ಮೈಸೂರು-ಬೆಂಗಳೂರು ಮೆಮು ರೈಲು ಸಂಚಾರ ಸದ್ಯಕ್ಕಿಲ್ಲ
ಬೆಂಗಳೂರು, ಮಾರ್ಚ್ 26: ಬೆಂಗಳೂರು-ಮೈಸೂರು ನಡುವೆ ಮೆಮು(ವಿದ್ಯುತ್ ಚಾಲಿತ) ರೈಲುಗಳ ಓಡಾಟಕ್ಕೆ ಇನ್ನು ಸಾಕಷ್ಟು ದಿನ ಕಾಯಬೇಕಿದೆ. ಬೆಂಗಳೂರು-ಮೈಸೂರು ನಡುವೆ ಜೋಡಿ ಹಳಿ ನಿರ್ಮಾಣ ಮತ್ತು ವಿದ್ಯುದೀಕರಣ ಕಾಮಗಾರಿ ಪೂರ್ಣವಾದರೂ ಮೆಮು ರೈಲು ಓಡಾಟ ಪ್ರಾರಂಭವಾಗಿಲ್ಲ.
ದಶಕದ ಬಳಿಕ ಪೂರ್ಣಗೊಂಡ ಕಾಮಗಾರಿಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದರು. ಆದರೆ ಜನರಿಗೆ ಇದರ ಪೂರ್ಣ ಉಪಯೋಗ ಸಿಗುವ ಲಕ್ಷಣ ಸದ್ಯಕ್ಕೆ ಕಾಣುತ್ತಿಲ್ಲ. ಮಂಡ್ಯ ಬಳಿಯ ಎಲಿಯೂರು ಸಬ್ ಸ್ಟೇಷನ್ ಗೆ ಕರ್ನಾಟಕ ವಿದ್ಯುತ್ ಪ್ರಸಾರ ನಿಗಮ ನಿಯಮಿತ ಇನ್ನೂ ವಿದ್ಯುತ್ ಸಂಪರ್ಕ ಕಲ್ಪಿಸದಿರುವ ಕಾರಣ ಮೆಮು ರೈಲು ಸಂಚಾರ ಸಾಧ್ಯವಿಲ್ಲ ಎಂದು ರೈಲ್ವೆ ಅಧಿಕಾರಿಗಳು ಹೇಳಿದ್ದಾರೆ.
ಬೈಯಪ್ಪನಹಳ್ಳಿ-ವೈಟ್ಫೀಲ್ಡ್ ನಡುವೆ ಮೆಮು ರೈಲು ಸಂಚಾರ
ಎಲೆಕ್ಟ್ರಿಕ್ ಲೋಕೋ ಬಳಕೆ: ಪ್ರಸ್ತುತ ಪೂರ್ಣ ಮಾರ್ಗಕ್ಕೆ ಬಿಡದಿ ಸಬ್ ಸ್ಟೇಷನ್ ನಿಂದ ವಿದ್ಯುತ್ ಸರಬರಾಜು ಮಾಡಲಾಗುತ್ತಿದೆ. ಶತಾಬ್ದಿ ರೈಲು ಸೇರಿದಂತೆ ಚೆನ್ನೈ-ಮೈಸೂರು ನಡುವೆ ಸಂಚರಿಸುವ ಕಾವೇರಿ ಎಕ್ಸ್ ಪ್ರೆಸ್ , ತಿರುಪತಿ ಚಾಮರಾಜನಗರ ಎಕ್ಸ್ ಪ್ರೆಸ್ ಹೌರಾ-ಮೈಸೂರು ವೀಕ್ಲಿ ಎಕ್ಸ್ ಪ್ರೆಸ್ ರೈಲುಗಳು ಬೆಂಗಳೂರು-ಮೈಸೂರು ನಡುವೆ ಎಲೆಕ್ಟ್ರಿಕ್ ಲೋಕೋ ಬಳಸಿಕೊಂಡೇ ಸಂಚರಿಸುತ್ತಿವೆ.
ಆದರೆ ಸತತವಾಗಿ ಉಪನಗರ ಮೆಮು ರೈಲು ಓಡಿಸಲು ಎಲಿಯೂರು ಸಬ್ ಸ್ಟೇಷನ್ ಕಾರ್ಯಾರಂಭ ಅತಿ ಅಗತ್ಯವಾಗಿದೆ. ಬಿಡದಿ ಕೇಂದ್ರದಲ್ಲಿ ಸಮಸ್ಯೆಯಾದರೆ ವೈಟ್ ಫೀಲ್ಡ್ ನಲ್ಲಿರುವ ಸ್ಟೇಷನ್ ನಿಂದ ಮೈಶೂರುವರೆಗೆ ವಿದ್ಯುತ್ ಸರಬರಾಜು ಕಷ್ಟ ಸಾಧ್ಯ ಎಂದು ಅಧಿಕಾರಿಗಳು ತಿಳಿಸಿದ್ದಾರೆ.