ಬೆಂಗಳೂರು: ಪಟಾಕಿ ಸಿಡಿತದಿಂದ 41 ಮಂದಿಗೆ ಗಾಯ
ಬೆಂಗಳೂರು, ಅಕ್ಟೋಬರ್, 31: ದೀಪಾವಳಿ ಸಂಭ್ರಮದ ಖುಷಿ ಇಮ್ಮಡಿಗೊಳಿಸಲು ಪಟಾಕಿ ಸಿಡಿಸಲು ಹೋಗಿ ಬೆಂಗಳೂರಿನ ವಿವಿಧೆಡೆ ಒಟ್ಟು 41 ಮಂದಿ ಗಾಯಗೊಂಡಿದ್ದಾರೆ. ಇದರಲ್ಲಿ ಬಹುತೇಕ ಮಂದಿಗೆ ಕಣ್ಣಿನ ಭಾಗಕ್ಕೆ ಹೆಚ್ಚು ಗಾಯಗಳಾಗಿದ್ದು, 19 ಮಂದಿ ನಾರಾಯಣ ನೇತ್ರಾಲಯದಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ.
19 ಜನರ ಪೈಕಿ 8 ಮಕ್ಕಳು, ಇಬ್ಬರು ವಯಸ್ಕರೂ ಸೇರಿದ್ದಾರೆ, ಇನ್ನು ಮಿಂಟೋ ಕಣ್ಣಿನ ಆಸ್ಪತ್ರೆಯಲ್ಲೂ 5 ಮಂದಿ ಚಿಕಿತ್ಸೆ ಪಡೆದುಕೊಂಡಿದ್ದು, ಗಂಭೀರವಾಗಿ ಗಾಯಗೊಂಡಿದ್ದ ಮೂವರನ್ನು ಆಸ್ಪತ್ರೆಗೆ ದಾಖಲಿಸಿಕೊಳ್ಳಲಾಗಿದೆ.
ಇನ್ನು ಬೆಂಗಳೂರು ನೇತ್ರಾಲಯದಲ್ಲಿ 6 ಮಂದಿ ಹಾಗು, ಮೋದಿ ಕಣ್ಣಿನ ಆಸ್ಪತ್ರೆಯಲ್ಲೂ ಇಬ್ಬರು ಮಕ್ಕಳಿಗೆ ಚಿಕಿತ್ಸೆ ನೀಡಲಾಗಿದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಪಟಾಕಿಯಿಂದ ಗಾಯಗೊಂಡವರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ.
ಪಟಾಕಿ ಸಿಡಿತದ ದುಷ್ಪರಿಣಾಮಗಳ ಕುರಿತು ಈ ಬಾರಿ ಹೆಚ್ಚಾಗಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿರುವುದರಿಂದ ಗಾಯಾಳುಗಳ ಸಂಖ್ಯೆಯಲ್ಲಿ ಗಣನೀಯವಾಗಿ ಇಳಿಮುಖವಾಗಿದೆ ಎನ್ನಲಾಗಿದೆ.
ಪಟಾಕಿ ಸಿಡಿತದಿಂದ ಹೆಚ್ಚಾಗಿ ಕಣ್ಣಿನ ಸಮಸ್ಯೆಗಳನ್ನು ಎದುರಾಗುತ್ತಿದ್ದು, ಎಲ್ಲಾ ಕಣ್ಣಿನ ಆಸ್ಪತ್ರೆಗಳಲ್ಲಿ ವಿಶೇಷ ಘಟಕಗಳನ್ನು ಸ್ಥಾಪಿಸಲಾಗಿದೆ.
ಪಟಾಕಿ ಖರೀದಿಯಲ್ಲಿ ಇಳಿಮುಖ...
ಹಿಂದಿನ ವರ್ಷಗಳಿಗೆ ಹೋಲಿಸಿದರೆ ಈ ಬಾರಿ ಪಟಾಕಿ ಖರೀದಿಗೆ ಸಿಲಿಕಾನ್ ಸಿಟಿಯ ಜನ ನಿರುತ್ಸಾಹ ತೋರಿರುವುದು ಕಂಡುಬಂದಿದೆ. ಪಟಾಕಿ ಅವಘಡಗಳ ಕುರಿತು ಹೆಚ್ಚು ಜಾಗೃತಿ ಮೂಡಿಸಿರುವ ಹಿನ್ನೆಲಯಲ್ಲಿ ಪೋಷಕರು ಪಟಾಕಿ ಖರೀದಿಗೆ ಹಿಂದೇಟು ಹಾಕಿದ್ದಾರೆ.
ಪಟಾಕಿಗಳ ಬದಲು ಮಕ್ಕಳಿಗೆ ಹೆಚ್ಚಾಗಿ ಆಟಿಕೆಗಳನ್ನು ಕೊಡಿಸುವ ಪ್ರವೃತ್ತಿಯನ್ನು ಪೋಷಕರು ಹೆಚ್ಚಾಗಿ ಬೆಳೆಸಿಕೊಂಡಿದ್ದು, ಇದು ಕೂಡ ಪಟಾಕಿ ಖರೀದಿ ಇಳಿಮುಖವಾಗಲು ಪ್ರಮುಖ ಕಾರಣ ಎಂದು ವೈದ್ಯರು ಹೇಳುತ್ತಿದ್ದಾರೆ.
ಈ ದೀಪಾವಳಿ ಪರಿಸರ ಸ್ನೇಹಿ ಆಗಲಿದೆಯೆ?
ಹಿಂದಿನ ವರ್ಷಗಳಿಗೆ ಹೋಲಿಸಿದರೆ ಈ ಬಾರಿ ಪಟಾಕಿ ಖರೀದಿಯಲ್ಲಿ ಇಳಿಮುಖವಾಗಿದ್ದು, ಮುಖ್ಯವಾಗಿ ರಾಜಧಾನಿ ಬೆಂಗಳೂರಿನ ಮಾಲಿನ್ಯದಲ್ಲೂ ಇಳಿಮುಖವಾಗುವ ಸಾಧ್ಯತೆ ಇದೆ ಎಂದು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ತಿಳಿಸಿದ್ದಾರೆ.
ಮಾಲಿನ್ಯ ಪ್ರಮಾಣವನ್ನು ಅಳೆಯುವುದಕ್ಕಾಗಿಯೇ ಬೆಂಗಳೂರಿನ ಹದಿನೈದು ಸ್ಥಳಗಳಲ್ಲಿ ನಿರಂತರವಾಗಿ ಮಾಲಿನ್ಯ ಮಾಪಕಗಳನ್ನು ಇಟ್ಟು ಪರೀಕ್ಷೆ ಮಾಡಲಾಗುತ್ತಿದೆ.
ಶನಿವಾರದ ಮಾಲಿನ್ಯ ಪ್ರಮಾಣ ಆಶಾದಾಯಕವಾಗಿದೆ. ಭಾನುವಾರ ಮಾಲಿನ್ಯ ಪ್ರಮಾಣ ಸ್ವಲ್ಪ ಹೆಚ್ಚಾಗುವ ಸಾಧ್ಯತೆ ಇದ್ದು, ಕಳೆದ ವರ್ಷದ ಇದೇ ದಿನಗಳನ್ನು ಹೋಲಿಕೆ ಮಾಡಿ ನೋಡಿದರೆ ಮಾಲಿನ್ಯ ಪ್ರಮಾಣ ನಿಖರಾಗಿ ಗೊತ್ತಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗಾಯಾಳುಗಳ ಸಂಖ್ಯೆಯಲ್ಲೂ ಇಳಿಮುಖ..
ನಗರದಲ್ಲಿರುವ ನಾರಾಯಣ ನೇತ್ರಾಲಯ, ವಿಕ್ಟೋರಿಯಾ, ಮಿಂಟೋ ಕಣ್ಣಿನ ಆಸ್ಪತ್ರೆ, ಡಾ.ಅಗರ್ ವಾಲ್, ಶಂಕರ್ ಕಣ್ಣಿನ ಆಸ್ಪತ್ರೆ ಸೇರಿದಂತೆ ವಿವಿಧ ಆಸ್ಪತ್ರೆಗಳು ನೀಡಿರುವ ಮಾಹಿತಿ ಪ್ರಕಾರ, 2010 ರಲ್ಲಿ 162, 2011ರಲ್ಲಿ 185, 2012ರಲ್ಲಿ 212, 2013ರಲ್ಲಿ 238, ಹಾಗೂ 2014ರಲ್ಲಿ 72ಮಂದಿ ಗಾಯಗೊಂಡಿದ್ದಾರೆ ಎನ್ನಲಾಗಿದೆ.