ದೇಶ ಮುನ್ನಡೆಸುವ ಶಕ್ತಿ ಮಮತಾ ಅವರಿಗಿದೆ ಎಂದ ಕುಮಾರಸ್ವಾಮಿ
ಬೆಂಗಳೂರು, ಜನವರಿ 21: ಲೋಕಸಭೆ ಚುನಾವಣೆಗೆ ಸಂಬಂಧಿಸಿದಂತೆ ಜೆಡಿಎಸ್ ನಿಲುವೇನು ಎಂಬುದು ಇನ್ನಷ್ಟು ಕಗ್ಗಂಟು ಎನಿಸುವಂಥ ಮಾತನಾಡಿದ್ದಾರೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ. ಒಂದು ಕಡೆ ದೇವೇಗೌಡರು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಪ್ರಧಾನಿಯಾಗಲಿ ಎಂದಿದ್ದರೆ, ದೇಶ ಮುನ್ನಡೆಸುವ ಶಕ್ತಿ ಪಶ್ಚಿಮ ಬಂಗಾಲದ ಮುಖ್ಯಮಂತ್ರಿ ಹಾಗೂ ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿಗೆ ಇದೆ ಎಂದಿದ್ದಾರೆ ಎಚ್ ಡಿಕೆ.
ಮಮತಾ ಬ್ಯಾನರ್ಜಿ ಅವರು ಸಮರ್ಥ ಆಡಳಿತಗಾರ್ತಿ. ದೇಶವನ್ನು ಮುನ್ನಡೆಸುವ ಶಕ್ತಿ ಅವರಿಗಿದೆ. ಸದ್ಯಕ್ಕೆ ನಾಯಕತ್ವದ ಬಗ್ಗೆ ಚರ್ಚಿಸುವ ಅಗತ್ಯ ಇಲ್ಲ. ಮುಂಬರುವ ಲೋಕಸಭೆ ಚುನಾವಣೆ ಬಗ್ಗೆ ಆಲೋಚಿಸುವ ಹಾಗೂ ಗಮನ ಹರಿಸುವ ಸಮಯ ಇದು ಎಂದು ಅವರು ಹೇಳಿದ್ದಾರೆ.
ರೆಸಾರ್ಟ್ ಪಾಲಿಟಿಕ್ಸ್: ಬಿಜೆಪಿ ಕಾಲೆಳೆದ ಮುಖ್ಯಮಂತ್ರಿ ಕುಮಾರಸ್ವಾಮಿ
ಪಿಟಿಐ ಸುದ್ದಿ ಸಂಸ್ಥೆಯ ಸಂದರ್ಶನದಲ್ಲಿ ಮಾತನಾಡಿರುವ ಅವರು, ಚುನಾವಣೆ ಗೆಲ್ಲುವುದಕ್ಕೆ ನಾಯಕತ್ವದ ವಿಚಾರ ಪ್ರಮುಖ ಆಗುವುದಿಲ್ಲ. ದೇಶದ ಜನರು ಪ್ರಧಾನಿ ನರೇಂದ್ರ ಮೋದಿ ಆಡಳಿತದ ಬಗ್ಗೆ ಬೇಸರಗೊಂಡಿದ್ದಾರೆ. ಹಲವು ರಾಜ್ಯಗಳಲ್ಲಿ ಅವುಗಳದೇ ಸಮಸ್ಯೆಗಳಿವೆ. ಚುನಾವಣೆಗೆ ಮುಂಚೆಯೇ ನಾಯಕರನ್ನು ಆಯ್ಕೆ ಮಾಡುವ ಅಗತ್ಯ ಇಲ್ಲ ಎಂದಿದ್ದಾರೆ.
ಹಲವು ಮಂದಿ ಪರಿಣಾಮಕಾರಿ ನಾಯಕರಿದ್ದಾರೆ. ದೇಶದ ಅಭಿವೃದ್ಧಿಗಾಗಿ ದೊಡ್ಡ ಮಟ್ಟದ ಕೆಲಸವನ್ನು ಅವರು ಮಾಡಬಲ್ಲರು. ಈ ಹಿಂದಿನ ಸರಕಾರ ಎಲ್ಲ ವಿಫಲವಾಯಿತೋ ಆ ಕ್ಷೇತ್ರಗಳ ಬಗ್ಗೆ ಗಮನ ಹರಿಸಬಹುದು. ಚುನಾವಣೆ ಪೂರ್ತಿ ಆದ ಮೇಲೆ ನಾವು ಕೂತು, ನಾಯಕರನ್ನು ಆಯ್ಕೆ ಮಾಡಿಕೊಳ್ಳಬಹುದು ಎಂದು ಅವರು ಹೇಳಿದ್ದಾರೆ.
ಮಮತಾ ಬ್ಯಾನರ್ಜಿ ಅವರು ಸರಳರಲ್ಲಿ ಸರಳರು. ಅತ್ಯುತ್ತಮ ಆಡಳಿತಗಾರ್ತಿ. ಮಮತಾ ಜೀ ಅವರಿಗೆ ದೇಶ ಮುನ್ನಡೆಸುವ ಸಾಮರ್ಥ್ಯ ಇದೆ ಎಂದು ನಾನು ನಂಬುತ್ತೀನಿ. ಹಲವು ವರ್ಷಗಳಿಂದ ಪಶ್ಚಿಮ ಬಂಗಾಲವನ್ನು ಮುನ್ನಡೆಸುತ್ತಾ ಅದನ್ನು ಸಾಬೀತು ಪಡಿಸಿದ್ದಾರೆ. ಈಗಿನ ಪರಿಸ್ಥಿತಿ ಈ ಹಿಂದೆ ತುರ್ತು ಪರಿಸ್ಥಿತಿ ವೇಳೆ ಭಾರತದಲ್ಲಿ ಇತ್ತಲ್ಲಾ, ಅದೇ ರೀತಿ ಇದೆ ಎಂದಿದ್ದಾರೆ.
ಒಂದೇ ಏಟಿನಲ್ಲಿ ಎರಡೂ ಹಕ್ಕಿ ಹೊಡೆಯುವ ಕುಮಾರಸ್ವಾಮಿ ಲೆಕ್ಕಾಚಾರಗಳೇನು?
ಎಲ್ಲ ರಾಜಕಾರಣಿಗಳು ಒಟ್ಟು ಸೇರಿ ತಮ್ಮ ನಾಯಕರ ಆಯ್ಕೆ ಮಾಡಿದ್ದರು. ಈಗಲೂ ಹಾಗೇ ಮಾಡುವುದರಲ್ಲಿ ನಮಗೆ ಸಮಸ್ಯೆ ಇಲ್ಲ. ರಾಷ್ಟ್ರೀಯ ಪಕ್ಷಗಳಿಗೆ ಮಹಾಘಟ್ ಬಂಧನ್ ಪರ್ಯಾಯ ಎಂದು ಅವರು ಹೇಳಿದ್ದಾರೆ. ವಿಪಕ್ಷಗಳ ಸಭೆ ಆಯೋಜನೆ ಮಾಡುವ ಮೂಲಕ ಅತ್ಯುತ್ತಮ ಕೆಲಸ ಕೈಗೊಂಡಿದ್ದಾರೆ. ಎಡ ಪಕ್ಷಗಳನ್ನು ಸಹ ಆಹ್ವಾನಿಸಿದ್ದಾರೆ. ಇದು ಅವರ ಔದಾರ್ಯವನ್ನು ತೋರಿಸುತ್ತದೆ. ಮುಂದಿನ ಹಂತದ ಹೋರಾಟಕ್ಕೆ ಅವರು ಎಂಥ ಸಂಧಾನಕ್ಕೂ ಸಿದ್ಧ ಎಂಬುದನ್ನು ಇದು ತೋರಿಸುತ್ತದೆ ಎಂದಿದ್ದಾರೆ.
ಕೋಲ್ಕತ್ತಾದಲ್ಲಿ ಮೋದಿ ಸರ್ಕಾರದ ವಿರುದ್ಧ ಘಟಾನುಘಟಿಗಳ ರಣಕಹಳೆ
ತೆಲಂಗಾಣದ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರ ಗೈರು ಹಾಜರಿ ಬಗ್ಗೆ ಕೇಳಿದ ಪ್ರಶ್ನೆಗೆ, ಲೋಕಸಭೆ ಚುನಾವಣೆ ನಂತರ ಸೇರುತ್ತಾರೆ. ಎಲ್ಲರೂ ಒಟ್ಟಾಗಿ ಬರುತ್ತಾರೆ. ನನಗೆ ಆ ಬಗ್ಗೆ ಭರವಸೆ ಇದೆ. ಇಪ್ಪತ್ತೆರಡು ವಿವಿಧ ವಿರೋಧ ಪಕ್ಷಗಳು ಒಟ್ಟಾಗಿ ಮೈತ್ರಿ ಕೂಟ ರಚನೆಗೆ ಮುಂದಾಗಿವೆ. ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಹಾಗೂ ಬಿಜೆಪಿಗೆ ಪರ್ಯಾಯವಾಗಿ ವೇದಿಕೆ ಸಿದ್ಧಗೊಳಿಸಬೇಕು ಎಂಬುದು ಮುಖ್ಯ ಉದ್ದೇಶ.