ಸತ್ತ ಕುದುರೆಯ ಮಾತುಗಳೂ, ಜೆಡಿಎಸ್ ಕಾಂಗ್ರೆಸ್ ಮೈತ್ರಿಯೂ!
ಬೆಂಗಳೂರು, ಅಕ್ಟೋಬರ್ 9: ಮಂಡ್ಯ ಲೋಕಸಭಾ ಕ್ಷೇತ್ರದ ಉಪ ಚುನಾವಣೆ ಸಮ್ಮಿಶ್ರ ಸರ್ಕಾರದ ಮೈತ್ರಿ ಪಕ್ಷಗಳಾದ ಕಾಂಗ್ರೆಸ್ ಜೆಡಿಎಸ್ ನಲ್ಲೇ ಬೀದಿ ಜಗಳ ತರುವಂತಹ ವಾತಾವರಣ ಸೃಷ್ಟಿಯಾಗಿದೆ.
ಜೆಡಿಎಸ್ ಸಚಿವ ಸಿಎಸ್ ಪುಟ್ಟರಾಜು ಹಾಗೂ ಮಾಜಿ ಸಚಿವ ಕಾಂಗ್ರೆಸ್ ನ ಪರಾಜಿತ ಅಭ್ಯರ್ಥಿ ಎನ್ ಚೆಲುವರಾಯಸ್ವಾಮಿ ಪರಸ್ಪರ ಏಕವಚನದಲ್ಲಿ ನಿಂದಿಸುವ ಮಟ್ಟಿಗೆ ವಾಗ್ವಾದ ನಡೆಸಿದ್ದಾರೆ.
ಉಪಚುನಾವಣೆ: ಮಂಡ್ಯದಿಂದ ಸ್ಪರ್ಧಿಸಲು ಆರ್.ಅಶೋಕ್ ಸ್ಪಷ್ಟ ನಕಾರ, ಕಾರಣ ಏನು?
ನಿನ್ನೆಯಷ್ಟೇ ಮಾಜಿ ಸಚಿವ ಚೆಲುವರಾಯಸ್ವಾಮಿಯವರು ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಕುರಿತಂತೆ ಅಪಸ್ವರ ಎತ್ತಿದ್ದರು. ಇದಕ್ಕೆ ಮಂಗಳವಾರ ಪ್ರತಿಕ್ರಿಯೆ ನೀಡಿರುವ ಸಿಎಸ್ ಪುಟ್ಟರಾಜು ಸಮ್ಮಿಶ್ರ ಸರ್ಕಾರದಲ್ಲಿ ಸತ್ತ ಕುದುರೆಗಳು ಕೂಡ ಮಾತನಾಡುವಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು.
ಸಚಿವ ಪುಟ್ಟರಾಜು ಅವರ ಹೇಳಿಕೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಮಾಜಿ ಸಚಿವ ಚೆಲುವರಾಯಸ್ವಾಮಿ ಯೋಗ್ಯತೆ ಇಲ್ಲದವರು ಕೂಡ ಸಮ್ಮಿಶ್ರ ಸರ್ಕಾರದಲ್ಲಿ ಸಚಿವ ಸ್ಥಾನ ಪಡೆದು ಫಲಾನುಭವಿಯಾಗಿದ್ದಾನೆ. ಅಂತವನು ಮಾತನಾಡುವಾಗ ಎಚ್ಚರಿಕೆಯಿಂದ ಮಾತನಾಡಬೇಕು ಎಂದು ಏಕ ವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ.
'ಸೋಲಿಸಿದ್ದೇ ಬಾಯಿ ಮುಚ್ಚಿಕೊಂಡಿರಲಿ ಎಂದು, ಆದರೂ ಸತ್ತ ಕುದುರೆಗಳು ಮಾತನಾಡುತ್ತಿವೆ'
ದೇವೇಗೌಡರು ಹೇಳಿದ್ದರು ನೀನು ಹೇಗೆ ಗೆದ್ದು ಬಂದಿದ್ದೀಯಾ ಎಂದು, ಈಗ ಮಂಡ್ಯದಲ್ಲಿ ಜೆಡಿಎಸ್ ಗೆದ್ದಿರಬಹುದು, ಈಗಲೂ ಕೂಡ ಕಾಂಗ್ರೆಸ್ ಅಭ್ಯರ್ಥಿ ಹಾಕಿದರೆ ನೇರ ಪೈಪೋಟಿ ಕೊಡುವ ಶಕ್ತಿ ಇದೆ ಎಂದರು.
ಉಪಚುನಾವಣೆಯಲ್ಲಿ ದೊಡ್ಡ ನಾಯಕರ ಪ್ರತಿಷ್ಠೆಯ ದಂಗಲ್
ಸಮ್ಮಿಶ್ರ ಸರ್ಕಾರದ ಬಗ್ಗೆ ನಮಗೆ ಅಭ್ಯಂತರವಿಲ್ಲ ಆದರೆ ಮಂಡ್ಯ ಉಪಚುನಾವಣೆಗೆ ಕಾಂಗ್ರೆಸ್ ನಿಂದ ಅಭ್ಯರ್ಥಿಯನ್ನು ಹಾಕಲೇಬೇಕ ಎಂದು ಒತ್ತಾಯಿಸಿದರು.