ್ನಗಳನ್ನು ಅಡಿಕೆ ತಟ್ಟೆಗಳಲ್ಲಿ ವಿತರಿಸಲಾಗುತ್ತಿದೆ.