ಗರ್ಭಿಣಿಯರ ಆರೋಗ್ಯಕ್ಕಾಗಿ ಸರ್ಕಾರದಿಂದ ಪೌಷ್ಟಿಕ ಆಹಾರ
ಹುಟ್ಟುವ ಮಕ್ಕಳು ಆರೋಗ್ಯಕರವಾಗಿ ಇರಬೇಕೆಂಬ ಉದ್ದೇಶದಿಂದ ಗರ್ಭೀಣಿಯರ ಆರೋಗ್ಯಕ್ಕಾಗಿ ರಾಜ್ಯ ಸರ್ಕಾ ಮಧ್ಯಾಹ್ನದ ಬಿಸಿಯೂಟ ಒದಗಿಸಲು ಕ್ರಮಕೈಗೊಳ್ಳಲಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಉಮಾಶ್ರೀ ತಿಳಿಸಿದರು.
ಬೆಂಗಳೂರು, ನವೆಂಬರ್, 15: ಆರೋಗ್ಯವಂತ ಮಕ್ಕಳಿಗಾಗಿ ಮೊದಲು ಗರ್ಭಿಣಿಯರಿಗೆ ಆರೋಗ್ಯ ಚೆನ್ನಾಗಿರಬೇಕು. ಆದ್ದರಿಂದ ರಾಜ್ಯ ಸರ್ಕಾರ ಗರ್ಭಿಣಿಯರಿಗೆ ಪೌಷ್ಟಿಕ ಯುಕ್ತ ಮದ್ಯಾಹ್ನದ ಬಿಸಿಯೂಟ ಒದಗಿಸಲಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಸಚಿವೆ ಉಮಾಶ್ರೀ ತಿಳಿಸಿದರು.
ಆರೋಗ್ಯವಂತ ಮಕ್ಕಳಿಂದ ಮಾತ್ರ ಉತ್ತಮ ದೇಶ ಕಟ್ಟಲು ಸಾಧ್ಯ. ಹಾಗಾಗಿ ಸರ್ಕಾರ ಗರ್ಭಿಣಿಯರ ಆರೋಗ್ಯದ ಬಗ್ಗೆ ಹೆಚ್ಚಿನ ಒತ್ತನ್ನು ನೀಡುತ್ತಿದ್ದು ಗರ್ಭಿಣಿಯರಿಗಾಗಿ ಸರ್ಕಾರ ಅನೇಕ ಕಲ್ಯಾಣ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ ಎಂದು ಉಮಾಶ್ರೀ ಅವರು ತಿಳಿಸಿದರು.
ಮಕ್ಕಳ ದಿನಾಚರಣೆ ಅಂಗವಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನಗರದ ಬಾಲಭವನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಕ್ಕಳ ಕಲ್ಯಾಣ ಕ್ಷೇತ್ರದಲ್ಲಿ ಉತ್ತಮ ಸೇವೆ ಸಲ್ಲಿಸಿದ ವ್ಯಕ್ತಿಗಳಿಗೆ ರಾಜ್ಯ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.
ಗರ್ಭಾವಸ್ಥೆಯಲ್ಲಿ ಗರ್ಭಿಣಿಯರಿಗೆ ಉತ್ತಮ ರೀತಿಯ ಪೌಷ್ಟಿಕ ಆಹಾರ ನೀಡುವುದು ಹಾಗೂ ಅವರನ್ನು ಖುಷಿಯಾಗಿ ಇಡುವುದು ನಮ್ಮ ಜವಾಬ್ದಾರಿ. ಗರ್ಭಿಣಿಯರಿಗೆ ಬಿಸಿಯೂಟ ನೀಡುವ ಪ್ರಾಯೋಗಿಕ ಯೋಜನೆ ಈಗಾಗಲೇ ಜಾರಿಯಲ್ಲಿದ್ದು ಮುಂದಿನ ವರ್ಷದಿಂದ ರಾಜ್ಯದಾದ್ಯಂತ ವಿಸ್ತರಿಸುವ ಗುರಿ ಹೊಂದಲಾಗಿದೆ ಎಂದು ಅವರು ತಿಳಿಸಿದರು.
ಗರ್ಭಿಣಿಯರಿಗಾಗಿ ಅವರು ತೆಗೆದುಕೊಳ್ಳಬೇಕಾದ ಕ್ರಮಗಳನ್ನು ಒಳಗೊಂಡ ಸಿ.ಡಿ.ಯನ್ನು ಇಲಾಖೆ ಈಗಾಗಲೇ ಬಿಡುಗಡೆಗೊಳಿಸಿದ್ದು, ವಂಶೋದ್ಧಾರಕಿಯನ್ನು ಚೆನ್ನಾಗಿ ನೋಡಿಕೊಳ್ಳುವ ಜವಾಬ್ಧಾರಿ ನಮ್ಮ ಮೇಲಿದೆ ಎಂದು ಹೇಳಿದರು.
ಮಕ್ಕಳ ದಿನಾಚರಣೆ ಪ್ರಯುಕ್ತ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ನೀಡುವ ಪ್ರಶಸ್ತಿ ವಿಜೇತರಿಗೆ ಶುಭ ಕೋರಿದ ಅವರು ಅವಘಡಗಳಲ್ಲಿ ಬೇರೆಯವರ ಪ್ರಾಣ ರಕ್ಷಣೆಯಲ್ಲಿ ಸಾಹಸ ಮೆರೆದು ಪ್ರಾಣ ಕಳೆದುಕೊಂಡ ಮಕ್ಕಳ ಪಾಲಕರಿಗೆ ಸಾಂತ್ವನ ಹೇಳಿದರು.
ಕಾರ್ಯಕ್ರಮದಲ್ಲಿ ವಿಧಾನಸಭೆ ಸದಸ್ಯೆ ಹಾಗೂ ಸಂಸದೀಯ ಕಾರ್ಯದರ್ಶಿಗಳು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಶ್ರೀಮತಿ ಶಕುಂತಲಾ ಟಿ. ಶೆಟ್ಟಿ, ಸೇರಿದಂತೆ ಹಿರಿಯ ಅಧಿಕಾರಿಗಳು, ಮಕ್ಕಳು, ಪಾಲಕರು ಉಪಸ್ಥಿತರಿದ್ದರು.