ತಪ್ಪೊಪ್ಪಿಕೊಂಡ ಶಂಕಿತ ಉಗ್ರ ಮೆಹದಿ ಮಸ್ರೂರ್ ಬಿಸ್ವಾಸ್
ಬೆಂಗಳೂರು, ಡಿ. 13: ಐಎಸ್ಐಎಸ್ ಪರ ಟ್ವಿಟ್ಟರ್ ಖಾತೆ @shammiwitness ನಿರ್ವಹಿಸುತ್ತಿದ್ದ ಆರೋಪಿ ಮೆಹದಿ ಮಸ್ರೂರ್ ಬಿಸ್ವಾಸ್ ತಪ್ಪೊಪ್ಪಿಕೊಂಡಿದ್ದಾನೆ. ಆರೋಪಿ ಮೆಹದಿ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಎಂ.ಎನ್. ರೆಡ್ಡಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. [ಜಾಣ ಮೆಹದಿ ಗೂಢಚಾರರ ಕಣ್ಣು ತಪ್ಪಿಸಿದ್ದು ಹೇಗೆ]
ಶುಕ್ರವಾರ ರಾತ್ರಿಯೇ ಡಿಸಿಪಿ ಸಂದೀಪ್ ಪಾಟೀಲ ನೇತೃತ್ವದಲ್ಲಿ ಸಿಸಿಬಿ ಪೊಲೀಸರು ಶಂಕಿತ ಉಗ್ರ ಮೆಹದಿಯನ್ನು ಬೆಂಗಳೂರಿನ ಜಾಲಹಳ್ಳಿಯ ಅಯ್ಯಪ್ಪನಗರದಲ್ಲಿ ಬಂಧಿಸಿದ್ದಾರೆ. ಶಂಕಿತ ಉಗ್ರನನ್ನು ವಿಚಾರಣೆಗೊಳಪಡಿಸಲಾಗಿದೆ. ಮೊದಲು ತನ್ನ ಅಕೌಂಟ್ ಹ್ಯಾಕ್ ಮಾಡಲಾಗಿದೆ ಎಂದು ವಾದಿಸುತ್ತಿದ್ದ. ನಂತರ ತಾನು ಟ್ಟಿಟ್ಟರ್ ಮೂಲಕ ಐಎಸ್ಐಎಸ್ ಸಂಘಟನೆ ಪರ ಸಂದೇಶ ರವಾನಿಸುತ್ತಿದ್ದುದನ್ನು ಒಪ್ಪಿಕೊಂಡಿದ್ದಾನೆಂದು ರೆಡ್ಡಿ ತಿಳಿಸಿದ್ದಾರೆ. [ಒಂದು ಕೈಯಲ್ಲಿ ಎಕೆ 47, ಇನ್ನೊಂದು ಕೈಯಲ್ಲಿ ಮಗು]
ಪಶ್ಚಿಮ ಬಂಗಾಳ ಮೂಲದ ಇಂಜಿನಿಯರ್ ಆಗಿರುವ ಮೆಹದಿ ಬೆಂಗಳೂರಿನಲ್ಲಿರುವ ಬಹುರಾಷ್ಟ್ರೀಯ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ. ಬೆಳಗ್ಗೆ, ರಾತ್ರಿ ಹಾಗೂ ಬಿಡುವಿನ ಸಂದರ್ಭಗಳಲ್ಲಿ ಟ್ವಿಟ್ಟರ್ ಸಂದೇಶ ರವಾನಿಸುತ್ತಿದ್ದ. ಯುವಕರನ್ನು ಐಎಸ್ಐಎಸ್ ಸೇರುವಂತೆ ಪ್ರೋತ್ಸಾಹಿಸುತ್ತಿದ್ದ. ಇಂಗ್ಲಿಷ್ ಮಾತನಾಡಬಲ್ಲ ಉಗ್ರರೊಂದಿಗೆ ಸಂಪರ್ಕದಲ್ಲಿದ್ದ ಎಂದು ತಿಳಿಸಿದ್ದಾರೆ.