ಉದ್ಯಾನನಗರಿ ಬೆಂಗಳೂರಿನಲ್ಲೂ ಭೂಕಂಪ?!
ಮಂಡ್ಯ, ರಾಮನಗರ, ತುಮಕೂರಿನಲ್ಲಿ ಭೂಕಂಪದ ಅನುಭವವಾದ ಸುದ್ದಿಯೊಂದಿಗೆ ರಾಜಧಾನಿಯಲ್ಲೂ ಕೆಲವೆಡೆ ಭೂಮಿ ಕಂಪಿಸಿದ ಅನುಭವವಾಗಿರುವುದು ಆತಂಕ ಹೆಚ್ಚಿಸಿದೆ.
ಬೆಂಗಳೂರು, ಏಪ್ರಿಲ್ 18: ಮಂಡ್ಯ, ತುಮಕೂರು, ರಾಮನಗರ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಭೂಕಂಪವಾಗಿರುವ ಬಗ್ಗೆ ಸುದ್ದಿ ಹರಿದಾಡುತ್ತಿರುವಾಗಲೇ, ರಾಜಧಾನಿ ಬೆಂಗಳೂರಿನಲ್ಲೂ ಕೆಲವೆಡೆ ಭೂಕಂಪದ ಅನುಭವವಾಗಿದೆ ಎಂಬ ಮಾಹಿತಿ ಬಂದಿದೆ.
ಕೆಂಗೇರಿ, ಬಸವನಗುಡಿ, ಮಾಗಡಿ ರಸ್ತೆ, ಗಿರಿನಗರ, ಕಾಮಾಕ್ಷಿಪಾಳ್ಯ ಸೇರಿದಂತೆ ಕೆಲವು ಪ್ರದೇಶಗಳಲ್ಲಿ ಬೆಳಗ್ಗೆ 7:30 ರ ಸಮಯದಲ್ಲಿ 2-3 ಸೆಕೆಂಡ್ ಗಳ ಕಾಲ ಭೂಮಿ ಕಂಪಿಸಿದ ಅನುಭವವಾಗಿದೆ. ರಾಜಧಾನಿಯಲ್ಲಿ ಸಂಭವಿಸಿದ ಭೂಕಂಪದಿಂದಾಗಿ ನಟಿ ಲೀಲಾವತಿ ಅವರ ಮನೆಯ ಗೋಡೆ ಬಿರುಕುಬಿಟ್ಟಿದೆ.
ಯಲಹಂಕ ನ್ಯೂಟೌನ್, ಹನುಮಂತನಗರ, ಶ್ರೀನಗರ, ನೆಲಮಂಗಲ ಮುಂತಾದ ಸ್ಥಳಗಳಲ್ಲೂ ಭೂಮಿ ಕಂಪಿಸಿದೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ.[ಮಂಡ್ಯ, ರಾಮನಗರದಲ್ಲಿ ಭೂಕಂಪ: ಆತಂಕದಲ್ಲಿ ಜನರು ]
ತಳ್ಳಿಹಾಕಿದ ಹವಾಮಾನ ಇಲಾಖೆ
ಭೂಕಂಪದ ಸುದ್ದಿಯನ್ನು ಹವಾಮಾನ ಇಲಾಖೆ ತಳ್ಳಿಹಾಕಿದ್ದು, ರಾಜ್ಯದ ಯಾವ ಭಾಗದಲ್ಲೂ ಭೂಕಂಪವಾಗಿರುವ ಬಗ್ಗೆ ರಿಕ್ಟರ್ ಮಾಪನದಲ್ಲಿ ಮಾಹಿತಿ ದಾಖಲಾಗಿಲ್ಲ ಎಂದು ಸ್ಪಷ್ಟಪಡಿಸಿದೆ. ಆದರೆ ಬೆಳ್ಳಂಬೆಳಗ್ಗೆ ಭೂಮಿ ಕಂಪಿಸಿದ್ದು ಹಲವರ ಅನುಭವಕ್ಕೆ ಬಂದಿದ್ದು, ರಾಜಧಾನಿಯ ಜನರು ಆತಂಕದಲ್ಲಿರುವುದಂತೂ ಸತ್ಯ.