ಸಚಿವ ತನ್ವೀರ್ ಸೇಠ್ ಗೆ ರವಿ ಪೂಜಾರಿಯಿಂದ ಬೆದರಿಕೆ ಕರೆ
Recommended Video
ಬೆಂಗಳೂರು, ಜನವರಿ 10: ಪ್ರಾಥಮಿಕ ಶಿಕ್ಷಣ ಸಚಿವ ತನ್ವೀರ್ ಸೇಠ್ ಅವರಿಗೆ ಭೂಗತ ಪಾತಕಿ ರವಿ ಪೂಜಾರಿ ಗ್ಯಾಂಗಿನಿಂದ ಬೆದರಿಕೆ ಕರೆ ಬಂದಿದೆ. ಸತತವಾಗಿ ನಾಲ್ಕು ದಿನಗಳಿಂದ ಫೋನ್ ಕರೆ ಬಂದಿದ್ದರಿಂದ ಹೆದರಿದ ಸಚಿವರು, ಪೊಲೀಸರ ಮೊರೆ ಹೋಗಿದ್ದಾರೆ.
ರವಿ ಪೂಜಾರಿ ಗ್ಯಾಂಗಿನವರು ಫೋನ್ ಕರೆ ಮಾಡಿ, 10 ಕೋಟಿ ರು ನೀಡುವಂತೆ ಬೇಡಿಕೆ ಇಟ್ಟಿದ್ದಾರೆ. ದುಡ್ಡು ಕೊಡದಿದ್ದರೆ, ತಲೆ ತೆಗೆಯುವುದಾಗಿ ಹೇಳಿದ್ದಾರೆ. ಮೊದಲಿಗೆ ಸಚಿವರ ಮೊಬೈಲ್ ಫೋನಿಗೆ ಬೆದರಿಕೆ ಎಸ್ಎಂಎಸ್ ಬಂದಿದೆ. ನಂತರ ನಾಲ್ಕು ದಿನಗಳಿಂದ ಫೋನ್ ಕರೆ ಗಳು ಬಂದಿವೆ. ಮೊದಲಿಗೆ ಈ ಬಗ್ಗೆ ನಿರ್ಲಕ್ಷ್ಯ ತೋರಿದ ಸಚಿವ ತನ್ವೀರ್, ಈಗ ಈ ಬಗ್ಗೆ ದೂರು ನೀಡಿದ್ದಾರೆ.
ಭೂಗತ ಪಾತಕಿ ರವಿಪೂಜಾರಿಯಿಂದ ಸಾ.ರಾ. ಮಹೇಶ್ ಗೆ ಬೆದರಿಕೆ?
ಮುಖ್ಯಮಂತ್ರಿ ಸಿದ್ದರಾಮಯ್ಯ, ಗೃಹ ಸಚಿವ ರಾಮಲಿಂಗಾರೆಡ್ಡಿ ಹಾಗೂ ಪೊಲೀಸ್ ಉನ್ನತಾಧಿಕಾರಿಗಳಿಗೆ ವಿಷಯ ತಿಳಿಸಿದ್ದೇನೆ ಎಂದು ತನ್ವೀರ್ ಸೇಠ್ ಹೇಳಿದ್ದಾರೆ.
ಸದ್ಯ ತನ್ವೀರ್ ಸೇಠ್ ಅವರ ಮೊಬೈಲಿಗೆ ಬಂದಿರುವ ಸಂದೇಶಗಳು ಹಾಗೂ ಫೋನ್ ಕರೆಗಳ ಪರಿಶೀಲನೆ ನಡೆಸಲಾಗುತ್ತಿದೆ. ಈ ಬಗ್ಗೆ ತನಿಖೆ ನಂತರ ತಿಳಿದು ಬರಲಿದೆ ಎಂದು ಪೊಲೀಸ್ ಅಯುಕ್ತ ಸುನೀಲ್ ಕುಮಾರ್ ಹೇಳಿದ್ದಾರೆ.
ಈ ಮುಂಚೆ ಕೂಡಾ ಕರ್ನಾಟಕದ ಸಚಿವರೊಬ್ಬರಿಗೆ ರವಿ ಪೂಜಾರಿ ಗ್ಯಾಂಗಿನಿಂದ ಬೆದರಿಕೆ ಕರೆ ಬಂದಿತ್ತು. ಅಕ್ಟೋಬರ್ 2015ರಲ್ಲಿ ಮೀನುಗಾರಿಕಾ ಸಚಿವ ಕೆ ಅಭಯಚಂದ್ರ ಜೈನ್ ಅವರಿಗೆ ರವಿ ಪೂಜಾರಿ ಗ್ಯಾಂಗಿನಿಂದ ಇದೇ ರೀತಿ ಬೆದರಿಕೆ ಕರೆ ಬಂದಿದ್ದನ್ನು ಇಲ್ಲಿ ಸ್ಮರಿಸಬಹುದು.