ಭಾರತ ಬಂದ್: ಮೆಟ್ರೋ,ಚಿತ್ರಮಂದಿರ, ಮಾಲ್ಗಳಿಗೂ ತಟ್ಟಿದ ಬಿಸಿ
ಬೆಂಗಳೂರು, ಜನವರಿ 8: ಭಾರತ ಬಂದ್ ಹಿನ್ನೆಲೆಯಲ್ಲಿ ಬೆಂಗಳೂರಿನ ಸಾರ್ವಜನಿಕರು ಮನೆಯಿಂದ ಹೊರ ಬರಲು ಹಿಂಜರಿಯುತ್ತಿದ್ದಾರ. ಒಂದೆಡೆ ಸಾರ್ವಜನಿಕ ವಾಹನಗಳೂ ಸಿಗುತ್ತಿಲ್ಲ, ಇನ್ನೊಂದೆಡೆ ಗಲಾಟೆಯಾಗಬಹುದು ಎಂಬ ಭಯದಲ್ಲಿ ಸ್ವಂತ ವಾಹನಗಳನ್ನು ಹೊರತೆಗೆಯುತ್ತಿಲ್ಲ.
ಇದರಿಂದ ಮಾಲ್, ಥಿಯೇಟರ್ಗಳಲ್ಲಿ ಜನರು ಕಾಣಿಸಿಕೊಳ್ಳುತ್ತಿಲ್ಲ, ಕೆಲ ಚಿತ್ರಮಂದಿರಗಳಲ್ಲಿ ಚಿತ್ರ ಪ್ರದರ್ಶವಿದ್ದರೂ ಬಿಕೋ ಎನ್ನುತ್ತಿವೆ. ಮಧ್ಯಾಹ್ನದ ನಂತರ ಪರಿಸ್ಥಿತಿ ನೋಡಿಕೊಂಡು ಸಾರ್ವಜನಿಕರು ಮತ್ತೆ ಚಿತ್ರಮಂದಿರ ಹಾಗೂ ಮಾಲ್ಗಳತ್ತ ಧಾವಿಸುವ ಸಾಧ್ಯತೆ ಇದೆ.
ಜನವರಿ 8-9 ರಂದು ಭಾರತ್ ಬಂದ್ ಯಾಕಾಗಿ?
ಇದೇ ರೀತಿ ಮೆಟ್ರೋ ನಿಲ್ದಾಣಗಳಿಗೂ ಸಂಪರ್ಕವಿಲ್ಲದ ಹಿನ್ನೆಲೆಯಲ್ಲಿ ಮೆಟ್ರೋ ನಲ್ಲೂ ಪ್ರಯಾಣಿಕರ ಸಂಖ್ಯೆ ತೀವ್ರ ಕಡಿಮೆಯಾಗಿದೆ. ಖಾಸಗಿ ಹಾಗೂ ಐಟಿ ಕಂಪನಿಗಳೂ ಕೂಡ ಉದ್ಯೋಗಿಗಳಿಗೆ ವರ್ಕ್ ಫ್ರಮ್ ಹೋಮ್ ಅವಕಾಶಗಳನ್ನು ನೀಡಿರುವುದರಿಂದ ಜನರು ಮೆಟ್ರೋದತ್ತ ಬರುತ್ತಿಲ್ಲ.
ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕಾರ್ಮಿಕ ಸಂಘಟನೆಗಳು ಎರಡು ದಿನಗಳಾ ಕಾಲ ಭಾರತ್ ಬಂದ್'ಗೆ ಕರೆ ನೀಡಿದ್ದು, ಬಂದ್ ಕರೆಗೆ ವ್ಯಾಪಕ ಬೆಂಬಲ ವ್ಯಕ್ತವಾಗುವ ನಿರೀಕ್ಷೆಗಳು ಮೂಡತೊಡಗಿವೆ.
ಕಾರ್ಮಿಕರ ಭಾರತ್ ಬಂದ್ ಕರೆಗೆ ರಾಜ್ಯದ ಆಡಳಿತಾರೂಢ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಪಕ್ಷಗಳು ಬೆಂಬಲ ವ್ಯಕ್ತಪಡಿಸಿದ್ದು, ಈಗಾಗಲೇ ಹಲವೆಡೆ ಬಂದ್ ಆಚರಿಸಲಾಗುತ್ತಿದೆ. ಹಲವೆಡೆ ಬಿಎಂಟಿಸಿ ಬಸ್ ಗಳ ಮೇಲೆ ಕಲ್ಲು ತೂರಾಟ ನಡೆದಿರುವುದಾಗಿ ವರದಿಗಳು ತಿಳಿಸಿವೆ.
ನಾಯಂಡಹಳ್ಳಿ-ಕೆಂಗೇರಿ ಮೆಟ್ರೋ ಸಂಚಾರಕ್ಕೆ 2 ವರ್ಷ ಕಾಯ್ಬೇಕಂತೆ!
ಸಾಕಷ್ಟು ಜಿಲ್ಲಾಡಳಿತಗಳು ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಿದ್ದು, ಬಹುತೇಕ ಖಾಸಗಿ ಶಾಲಾ-ಕಾಲೇಜುಗಳು ಕೂಡ ಎರಡು ದಿನಗಳ ಕಾಲ ರಜೆ ಘೋಷಣೆ ಮಾಡಿವೆ. ಬಂದ್ ಹಿನ್ನೆಲೆಯಲ್ಲಿ ಇಂದು ಮತ್ತು ನಾಳೆ ನಿಗದಿಯಾಗಿದ್ದ ರಾಜ್ಯದ ಹಲವು ವಿಶ್ವವಿದ್ಯಾಲಯಗಳ ಪರೀಕ್ಷೆಗಳನ್ನು ಮುಂದೂಡಲಾಗಿದೆ.
ರಾಜ್ಯದಾದ್ಯಂತ ಕೆಎಸ್ಆರ್'ಟಿಸಿ ಬಸ್ ಸೇವೆಗಳು ಸ್ಥಗಿತಗೊಂಡಿದ್ದು, ಅಲ್ಲಲ್ಲಿ ಬಿಎಂಟಿಸಿ ಬಸ್ ಗಳ ಸಂಚಾರ ನಡೆಸುತ್ತಿವೆ. ಇನ್ನು ಆಟೋ, ಬ್ಯಾಂಕ್, ಅಂಗನವಾಡಿ, ಬಿಸಿಯೂಟ ಸೇವೆಗಳು ಬಹುತೇಕ ವ್ಯತ್ಯಯವಾಗುವ ಸಾಧ್ಯತೆಗಳಿವೆ.
ಎರಡನೇ ಆರು ಬೋಗಿಗಳ ಮೆಟ್ರೋ ಸೇವೆಗೆ ಎಚ್ಡಿಕೆ ಚಾಲನೆ
ಕ್ಯಾಬ್ ಸೇವೆಗಳು ಸ್ಥಗಿತಗೊಂಡಿದ್ದು, ಕೆಲ ಆಟೋ ಚಾಲಕರು ಸಾರ್ವಜನಿಕರಿಂದ ದುಪ್ಪಟ್ಟು ಹಣ ಪಡೆಯುತ್ತಿರುವುದಾಗಿ ವರದಿಗಳು ತಿಳಿಸಿವೆ.ಆಂಬುಲೆನ್ಸ್, ಆಸ್ಪತ್ರೆ, ಹಾಲು, ಪತ್ರಿಕೆ, ಹೋಟೆಲ್, ತರಕಾರಿ ಸೇರಿದಂತೆ ಅಗತ್ಯ ಹಾಗೂ ತುರ್ತು ಸೇವೆಗಳು ಎಂದಿನಂತೆ ಮುಂದುವರೆದಿವೆ.