ಜೆಪಿ ಪಾರ್ಕ್ನಲ್ಲಿ ಅತ್ಯಾಚಾರ ಯತ್ನ: ಬಸ್ ಚಾಲಕನ ಬಂಧನ
ಬೆಂಗಳೂರು, ಫೆಬ್ರವರಿ 26 : ನಗರದ ಜಯಪ್ರಕಾಶ ನಾರಾಯಣ ಉದ್ಯಾನ(ಜೆಪಿ ಪಾರ್ಕ್)ನಲ್ಲಿ 31 ವರ್ಷದ ಮಹಿಳೆ ಮೇಲೆ ಅತ್ಯಾಚಾರ ಮಾಡಲು ಯತ್ನಿಸಿದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಮತ್ತಿಕೆರೆ ಸಮೀಪದಲ್ಲಿರುವ ಜೆಪಿ ಉದ್ಯಾನದ ಸುಮಾರು 85 ಎಕರೆ ವಿಸ್ತೀರ್ಣ ಹೊಂದಿದೆ. ದಿನನಿತ್ಯ ಸಾವಿರಾರು ಮಂದಿ ವಾಯುವಿಹಾರಕ್ಕೆಂದು ಬರುತ್ತಾರೆ. ಆದರೆ ಅಲ್ಲಿ ಸಿಸಿಟಿವಿ ಕ್ಯಾಮೆರಾವಾಗಲಿ, ಪೊಲೀಸ್ ಕಣ್ಗಾವಲು ಕೂಡ ಇಲ್ಲದಿರುವುದು ಕಳವಳಕಾರಿ ಸಂಗತಿಯಾಗಿದೆ.
ಮಹಿಳೆಯನ್ನು ಅತ್ಯಾಚಾರ ಮಾಡಲು ಯತ್ನಿಸಿದ ಶ್ಯಾಮ್(28) ಬಂಧಿಸಲಾಗಿದೆ. ಜೆಪಿ ಉದ್ಯಾನವು ಬೆಂಗಳೂರಿನ ಅತಿದೊಡ್ಡ ಪಾರ್ಕ್ ಗಳಲ್ಲಿ ಮೂರನೇ ಸ್ಥಾನದಲ್ಲಿದೆ. ಈ ಘಟನೆಯು ಹಾಡಹಗಲೇ ನಡೆದಿದೆ. ಅದರಲ್ಲೂ ಕೆಲವೇ ಕೆಲವು ಭದ್ರತಾ ಸಿಬ್ಬಂದಿಗಳಿದ್ದಾರೆ. ಶ್ಯಾಮ್ ಕೆಎಸ್ಆರ್ ಟಿಸಿ ಬಸ್ ಚಾಲಕನಾಗಿದ್ದಾನೆ.
ಚಾಲಕನನ್ನು ಬಂಧಿಸಲಾಗಿದ್ದು, ಎಫ್ ಐಆರ್(#53 ,2018 ) ಪ್ರಕರಣ ದಾಖಲಿಸಲಾಗಿದೆ. ಆಕೆ ಗೃಹಿಣಿಯಾಗಿದ್ದು ಬೆಳಗ್ಗೆ ಸುಮಾರು 11 ಗಂಟೆಯ ವೇಳೆ ವಾಕಿಂಗ್ ಗಾಗಿ ಉದ್ಯಾನಕ್ಕೆ ಹೋಗುತ್ತಿದ್ದರು. ಅಂದು ಕೂಡ ಅದೇ ರೀತಿ ತೆರಳಿದ್ದರು. ಆತ ಆಕೆಯನ್ನು ಹಿಂಬಾಲಿಸಿಕೊಂಡು ಬಂದಿದ್ದು ಆಕೆಯ ಮೇಲೆ ಅತ್ಯಾಚಾರ ವೆಸಗಲು ಯತ್ನಿಸಿದ್ದಾನೆ.
ಆಕೆಯು ಕೂಗಲು ಆಗದಂತೆ ಬಾಯಿಯನ್ನು ಬಿಗಿಯಾಗಿ ಮುಚ್ಚಿದ್ದು, ಅವರಿಬ್ಬರ ನಡುವೆ ಕಾದಾಟ ನಡೆದಿದೆ. ಒಂದೊಮ್ಮೆ ಈ ವಿಚಾರವನ್ನು ಯಾರ ಬಳಿಯಾದರೂ ಹೇಳಿದಲ್ಲಿ ಆಕೆಯನ್ನು ಕೊಲೆ ಮಾಡುವಂತೆ ಬೆದರಿಕೆ ಕೂಡ ಹಾಕಿದ್ದ ಎನ್ನಲಾಗಿದೆ.
ತಕ್ಷಣ ಆತನಿಂದ ಬಿಡಿಸಿಕೊಂಡು ಕೂಗಿ ಅಲ್ಲಿರುವವರನ್ನು ಕರೆದಿದ್ದಾಳೆ. ಭದ್ರತಾ ಸಿಬ್ಬಂದಿಗಳು ಬಂದು ಆತನನ್ನು ಥಳಿಸಿ ಯಶವಂತಪುರ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ. ವಿಚಾರಣೆ ವೇಳೆ ಆತನ ಹೆಸರು ಶ್ಯಾಮ್ ಹಾಗೂ ಆತ ಮೂಲತಃ ಹಾಸನ ಜಿಲ್ಲೆಯವನಾಗಿದ್ದು ಕೆಎಸ್ ಆರ್ ಟಿಸಿ ಬಸ್ ಚಾಲಕನಾಗಿ ಕೆಲಸ ನಿರ್ವಹಿಸುತ್ತಿದ್ದ ಎಂದು ತಿಳಿದುಬಂದಿದೆ.