ಮೀಟರ್ ಬಡ್ಡಿ ಕಟ್ಟದ ಮಹಿಳೆ ಮೇಲೆ ಹಲ್ಲೆ ಮಾಡಿದ ಲೇಡಿ ರೌಡಿ
ಬೆಂಗಳೂರು, ಮೇ 12: ರಾಜಧಾನಿ ಬೆಂಗಳೂರಲ್ಲಿ ಮತ್ತೆ ಮೀಟರ್ ಬಡ್ಡಿ ಸುದ್ದಿಯಲ್ಲಿದೆ. ಮೀಟರ್ ಬಡ್ಡಿ ಕಟ್ಟದ್ದಕ್ಕೆ ಮಹಿಳೆಯರೊಬ್ಬರ ಮೇಲೆ ಮಹಿಳೆಯೇ ಹಲ್ಲೆ ಮಾಡಿದ್ದಾರೆ. ಹಲ್ಲೆ ಮಾಡಿದ ಲೇಡಿ ರೌಡಿಯನ್ನು ಬಂಧಿಸಲಾಗಿದೆ.
ಸಾಲ ಪಡೆದಿದ್ದ ಹಣಕ್ಕೆ ಸರಿಯಾಗಿ ಬಡ್ಡಿ ಕಟ್ಟದ ಕೊತ್ತನೂರು ದಿಣ್ಣೆಯ ತಾಯಮ್ಮ ಅವರಿಗೆ ಬೆದರಿಕೆ ಹಾಕಿ ಹಲ್ಲೆ ಮಾಡಿದ ಯಶಸ್ವಿನಿ ಎಂಬುವರನ್ನು ಬಂಧಿಸಲಾಗಿದೆ. ಸುಬ್ರಮಣ್ಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಸವನಗುಡಿ ರೌಡಿ ಶೀಟರ್ ಯಶಸ್ವಿನಿ ವಿರುದ್ಧ ಅನೇಕರು ಚಕ್ರ ಬಡ್ಡಿ ಆರೋಪ ಮಾಡಿದ್ದಾರೆ.[ಸಕತ್ ಕಿಕ್ ಕೊಡುವ ರೌಡಿ ಶೀಟರ್ 'ಅಲಿಯಾಸ್' ಗಳು]
ತಾಯಮ್ಮ ಅವರು ಗರ್ಭಕೋಶದ ಶಸ್ತ್ರ ಚಿಕಿತ್ಸೆಗಾಗಿ ಯಶಸ್ವಿನಿಯಿಂದ 1 ಲಕ್ಷ ರುಪಾಯಿ ಸಾಲ ಪಡೆದಿದ್ದರು. ಆದರೆ ಸಾಲ ತೀರಿಸಲು ತಡವಾಗಿದ್ದರಿಂದ ಗುರುವಾರ ಬೆಳಿಗ್ಗೆ ತಾಯಮ್ಮ ಅವರ ಮನೆಗೆ ಬಂದ ಯಶಸ್ವಿನಿ ಸಾಲದ ಹಣ ಹಾಗೂ ಬಡ್ಡಿ ನೀಡುವಂತೆ ಬೆದರಿಕೆ ಹಾಕಿದ್ದಾರೆ.[ದರೋಡೆ ಮಾಡಿ ಮತ್ತೆ ಪಂಜರ ಸೇರಿದ ಪಾರಿವಾಳ ಮಂಜ]
ನಿಧಾನವಾಗಿ ಸಾಲ ತೀರಿಸುವುದಾಗಿ ತಾಯಮ್ಮ ಹೇಳಿದರೂ ಒಪ್ಪದ ಯಶಸ್ವಿನಿ ಹಲ್ಲೆ ಮಾಡಿದ್ದಾರೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು ಇನ್ನು ಹೆಚ್ಚಿನ ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದು ಪೂರ್ವ ವಲಯದ ಡಿಸಿಪಿ ಲೋಕೇಶ್ ಕುಮಾರ್ ತಿಳಿಸಿದ್ದಾರೆ.