ಮಲ್ಲೇಶ್ವರದ ಬ್ರಾಹ್ಮಿನ್ಸ್ ಚಾಟ್ಸ್ ಸೆಂಟರ್ ನಲ್ಲಿ 10 ರುಪಾಯಿಗೆ ಊಟ
ಮನೆಯಲ್ಲಿ ಅಡುಗೆ-ತಿಂಡಿ ಮಾಡಿಕೊಳ್ಳದವರ ಪಾಲಿಗೆ ಹೋಟೆಲ್ ಗಳು ಅನ್ನಪೂರ್ಣೇಶ್ವರಿ ವಾಸಸ್ಥಾನ ಹೌದು. ಅದೇ ಹೊತ್ತಿಗೆ ಅಲ್ಲಿನ ದರಗಳು ಜೇಬಿಗೆ ಇಳಿಬಿಟ್ಟ ದೊಡ್ಡ ಕತ್ತರಿಯಂತೆ ಕಾಣುವುದೂ ಹೌದು. ಅದರಲ್ಲೂ ಬೆಂಗಳೂರಿನ ಹೋಟೆಲ್ ಗಳೆಂದರೆ ಬಲು ದುಬಾರಿ ಎಂಬ ಆಕ್ಷೇಪಕ್ಕೇ ಬಹುಮತ.
ಈಗ ಹತ್ತು ರುಪಾಯಿಗೆ ಊಟ, ಐದು ರುಪಾಯಿಗೆ ತಿಂಡಿ ಸಿಗ್ತಿದೆಯಲ್ಲಾ ಅಂತ ಹೇಳಿದರೆ, ಖಡಾಖಂಡಿತವಾಗಿ ಇಂದಿರಾ ಕ್ಯಾಂಟೀನ್ ಬಗ್ಗೆಯೇ ಈ ಲೇಖನ ಅಂದರೆ, ಇಲ್ಲೇ ಇರೋದು ಸ್ಟೋರಿಗೆ ಟ್ವಿಸ್ಟ್. ಮಲ್ಲೇಶ್ವರದ ಏಳನೇ ಕ್ರಾಸ್ ನಲ್ಲಿರುವ ಬ್ರಾಹ್ಮಿನ್ಸ್ ಚಾಟ್ಸ್ ನಲ್ಲಿ ಹತ್ತು ರುಪಾಯಿಗೇ ಊಟ ಸಿಗುತ್ತಿದೆ.
ಊಟ-ತಿಂಡಿ ಮನೆಗೆ ತಲುಪಿಸುವ- 'ಬ್ರಾಹ್ಮಿನ್ ಲಂಚ್ ಬಾಕ್ಸ್'
ವಿಪರೀತ ಲೆಕ್ಕಾಚಾರ ಹಾಕಬೇಡಿ. ಇಲ್ಲಿನ ಊಟದ ಪಟ್ಟಿಯಾಗಲಿ, ಊಟವೇ ಆಗಲಿ ಬಹಳ ಸರಳ. ಹತ್ತು ರುಪಾಯಿಗೇ ಪುಳಿಯೋಗರೆ, ಚಿತ್ರಾನ್ನ, ಮೊಸರನ್ನ, ಬಿಸಿಬೇಳೆ ಬಾತ್ ಇತ್ಯಾದಿ ಸಿಗುತ್ತದೆ. ಈ ಎಲ್ಲವೂ ಅಲ್ಲ, ಯಾವುದಾದರೂ ಒಂದನ್ನು ತೆಗೆದುಕೊಳ್ಳಬಹುದು. ಇವರೇನು ಇಷ್ಟೇ ಸಂಖ್ಯೆಯವರೆಗೆ ಮಾತ್ರ ಇಷ್ಟು ಬೆಲೆ ಎಂಬ ನಿಯಮ ಏನೂ ಮಾಡಿಲ್ಲ. ದಿನಕ್ಕೆ ಸಾವಿರದಿಂದ ಸಾವಿರದೈನೂರು ಮಂದಿ ಇಲ್ಲಿಗೆ ಬರುತ್ತಾರೆ.
ರುಚಿಗೆ ಮನ ಸೋತಿದ್ದಾರೆ
ಬೆಲೆ ಹತ್ತು ರುಪಾಯಿ ಅಲ್ವಾ? ಇಲ್ಲಿಗೆ ಬರುವವರು ಬಡವರೆಂದು ತಿಳಿಯಬೇಡಿ. ಇಲ್ಲಿನ ಅಡುಗೆಯ ರುಚಿಗೆ ಹಾಗೂ ಕಾಪಾಡಿಕೊಂಡಿರುವ ಶುಚಿತ್ವಕ್ಕೆ ಮನಸ್ಸು ನೀಡಿದವರೂ ಇದ್ದಾರೆ. ಬೇರೆ ಹೋಟೆಲ್ಗಳಿದ್ದರೂ ಇಲ್ಲಿಗೇ ಬಂದು ಊಟ ಮಾಡುತ್ತಾರೆ. ಅದಕ್ಕೆ ಮುಖ್ಯ ಕಾರಣ ರುಚಿ ಹಾಗೂ ಶುಚಿತ್ವ.
ಮಂಜುನಾಥ ಮೈಸೂರಿನವರು
ಈ ಮಾತನ್ನೇ ಪುಷ್ಟೀಕರಿಸುತ್ತಾರೆ ಬ್ರಾಹ್ಮಿನ್ಸ್ ಚಾಟ್ಸ್ ಮಾಲೀಕ ಮಂಜುನಾಥ. ಅವರು ಮೂಲತಃ ಮೈಸೂರಿನವರು. ಮಂಜುನಾಥರ ತಂದೆ ನಂಜನಗೂಡು ಎಂ.ಎನ್. ಸ್ವಾಮಿ ಪ್ರಸಿದ್ಧ ಅಡುಗೆ ಗುತ್ತಿಗೆದಾರರು. ಅವರು ಕಾಲವಾದ ನಂತರ ಮಂಜುನಾಥ್ ತಮ್ಮ ತಾಯಿ, ಸೋದರನ ಜೊತೆಗೆ 5 ವರ್ಷಗಳ ಹಿಂದೆ ಬೆಂಗಳೂರಿಗೆ ಬಂದರು.
ದಿಢೀರ್ ಹೊಳೆದ ಆಲೋಚನೆ
ಆರಂಭದಲ್ಲಿ ಹೋಟೆಲ್ ತೆರೆಯುವ ಉದ್ದೇಶ ಇರಲಿಲ್ಲ. ಆದರೆ ಅದ್ಯಾವುದೋ ಕ್ಷಣದಲ್ಲಿ ತಲೆಗೆ ಹೊಳೆದಿದ್ದು ಹೋಟೆಲ್ ವ್ಯಾಪಾರ. ಇದರ ಲಾಭ-ನಷ್ಟ ಏನು ಎಂದು ಗೊತ್ತಿದ್ದ ಮಂಜುನಾಥ್, ಕಡಿಮೆ ದರದಲ್ಲಿ ಜನರಿಗೆ ಊಟ ಹಾಕುವ ಹೋಟೆಲ್ ತೆರೆಯಲು ನಿರ್ಧರಿಸಿದ್ದರಿಂದಲೇ ಇಂದು ತಲೆ ಎತ್ತಿ ನಿಂತಿರುವುದು ಬ್ರಾಹ್ಮಿನ್ಸ್ ಚಾಟ್ಸ್.
ಬೆಂಗಳೂರಿನಲ್ಲೇ ಜಗತ್ಪ್ರಸಿದ್ಧಿ
ಮಂಜುನಾಥ್ ಅವರೇನೂ ಹೋಟೆಲ್ ನಲ್ಲೇ ಅಡುಗೆ ಮಾಡುವುದಿಲ್ಲ. ಅದಕ್ಕೆ ಬೇರೆ ಸ್ಥಳ ಮಾಡಿಕೊಂಡಿದ್ದಾರೆ. ಈಚೆಗಷ್ಟೇ ಬೆಳಗ್ಗೆ ಏಳುಮೂವತ್ತರಿಂದ ಹನ್ನೆರಡರವರಿಗೆ ತಿಂಡಿ ಕೂಡ ಆರಂಭಿಸಲಾಗಿದೆ. ಅದು ಕೂಡ ಹತ್ತೇ ರುಪಾಯಿ. ಮಧ್ಯಾಹ್ನ ಹನ್ನೆರಡರಿಂದ ನಾಲ್ಕರವರೆಗೆ ಊಟ, ಸಂಜೆ ನಾಲ್ಕು ಮೂವತ್ತರಿಂದ ಒಂಬತ್ತು ಮೂವತ್ತು ಚಾಟ್ಸ್ ಸಿಗುತ್ತದೆ. ಒಟ್ಟಿನಲ್ಲಿ ಬ್ರಾಹ್ಮಿನ್ಸ್ ಚಾಟ್ಸ್ ಸೆಂಟರ್ ಮಲ್ಲೇಶ್ವರವನ್ನೂ ದಾಟಿ ಬೆಂಗಳೂರಿನಲ್ಲಿ ಜಗತ್ಪ್ರಸಿದ್ಧಿ ಪಡೆದಿದೆ.
ಫೇಸ್ ಬುಕ್ ನಲ್ಲೂ ಪ್ರಚಾರ
ಫೇಸ್ ಬುಕ್ ನಲ್ಲಂತೂ ಈ ಹೋಟೆಲ್ ಬಗ್ಗೆ ಸಿಕ್ಕಾಪಟ್ಟೆ ಹೊಗಳಿಕೆ ಶುರುವಾಗಿದೆ. ಬೆಂಗಳೂರಿನ ಬೇರೆ ಕಡೆ ಕೂಡ ಈ ರೀತಿಯ ಕಡಿಮೆ ದರದ ಹೋಟೆಲ್ ಆರಂಭಿಸುವ ಉದ್ದೇಶ ಮಂಜುನಾಥ್ ಅವರಿಗಿದೆ. ಇಂಥದ್ದೊಂದು ಬಾಯಿ ರುಚಿ ತಣಿಸುವ, ಮಾತಿನಲ್ಲೇ ಆಶೀರ್ವಾದ ಸಿಕ್ಕುವ ಹೋಟೆಲ್ ಆರಂಭಿಸಿರುವ ಮಂಜುನಾಥ್ ಗೆಲ್ಲಬೇಕು. ಉಳಿದವರಿಗೆ ಮಾದರಿಯಾಗಬೇಕು.
ಏನೇನು ಸಿಗುತ್ತದೆ?
ಪುಳಿಯೋಗರೆ, ಚಿತ್ರಾನ್ನ, ಮೊಸರನ್ನ, ಗಸಗಸೆ ಪಾಯಸ, ಜಿಲೇಬಿ ಇದರ ಜತೆಗೆ ಮೆನುವಿನಲ್ಲಿ ಇನ್ನೊಂದಿಷ್ಟು ರೈಸ್ ಬಾತ್ ಗಳಿವೆ. ಜೇಬಿಗೆ ಭಾರವಾಗದ ರೀತಿಯಲ್ಲಿ ದರ ಪಟ್ಟಿಯೂ ಇದೆ. ಇನ್ನೇಕೆ ತಡ, ಇನ್ನೂ ಇಲ್ಲಿಗೆ ಭೇಟಿ ನೀಡಿಲ್ಲ ಅನ್ನೋದಾದರೆ ಖಂಡಿತಾ ಒಮ್ಮೆ ಹೋಗಿಬನ್ನಿ. ಮಂಜುನಾಥ್ ರನ್ನೂ ಮಾತನಾಡಿಸಿ ಬನ್ನಿ.