ಜಮೀರ್ ಗೆ ಎಚ್ಚರಿಕೆ ಕೊಟ್ಟ ದೇವೇಗೌಡರ ಮಾನಸ ಪುತ್ರ
Recommended Video
ಬೆಂಗಳೂರು, ಅಕ್ಟೋಬರ್ 17: ಜೆಡಿಎಸ್ ಹಾಗೂ ರೆಬೆಲ್ ಶಾಸಕರ ನಡುವಿನ ಮಾತಿನ ಚಕಮಕಿ ಮುಂದುವರೆದಿದೆ. ಈ ನಡುವೆ ಜೆಡಿಎಸ್ ವರಿಷ್ಠರ ಬಗ್ಗೆ ರೆಬೆಲ್ ಶಾಸಕ ಜಮೀರ್ ಅಹಮದ್ ಖಾನ್ ಅವರು ನೀಡಿದ ಹೇಳಿಕೆಯನ್ನು ವಿಧಾನಪರಿಷತ್ ಸದಸ್ಯ ಟಿ.ಎ ಶರವಣ ಖಂಡಿಸಿದ್ದಾರೆ.
ಪಕ್ಷದ ವರಿಷ್ಠರ ಬಗ್ಗೆ ಲಘುವಾಗಿ ಮಾತನಾಡಿರುವ ಶಾಸಕ ಜಮೀರ್ ಅಹಮದ್ ಖಾನ್ ಬೇಷರತ್ ಕ್ಷಮೆಯಾಚಿಸಬೇಕು. ಇಲ್ಲದಿದ್ದರೆ ತೀವ್ರ ಹೋರಾಟ ನಡೆಸಲಾಗುವುದು ಎಂದು ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಟಿ.ಎ. ಶರವಣ ಎಚ್ಚರಿಕೆ ನೀಡಿದ್ದಾರೆ.
'ಉಂಡ ಮನೆಗೆ ದ್ರೋಹ ಬಗೆದಿರುವ ನೀವು ತಕ್ಷಣವೇ ರಾಜೀನಾಮೆ ನೀಡಿ ಹೊರನಡೆಯಿರಿ. ನೀವು ಯಾಕೆ, ಹೇಗೆ ರಾಜಕೀಯಕ್ಕೆ ಬಂದಿರಿ ಎಂಬುದು ಎಲ್ಲರಿಗೂ ಗೊತ್ತಿದೆ. ಚುನಾವಣೆ ಮೂರು ದಿನ ಇರುವಾಗ ಎಲ್ಲಿ ಹೋಗಿದ್ದೀರಿ? ಹಣ ಖರ್ಚು ಮಾಡಿ ಶಾಸಕರನ್ನಾಗಿ ಮಾಡಿದವರು ಯಾರು?' ಎಂದು ಸುದ್ದಿಗೋಷ್ಠಿಯಲ್ಲಿ ಜಮೀರ್ ವಿರುದ್ಧ ಕಿಡಿಕಾರಿದರು.
ಕಾಂಗ್ರೆಸ್ ನಿಮ್ಮ ಪಾಲಿಗೆ ಸಮುದ್ರವಿರಬಹುದು,ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಅದೇ ಸಮುದ್ರದಲ್ಲಿ ಕೊಚ್ಚಿಹೋಗುತ್ತೀರಿ. ಪಕ್ಷದ ವರಿಷ್ಠರಾದ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಬಗ್ಗೆ ನಾಲಿಗೆ ಬಿಗಿಹಿಡಿದು ಮಾತನಾಡಬೇಕು ಎಂದು ಎಚ್ಚರಿಸಿದರು.
ದೇವೇಗೌಡರು ಆಲದ ಮರವಿದ್ದ ಹಾಗೆ. ಅವರ ಬಗ್ಗೆ ಲಘುವಾಗಿ ಮಾತನಾಡುತ್ತೀರಾ? ನಮ್ಮದು ನಾಯಕರನ್ನು ತಯಾರು ಮಾಡುವ ಫ್ಯಾಕ್ಟರಿ ಇದ್ದ ಹಾಗೆ. ನಾವು ಯಾವ ಪಕ್ಷವನ್ನೂ ಸೇರುವುದಿಲ್ಲ ಎಂದರು.
ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ತನ್ನ ವಿರುದ್ಧ ಸ್ಪರ್ಧಿಸಲು ಮೀಟರ್ ಇದೆಯೇ ಎಂದು ಪ್ರಶ್ನೆ ಮಾಡಿದ್ದೀರಿ. ಆ ಮೀಟರ್ ಕೊಟ್ಟವರ್ಯಾರು, 3 ಬಾರಿ ಶಾಸಕರನ್ನಾಗಿ, ಸಚಿವರನ್ನಾಗಿ ಮಾಡಿದ್ದು ಯಾವ ಪಕ್ಷ ಎಂಬುದು ನೆನಪಿರಲಿ. ಚಾಮರಾಜಪೇಟೆಯಲ್ಲಿ ನಿಮ್ಮ ವಿರುದ್ಧ ಸ್ಪರ್ಧಿಸಲು ಸಾಮಾನ್ಯ ಕಾರ್ಯಕರ್ತರು ಸಾಕು ಎಂದು ಹೇಳಿದರು.