ಝೊಮ್ಯಾಟೊ ನೌಕರನ ವರ್ತನೆಗೆ ಜನರು ಏನಂತಾರೆ ಗೊತ್ತಾ?
ಬೆಂಗಳೂರು, ಡಿಸೆಂಬರ್ 13: ಆನ್ಲೈನ್ ತಿಂಡಿ-ತಿನಿಸು ಪೂರೈಕೆಯ ನೌಕರ ಆಹಾರವನ್ನು ಡೆಲಿವರಿ ಮಾಡುವ ಮೊದಲೇ ಮಾರ್ಗಮಧ್ಯೆ ಅರ್ಧ ತಿಂದು ಇನ್ನರ್ಧ ಡೆಲಿವರಿ ನೀಡುತ್ತಿದ್ದ ಪ್ರಕರಣಕ್ಕೆ ಸಾಮಾಜಿಕ ಜಾಲತಾಣದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಕೆಲವರು ಆತನ ವರ್ತನೆಯನ್ನು ಕಟು ಶಬ್ದಗಳಿಂದ ಟೀಕಿಸಿದ್ದಾರೆ, ಇನ್ನೂ ಕೆಲವರು ಹಸಿವಿಗಾಗಿ ಆತ ಪರಿತಪಿಸುವ ಅಸಹಾಯಕತೆಯನ್ನು ಮಾನವೀಯ ದೃಷ್ಟಿಯಿಂದ ನೋಡಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.
ಆನ್ಲೈನ್ ಆಹಾರ ಪೂರೈಕೆ ಉದ್ಯಮ ನಗರ ಪ್ರದೇಶಗಳಲ್ಲಿ ವ್ಯಾಪಕವಾಗಿ ಹರಡುತ್ತಿದ್ದು, ಬೆಂಗಳೂರಿನಂತಹ ಬಹುದೊಡ್ಡ ನಗರದ ಜನರು ಇದೇ ಮಾಧ್ಯಮವನ್ನು ಅವಲಂಬಿಸಿದ್ದಾರೆ.
ವಿಶೇಷವಾಗಿ ಕೆಲಸದ ಸ್ಥಳಗಳು, ವೀಕೆಂಡ್ ಸಂದರ್ಭದ ವೇಳೆ ಆನ್ಲೈನ್ ಮೂಲಕವೇ ತಿಂಡಿ-ತಿನಿಸನ್ನು ಬುಕ್ ಮಾಡುವ ಪ್ರವೃತ್ತಿ ವ್ಯಾಪಕವಾಗಿ ಬೆಳೆಯುತ್ತಿದೆ. ಈ ನಡುವೆಯೇ ಝಮ್ಯಾಟೊ ನೌಕರನೊಬ್ಬ ಆಹಾರ ಪದಾರ್ಥವನ್ನು ಮಾರ್ಗಮಧ್ಯದಲ್ಲೇ ತಿನ್ನುತ್ತಿದ್ದ ಪ್ರಕರಣ ಗ್ರಾಹಕರನ್ನು ಬೆಚ್ಚಿಬೀಳಿಸಿದೆ.
'ನಾವೆಲ್ಲ ಸೇರಿ ಝೊಮ್ಯಾಟೊ ಡೆಲಿವರಿ ಬಾಯ್ ನ ಅನ್ನ ಕಿತ್ಕೊಬಾರ್ದಿತ್ತು'
ಈ ಪ್ರಕರಣವನ್ನು ಕೆಲವರು ಮಾನವೀಯ ದೃಷ್ಟಿಕೋನದಿಂದ ನೋಡಿದ್ದಾರೆ. ಈ ವಿಚಾರ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ನೂರಾರು ಜನರು ಅಭಿಪ್ರಾಯ ಹಂಚಿಕೊಂಡಿದ್ದು, ನೌಕರನ ತಪ್ಪನ್ನು ಒತ್ತಿ ಹೇಳುವುದಕ್ಕಿಂತ ಆತನ ಪರಿಸ್ಥಿತಿಗೆ ಏನು ಕಾರಣ ಎಂಬುದನ್ನು ಹೃದಯದಿಂದ ನೋಡಬೇಕೆಂದು ಸಲಹೆ ಮಾಡಿದ್ದಾರೆ. ಇನ್ನೂ ಕೆಲವರು ಇದು ಕೇವಲ ಹಸಿವಿನಿಂದ ಮಾಡಿದ ತಪ್ಪಲ್ಲ ಆತನ ಕುಚೇಷ್ಟೆಯಿಂದ ಆಗಿರುವ ಪ್ರಮಾದ ಎಂದೂ ಟೀಕಿಸಿದ್ದಾರೆ.
ಪೂರ್ತಿ ಊಟ ಮಾಡಬೇಕಿತ್ತು
ಹೇಗೂ ತಿಂದಿದ್ದಾರೆ ಹಸಿದರೆ ತಿನ್ನುವುದು ತಪ್ಪು ಎಂದು ಯಾರೂ ಹೇಳುವುದಿಲ್ಲ ಪೂರ್ತಿಯಾಗಿಯೇ ತಿನ್ನಬೇಕಿತ್ತು, ಆದರೆ ತಾವು ತಿಂದು ತಮ್ಮ ಎಂಜಿಲನ್ನು ಬೇರೆಯವರಿಗೆ ನೀಡಿರುವುದು ತಪ್ಪು ಎಂದು ಸುರೇಶ್ ಎನ್ನುವವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಅರ್ಧಂಬರ್ಧ ತಿಂದು ಆಹಾರ ಡೆಲಿವರಿ ಮಾಡ್ತಿದ್ದ ಝೊಮಾಟೊ ನೌಕರ ಅಮಾನತು
ಕದ್ದು ತಿಂದಿರುವುದು ಊಟವಷ್ಟೇ, ನಮ್ಮ ಆಸ್ತಿಯನ್ನೇನಲ್ಲ
ಕಳೆದ ಎರಡು ದಿನಗಳಿಂದ ಈತನ ಬಗ್ಗೆ ದೊಡ್ಡ ಚರ್ಚೆಯೇ ನಡೆಯುತ್ತಿದೆ. ಆದರೆ ಇಷ್ಟು ಚರ್ಚೆಯ ಅಗತ್ಯವಿಲ್ಲ ಯಾಕೆಂದರೆ ಆತ ತಿಂದಿದ್ದು ಕೇವಲ ಊಟವಷ್ಟೇ ನಮ್ಮ ಆಸ್ತಿಯನ್ನೇನಲ್ಲ ಎಂದು ಜಾಫರ್ ಖಾನ್ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ.
ನಿಜವಾದ ಕಾರಣ ತಿಳಿಯಬೇಕಿದೆ
ಕದ್ದು ತಿನ್ನುವುದು ಆತನ ನಿತ್ಯದ ಚಾಳಿಯಾಗಿತ್ತೇ? ಅಥವಾ ಆ ಒಂದು ಸಂದರ್ಭದಲ್ಲಿ ಹಸಿವು ತಡಿಯಲಾಗದೆ ತಿಂದಿದ್ದಾರಾ ಎಂದು ಪರಾಮರ್ಶೆ ಮಾಡಬೇಕಿದೆ ಎಂದು ಉಮರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಝೊಮ್ಯಾಟೋ ಕಂಪನಿಯದ್ದು ಒಳ್ಳೆಯ ನಿರ್ಧಾರ
ಆತನನ್ನು ಕೆಲಸದಿಂದ ತೆಗೆದು ಹಾಕಿ ಝೊಮ್ಯಾಟೊ ಕಂಪನಿ ಒಳ್ಳೆಯ ನಿರ್ಧಾರವನ್ನೇ ತೆಗೆದುಕೊಂಡಿದೆ. ಹಸಿವು ಹೆಚ್ಚಿದ್ದರಿಂದ ತಿಂದೆನೆಂದು ಕಾರಣ ಕೊಟ್ಟರೂ ಗ್ರಾಹಕರಿಂದ ಹಣಪಡೆದು ಕೊಡುವ ಆಹಾರವಾದ್ದರಿಂದ ಆ ಆಹಾರ ಅವನದಲ್ಲ ಮತ್ತೂ ಅವರು ಕಂಪನಿಯದೇನಲ್ಲ ಎಂದು ರಾಮಚಂದ್ರ ಎನ್ನುವವರು ಹೇಳಿಕೊಂಡಿದ್ದಾರೆ.
ಕೋಟಿ ಕೋಟಿ ಲೂಟಿ ಮಾಡುವವರು ನೆಮ್ಮದಿಯಾಗಿದ್ದಾರೆ
ಕೋಟಿ ಕೋಟಿ ಲೂಟಿ ಮಾಡ್ತಾರಲ್ಲ ಅವರನ್ನ ಸರಿ ಮಾಡ್ರೋ ಚಾಟಗಳ ಮೋದಲು ಪಾಪ ಅವ್ನ ಹಸಿವು ಎಷ್ಟಿತ್ತೋ ಏನೋ ತಿಂದೇಬಿಟ್ಟ ಏನ್ರೋ ಇವಾಗ ಏನ್ ಕೀತ್ಕೋಂಡ್ರೀ ಇವಾಗ ಕೆಲಸ ಹೋಯ್ತು ಅಷ್ಟೆ ತಾನೆ ಎಂದು ಅನಿಲ್ ಕಾಮೆಂಟ್ ಮಾಡಿದ್ದಾರೆ.