ಕನ್ನಡಿಗರಿಗೆ ಉದ್ಯೋಗ : ಕರವೇಯಿಂದ ಇಂದು ಬೃಹತ್ ಪ್ರತಿಭಟನೆ, 8 ಬೇಡಿಕೆಗಳು
ಬೆಂಗಳೂರು, ಡಿಸೆಂಬರ್ 07 : ಕನ್ನಡಿಗರಿಗೆ ಕಡ್ಡಾಯವಾಗಿ ಉದ್ಯೋಗದಲ್ಲಿ ಮೀಸಲಾತಿ ನೀಡಬೇಕೆಂದು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ (ಟಿ.ಎ.ನಾರಾಯಣಗೌಡ ಬಣ) ರಾಜ್ಯ ಮಟ್ಟದ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದೆ.
ಹಿಂದಿ ಹೇರಿಕೆ ವಿರುದ್ಧ ಎಂಎನ್ಎಸ್, ಡಿಎಂಕೆ, ಕರವೇ ಕಿಡಿ
ಕರವೇ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ನೇತೃತ್ವದಲ್ಲಿ ಡಿಸೆಂಬರ್ 23ರಂದು ಪ್ರತಿಭಟನೆ ನಡೆಯಲಿದ್ದು, ಬೆಳಿಗ್ಗೆ 11 ಗಂಟೆಗೆ ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದಿಂದ ವಿಧಾನಸೌಧದ ವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆಯನ್ನು ಕರವೇ ಸದಸ್ಯರು ಮಾಡಲಿದ್ದಾರೆ. ಈ ಪ್ರತಿಭಟನಾ ಮೆರವಣಿಗೆಯಲ್ಲಿ ರಾಜ್ಯದ ನಾನಾ ಕಡೆಗಳಿಂದ ಪ್ರತಿಭಟನಾಕಾರರು ಭಾಗವಹಿಸಲಿದ್ದಾರೆ.
'ಕಡ್ಡಾಯವಾಗಿ ಕನ್ನಡಿಗರಿಗೆ ಉದ್ಯೋಗದಲ್ಲಿ ಮೀಸಲಾತಿ' ಪ್ರಮುಖ ಬೇಡಿಕೆಯಾಗಿರುವ ಈ ಪ್ರತಿಭಟನೆಯಲ್ಲಿ ಒಟ್ಟು 8 ಕನ್ನಡ ಸಂಬಂಧಿ ಇತರ ಬೇಡಿಕೆಗಳ ಈಡೇರಿಕೆಗೆ ಕರವೇ ಒತ್ತಾಯಿಸುತ್ತಿದೆ.
ರಕ್ಷಣಾ ವೇದಿಕೆಯಿಂದ ಅಕ್ಟೋಬರ್ 14ರಂದು ಕನ್ನಡಿಗರ ಸಮಾವೇಶ
ಕರವೇ ಬೇಡಿಕೆಗಳ ಪಟ್ಟಿ ಇಂತಿದೆ...
1) ರಾಜ್ಯಸರ್ಕಾರದ ಎಲ್ಲ ಇಲಾಖೆಗಳು ಮತ್ತು ರಾಜ್ಯ ಸರ್ಕಾರಿ ಸ್ವಾಮ್ಯದ ಎಲ್ಲ ಉದ್ದಿಮೆಗಳಲ್ಲಿ ಕರ್ನಾಟಕದ ಅಭ್ಯರ್ಥಿಗಳನ್ನೇ ಉದ್ಯೋಗಕ್ಕಾಗಿ ಆಯ್ಕೆ ಮಾಡಬೇಕು.
2) ರಾಜ್ಯದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎಲ್ಲ ಕೇಂದ್ರ ಸರ್ಕಾರಿ ಇಲಾಖಾ ಕಚೇರಿಗಳು ಕೇಂದ್ರ ಸರ್ಕಾರಿ ಸಾಮ್ಯದ ಎಲ್ಲ ಉದ್ದಿಮೆಗಳಲ್ಲಿ ಕಡ್ಡಾಯವಾಗಿ ಕನಿಷ್ಠ 10ನೇ ತರಗತಿಯ ವರೆಗೆ ಕನ್ನಡವನ್ನು ಒಂದು ಭಾಷೆಯಾಗಿ ವ್ಯಾಸಂಗ ಮಾಡಿದ ಕರ್ನಾಟಕದ ಅಭ್ಯರ್ಥಿಗಳನ್ನೇ ಉದ್ಯೋಗಕ್ಕೆ ನೇಮಕ ಮಾಡಿಕೊಳ್ಳಬೇಕು.
3) ಕರ್ನಾಟಕದಲ್ಲಿ ಕೆಲಸ ಮಾಡುತ್ತಿರುವ ಕಾರ್ಯ ನಿರ್ವಹಿಸುತ್ತಿರುವ ಎಲ್ಲ ಬಗೆಯ ಖಾಸಗಿ ಉದ್ದಿಮೆಗಳು ಕನಿಷ್ಠ 10ನೇ ತರಗತಿಯವರೆಗೆ ಕನ್ನಡವನ್ನು ಒಂದು ಭಾಷೆಯಾಗಿ ವ್ಯಾಸಂಗ ಮಾಡಿದ ಕರ್ನಾಟಕದ ಅಭ್ಯರ್ಥಿಗಳನ್ನೇ ಉದ್ಯೋಗಕ್ಕಾಗಿ ನೇಮಕ ಮಾಡಿಕೊಳ್ಳಬೇಕು.
4) ರಾಜ್ಯ ಮತ್ತು ಕೇಂದ್ರ ಸರ್ಕಾರದ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳು ಕಡ್ಡಾಯವಾಗಿ ಕನ್ನಡದಲ್ಲಿ ಇರಬೇಕು ಹಾಗೂ ಕನ್ನಡದಲ್ಲಿಯೇ ಉತ್ತರಿಸಲು ಅವಕಾಶ ಇರಬೇಕು. ಅವುಗಳ ಸಂದರ್ಶನಗಳೂ ಕನ್ನಡದಲ್ಲಿಯೇ ನಡೆಯಬೇಕು.
ಮೋದಿ, ರಾಹುಲ್ ಬಿಡಿ, ಕನ್ನಡಿಗರತ್ತ ಗಮನ ಕೊಡಿ!
5) ಕೇಂದ್ರ ಮತ್ತು ರಾಜ್ಯ ಸರ್ಕಾರಿ ಇಲಾಖೆಗಳು ಮತ್ತು ಉದ್ದಿಮೆಗಳಲ್ಲಿ ಗುತ್ತಿಗೆ ಅಥವಾ ದಿನಗೂಲಿ ಆಧಾರದಲ್ಲಿ ನೇಮಕ ಮಾಡಿಕೊಳ್ಳುವ ವೇಳೆ 10ನೇ ತರಗತಿಯ ವರೆಗೆ ಕನ್ನಡವನ್ನು ಒಂದು ಭಾಷೆಯಾಗಿ ವ್ಯಾಸಾಂಗ ಮಾಡಿದ ಕರ್ನಾಟಕದ ಅಭ್ಯರ್ಥಿಗಳನ್ನೇ ಉದ್ಯೋಗಕ್ಕಾಗಿ ಆಯ್ಕೆ ಮಾಡಬೇಕು.
6) ರಾಜ್ಯದಲ್ಲಿ ವ್ಯವಹಾರ ನಡೆಸುವ ಕೇಂದ್ರ ಸರ್ಕಾರಿ ಸ್ವಾಮ್ಯದ ಖಾಸಗಿ ಬ್ಯಾಂಕ್ಗಳು, ಗ್ರಾಮೀಣ ಬ್ಯಾಂಕ್ಗಳು ಉದ್ಯೋಗ ನೇಮಕಾತಿ ವೇಳೆ 10ನೇ ತರಗತಿಯವರೆಗೆ ಕನ್ನಡವನ್ನು ಒಂದು ಭಾಷೆಯಾಗಿ ವ್ಯಾಸಂಗ ಮಾಡಿದ ಕರ್ನಾಟಕದ ಅಭ್ಯರ್ಥಿಗಳನ್ನೇ ಉದ್ಯೋಗಕ್ಕಾಗಿ ಆಯ್ಕೆ ಮಾಡಬೇಕು.
7) ಸ್ಥಳೀಯರು ಅಥವಾ ಕರ್ನಾಟಕ ರಾಜ್ಯದವರು ಎಂದು ಪರಿಗಣಿಸಲು ಕರ್ನಾಟಕ ರಾಜ್ಯದಲ್ಲಿ ಕನಿಷ್ಠ 20 ವರ್ಷ ವಾಸಿಸಿರಬೇಕು ಅಲ್ಲದೇ ಕನ್ನಡ ಭಾಷಾ ಜ್ಞಾನವಿರಬೇಕು ಮತ್ತು ಕನ್ನಡದಲ್ಲಿ ಎಸ್ಎಸ್ಎಲ್ಸಿ ಓದಿದ ಶಾಲಾ ದಾಖಲೆ ಕಡ್ಡಾಯವಾಗಿ ಹೊಂದಿರಬೇಕು.
8) ಹೊರನಾಡಿನಲ್ಲಿ 10ನೇ ತರಗತಿಯವರೆಗೆ ಕನ್ನಡವನ್ನು ಒಂದು ಭಾಷೆಯಾಗಿ ಓದಿದ ಅಭ್ಯರ್ಥಿಗಳನ್ನು ಕನ್ನಡಿಗರೆಂದು ಪರಿಗಣಿಸಿ ಒಳನಾಡಿನ ಅಭ್ಯರ್ಥಿಗಳಿಗೆ ನೀಡುವ ಎಲ್ಲ ಸೌಲಭ್ಯಗಳನ್ನೂ ನೀಡಬೇಕು.