ಸಾಂತ್ವನ ಹೇಳಲು ಬಾರದ ಮೇಯರ್ ವಿರುದ್ಧ ಆಕ್ರೋಶ
ಬೆಂಗಳೂರು, ಸೆಪ್ಟೆಂಬರ್ 9:ಮಿನರ್ವ ಸರ್ಕಲ್ ಬಳಿಯ ಶುಕ್ರವಾರ ರಾತ್ರಿ ಮಳೆ ಬೀಳುತ್ತಿದ್ದ ವೇಳೆಯಲ್ಲಿ ಟ್ರಾಫಿಕ್ ನಲ್ಲಿ ನಿಂತಿದ್ದ ಕಾರಿನ ಮೇಲೆ ಮರವೊಂದು ಉರುಳಿಬಿದ್ದ ಹಿನ್ನೆಲೆಯಲ್ಲಿ, ಕಾರಿನಲ್ಲಿದ್ದ ರಮೇಶ್ ಹಾಗೂ ಭಾರತಿ ಎಂಬ ದಂಪತಿ ಹಾಗೂ ಅದೇ ಕಾರಿನಲ್ಲಿದ್ದ ಅವರ ಸಂಬಂಧಿ ಜಗದೀಶ್ ಎಂಬುವರು ಸ್ಥಳದಲ್ಲೇ ಮೃತಪಟ್ಟಿದ್ದರು. ತೀವ್ರವಾಗಿ ಗಾಯಗೊಂಡಿದ್ದ ಇನ್ನಿಬ್ಬರನ್ನು ಸ್ಥಳೀಯರು ರಕ್ಷಿಸಿ ಆಸ್ಪತ್ರೆಗೆ ಸೇರಿಸಿದ್ದರು.
ಬಿಬಿಎಂಪಿ, ಸಂಚಾರಿ ಪೊಲೀಸ್, ಅಗ್ನಿಶಾಮಕ ದಳಕ್ಕೆ BIG THANKS !
ಮೃತ ದೇಹಗಳನ್ನು ವಿಕ್ಟೋರಿಯಾ ಆಸ್ಪತ್ರೆಗೆ ರಾತ್ರಿಯೇ ರವಾನಿಸಲಾಗಿತ್ತು. ಶನಿವಾರ ಬೆಳಗ್ಗೆ ಮೃತದೇಹಗಳ ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರು ಅವುಗಳನ್ನು ಸಂಬಂಧಿಗಳಿಗೆ ಹಸ್ತಾಂತರಿಸಿದ್ದಾರೆ.
ಈ ವೇಳೆ ದುಃಖತಪ್ತರಾದ ಜಗದೀಶ್ ಅವರ ಪತ್ನಿ, ತಮ್ಮ ಪತಿಯನ್ನು ಕೊಂದಿದ್ದು ಬಿಬಿಎಂಪಿಯೇ ಎಂದು ದೂರಿದ್ದಾರೆ. ಇತ್ತ, ಭಾರತಿ ಹಾಗೂ ರಮೇಶ್ ದಂಪತಿಯ ಆಪ್ತರು, ಮೇಯರ್ ಪದ್ಮಾವತಿ ಸ್ಥಳಕ್ಕೆ ಬಂದು ಈ ಸಾವುಗಳಿಗೆ ಉತ್ತರ ನೀಡಬೇಕು ಎಂದು ಹಠ ಹಿಡಿದರು.
ಅದರಲ್ಲೂ ಭಾರತಿ ಅವರು ಬಿಬಿಎಂಪಿ ಹೋ ಗಾರ್ಡ್ ಆಗಿ ಸೇವೆ ಸಲ್ಲಿಸುತ್ತಿದ್ದರಿಂದ ಕನಿಷ್ಠ ಸೌಜನ್ಯಕ್ಕಾದರೂ ಮೇಯರ್ ಬರಬೇಕಿತ್ತು ಎನ್ನುವುದು ಅವರ ಆಕ್ರೋಶವಾಗಿತ್ತು. ಮಧ್ಯಾಹ್ನ 2 ಗಂಟೆಯಾದರೂ ಈ ಸಮಸ್ಯೆ ಬಗೆಹರಿದಿರಲಿಲ್ಲ.
ಸರ್ಕಾರ ನೀಡುವ ಪರಿಹಾರ ನಮಗೆ ಬೇಡ. ಅಪ್ಪ-ಅಮ್ಮನನ್ನು ಕಳೆದುಕೊಂಡ ಒಂದು ಕುಟುಂಬ ಅನಾಥವಾಗಿದೆ. ಮತ್ತೊಂದು ಕುಟುಂಬ ತಂದೆಯನ್ನು (ಜಗದೀಶ್) ಕಳೆದುಕೊಂಡಿದೆ. ಇಂಥ ಪರಿಸ್ಥಿತಿಯಲ್ಲಿ ನಾವಿರುವಾಗ ಮೇಯರ್ ಪದ್ಮಾವತಿ ಬಂದು ಒಂದು ಸಾಂತ್ವನದ ಮಾತನ್ನೂ ಹೇಳಲಿಲ್ಲ. ಹಾಗಾಗಿ, ಮೇಯರ್ ವಿಕ್ಟೋರಿಯಾ ಆಸ್ಪತ್ರೆಗೆ ಬರಲೇಬೇಕು ಎಂದು ಸಂಬಂಧಿಗಳು ಆಕ್ರೋಶ ವ್ಯಕ್ತಪಡಿಸಿದರು.
ಈ ಅಪಘಾತ ನಡೆದಾಗ ರಾತ್ರಿಯೇ ಮಿನರ್ವ ಸರ್ಕಲ್ ಗೆ ಭೇಟಿ ನೀಡಿದ್ದ ಪದ್ಮಾವತಿ ಅವರು, ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದರಲ್ಲದೆ, ಅಲ್ಲಿಂದ ವಿಕ್ಟೋರಿಯಾ ಆಸ್ಪತ್ರೆಗೆ ತೆರಳಿ ವೈದ್ಯರಿಂದ ಗಾಯಾಳುಗಳ ಪರಿಸ್ಥಿತಿಯ ಬಗ್ಗೆ ಮಾಹಿತಿ ಪಡೆದಿದ್ದರು. ಇದು ವಾಹಿನಿಗಳಲ್ಲಿ ಪ್ರಸಾರವೂ ಆಗಿತ್ತು. ಆದರೆ, ಆ ವೇಳೆ ಮೃತರ ಸಂಬಂಧಿಕರು ವಿಕ್ಟೋರಿಯಾ ಆಸ್ಪತ್ರೆಗೆ ಬಂದಿರಲಿಲ್ಲ.