ಬಿಬಿಎಂಪಿ ಮೇಯರ್ ಮನಿಲಾ ಪ್ರವಾಸ ರದ್ದು
ಬೆಂಗಳೂರು,ಜು.24: ಕಸ ವಿಲೇವಾರಿ ಘಟಕದ ತಂತ್ರಜ್ಞಾನವನ್ನು ವೀಕ್ಷಿಸಲು ಬಿಬಿಎಂಪಿ ಮೇಯರ್ ಮತ್ತು ಅಧಿಕಾರಿಗಳ ತಂಡ ಕೈಗೊಳ್ಳಬೇಕಿದ್ದ ಮನಿಲಾ ಪ್ರವಾಸ ರದ್ದಾಗಿದೆ.
ಬಿಬಿಎಂಪಿ ಅಧಿಕಾರಿಗಳು ತಮ್ಮ ಅಧ್ಯಯನ ಪ್ರವಾಸವನ್ನು ರದ್ದು ಮಾಡಿ, ಬೆಂಗಳೂರಿಗೆ ಮನಿಲಾದಲ್ಲಿರುವ ಜಿ-20 ಎನ್ವಿರಾನ್ಮೆಂಟಲ್ ಸಲ್ಯೂಷನ್ಸ್ ಕಂಪೆನಿ ಅಧಿಕಾರಿಗಳನ್ನು ಕರೆಸಿ ಘಟಕ ಸ್ಥಾಪನೆಯ ಬಗ್ಗೆ ಗುರುವಾರ ಚರ್ಚೆ ನಡೆಸಿದ್ದಾರೆ.
ಮೇಯರ್ ಕಟ್ಟೆ ಸತ್ಯನಾರಾಯಣ, ಘನ ತ್ಯಾಜ್ಯ ನಿರ್ವಹಣೆಗಾಗಿಯೇ ವಿಶೇಷ ಆಯುಕ್ತರಾಗಿ ನೇಮಕಗೊಂಡ ದರ್ಪಣ ಜೈನ್ ಮತ್ತು ಇತರ ಅಧಿಕಾರಿಗಳಿಗೆ ಘಟಕದಲ್ಲಿರುವ ತಂತ್ರಜ್ಞಾನದ ಬಗ್ಗೆ ಮನಿಲಾ ಕಂಪೆನಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ನಗರದ ಕಸ ವಿಲೇವಾರಿ ಸಮಸ್ಯೆ ನಿವಾರಿಸಲು ನಾನಾ ಪ್ರಯತ್ನಗಳನ್ನು ನಡೆಸುತ್ತಿರುವ ಬಿಬಿಎಂಪಿ ಅಧಿಕಾರಿಗಳಿಗೆ 12 ದಿನಗಳ ಹಿಂದೆ ಮನಿಲಾದ ಜಿ-20 ಎನ್ವಿರಾನ್ಮೆಂಟಲ್ ಸಲ್ಯೂಷನ್ಸ್ ಕಂಪೆನಿ ಕಸ ವಿಲೇವಾರಿ ತಂತ್ರಜ್ಞಾನ ಘಟಕ ನಿರ್ಮಾಣದ ಬಗ್ಗೆ ಪವರ್ ಪಾಯಿಂಟ್ ಮೂಲಕ ವಿವರಿಸಿತ್ತು.
ಈ ಕಂಪೆನಿಯ ತಂತ್ರಜ್ಞಾನ ಬಿಬಿಎಂಪಿ ಅಧಿಕಾರಿಗಳಿಗೆ ಇಷ್ಟವಾಗಿತ್ತು. ಈ ಹಿನ್ನಲೆಯಲ್ಲಿ ಕಂಪೆನಿಯ ತಂತ್ರಜ್ಞಾನವನ್ನು ಪರಿಶೀಲಿಸಲು ಮೇಯರ್ ಸೇರಿದಂತೆ ಅಧಿಕಾರಿಗಳ ತಂಡ ಫಿಲಿಪೈನ್ಸ್ಗೆ ಹೋಗಲಿದ್ದಾರೆ ಎಂದು ಹೇಳಲಾಗುತಿತ್ತು.[ಬೆಂಗಳೂರಿನ ಕಸ ಸಮಸ್ಯೆ ನಿವಾರಿಸಲು ಮನಿಲಾ ಮಂತ್ರ]
ಈ ಸುದ್ದಿ ಮಾಧ್ಯಮಗಳಲ್ಲಿ ಪ್ರಕಟಗೊಳ್ಳುತ್ತಿದ್ದಂತೆ ಓದುಗರಿಂದ, ರಾಜಕೀಯ ಪಕ್ಷಗಳಿಂದ ವಿರೋಧ ವ್ಯಕ್ತವಾಗಿತ್ತು. ವಿರೋಧಕ್ಕೆ ಎಚ್ಚೆತ್ತ ಬಿಬಿಎಂಪಿ ಅಧಿಕಾರಿಗಳು ಈ ಪ್ರವಾಸವನ್ನೇ ರದ್ದು ಮಾಡಿ ಮನಿಲಾದ ಕಂಪೆನಿಯ ಅಧಿಕಾರಿಗಳನ್ನು ಬೆಂಗಳೂರಿಗೆ ಕರೆಸಿ ಇದೀಗ ಘಟಕ ಸ್ಥಾಪನೆಯ ಬಗ್ಗೆ ಚರ್ಚೆ ನಡೆಸುತ್ತಿದ್ದಾರೆ.