ಮೇ 15ಕ್ಕೆ ಮತ ಎಣಿಕೆ, 18ನೇ ತಾರೀಕು ಸಂಭ್ರಮದ ಜನ್ಮ ದಿನ: ದೇವೇಗೌಡ
ಬೆಂಗಳೂರು, ಮಾರ್ಚ್ 27 : "ಕರ್ನಾಟಕ ವಿಧಾನಸಭೆಗೆ ಮೇ 12ಕ್ಕೆ ಮತದಾನ ನಿಗದಿಯಾಗಿದೆ. ಮೇ 15ಕ್ಕೆ ಮತ ಎಣಿಕೆ ಹಾಗೂ ಮೇ 18ನೇ ತಾರೀಕು ಇಡೀ ರಾಜ್ಯದ ಜೆಡಿಎಸ್ ಕಾರ್ಯಕರ್ತರು ನನ್ನ ಹುಟ್ಟುಹಬ್ಬದಲ್ಲಿ ಭಾಗವಹಿಸುತ್ತಾರೆ" ಎಂದು ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಂಗಳವಾರ ಹೇಳಿದರು.
ಜೆಡಿಎಸ್ ಗೆಲುವಿನ ಬಗ್ಗೆ ಸೂಚ್ಯವಾಗಿ ಮಾತನಾಡಿದ ಅವರು, ತಮ್ಮ ಹುಟ್ಟುಹಬ್ಬವನ್ನು ಖುಷಿಯಿಂದ ಆಚರಿಸುವ ಸನ್ನಿವೇಶ ನಿರ್ಮಾಣ ಆಗುವ ಬಗ್ಗೆ ನಗುಮುಖದಿಂದಲೇ ಹೇಳಿದರು. "ತಮಗೆ ಬೇಕಾದ ಜಾತಿಗಳ ಅಧಿಕಾರಿಗಳನ್ನು ಆಡಳಿತಾರೂಢ ಸರಕಾರದವರು ಈಗಾಗಲೇ ನೇಮಿಸಿಕೊಂಡಿದ್ದಾರೆ" ಎಂದು ಅವರು ಆರೋಪಿಸಿದರು.
ಕರ್ನಾಟಕ ವಿಧಾನಸಭೆ ಚುನಾವಣೆಯ ಮುಖ್ಯ ದಿನಾಂಕಗಳು
ಇನ್ನು ಈಗಾಗಲೇ ಬಹುಜನ ಸಮಾಜ ಪಕ್ಷದ ಜತೆಗೆ ಮೈತ್ರಿ ಮಾಡಿಕೊಂಡಿದ್ದಾಗಿದೆ. ಇನ್ಯಾವುದೇ ಪಕ್ಷದ ಜತೆಗೆ ಹೊಂದಾಣಿಕೆ ಮಾತಿಲ್ಲ ಎಂದು ಅವರು ಹೇಳಿದರು. ದೇವೇಗೌಡರು ಕಾಂಗ್ರೆಸ್ ಜತೆಗೆ ಚುನಾವಣೆಪೂರ್ವ ಮೈತ್ರಿ ಮಾಡಿಕೊಳ್ಳುತ್ತಾರೆ ಎಂದು ಕೆಲವು ಮಾಧ್ಯಮಗಳಲ್ಲಿ ಸುದ್ದಿಯಾಗಿತ್ತು. ಆ ಸುದ್ದಿಯನ್ನು ದೇವೇಗೌಡರು ತಳ್ಳಿಹಾಕಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.