ಬೆಟ್ಟ ಸ್ವಚ್ಛಮಾಡಿದ ಯುವಕರ ತಂಡಕ್ಕೆ ಭೇಷ್ ಎನ್ನೋಣ
ಬೆಂಗಳೂರು, ಮಾ. 6: ಯುವಕರ ತಂಡವೊಂದು ಸದ್ದಿಲ್ಲದೇ ಉತ್ತಮ ಕೆಲಸವೊಂದನ್ನು ಮಾಡಿದೆ. ನಗರದ ಯಾವುದೋ ಗಲ್ಲಿಯ ತೊಟ್ಟಿ ಕ್ಲೀನ್ ಮಾಡಿ ಅದೇ ಬೆಟ್ಟದಷ್ಟು ದೊಡ್ಡ ಕೆಲಸ ಎಂದು ಬೀಗುವವರ ಮಧ್ಯೆ 18 ಜನರ ತಂಡವೊಂದು ದೊಡ್ಡಬಳ್ಳಾಪುರ ಸಮೀಪದ ಮಾಕಳಿ ದುರ್ಗ ಬೆಟ್ಟವನ್ನೇ ಸ್ವಚ್ಛ ಮಾಡಿದೆ.
ಕೇವಲ ಚಾರಣಕ್ಕೆಂದು ತೆರಳಿ, ಪ್ರವಾಸಿ ತಾಣಗಳಲ್ಲಿ ಪ್ಲಾಸ್ಟಿಕ್ ಬಾಟಲ್, ಕಾಗದ ಎಸೆದು ಬರುವವರ ನಡುವೆ ಈ ತಂಡ ಭಿನ್ನವಾಗಿ ನಿಲ್ಲುತ್ತದೆ. ಜನವರಿಯಲ್ಲಿ ಸ್ಕಂದಗಿರಿ ಬೆಟ್ಟವನ್ನು ಸ್ವಚ್ಛಮಾಡಿದ್ದ ಯುವಕರು ಫೆಬ್ರವರಿಯಲ್ಲಿ ಮಾಕಳಿ ದುರ್ಗವನ್ನು ಸ್ವಚ್ಛಮಾಡಿ ತಮ್ಮ ಅಭಿಯಾನಕ್ಕೆ ಹೊಸ ಅರ್ಥ ನೀಡಿದ್ದಾರೆ.[ಆರೇ ಗಂಟೆಯಲ್ಲಿ ಸ್ವಚ್ಛವಾಯಿತು ಪುರಾತನ ಪುಷ್ಕರಣಿ]
ಊರುಗಳಲ್ಲಿ ಬಿದ್ದಿರೋ ಕಸ ತಗೆದು ಹಾಕಲು ಕೆಲಸಗಾರರು ಸಿಕ್ತಾರೆ, ಆದರೆ ಈ ಪ್ರಕೃತಿಯಲಿ ಹಾಕಿರೋ ಕಸ ತಗೆಯಲು ಯಾರೊಬ್ಬರೂ ಮುಂದೆ ಬರೋದಿಲ್ಲ.. ನಿಮ್ಮ ಗೆಳೆಯರನ್ನೊಮ್ಮೆ ಕರೆದು ನೋಡ್ರಿ 'ನಮಗೇನ್ ಬ್ಯಾರೆ ಕೆಲ್ಸ ಇಲ್ವಾ, ಅದು ಸರ್ಕಾರದ ಕೆಲ್ಸ' ಎಂಬ ಉತ್ತರವೇ ಬರುತ್ತದೆ. ಇದನ್ನು ಬದಲಾಯಿಸಬೇಕು ಎಂಥಲೇ ಬೆಟ್ಟ ಸ್ವಚ್ಛ ಮಾಡಿದ್ದೇವೆ ಎನ್ನುತ್ತದೆ ಯುವಕರ ತಂಡ.
ಬೆಂಗಳೂರು ಟ್ರಕಿಂಗ್ ಕ್ಲಬ್ ಬ್ಲಾಗ್
ಬೆಂಗಳೂರು ಟ್ರಕಿಂಗ್ ಕ್ಲಬ್ ಕಾರ್ಯ
ಬೆಂಗಳೂರು ಟ್ರಕಿಂಗ್ ಕ್ಲಬ್ ಸದಸ್ಯರು ಪರಿಸರ ಕಾಪಾಡುವ ಕೆಲಸ ಮಾಡಿದ್ದಾರೆ. ಕೇವಲ ಟ್ರಕಿಂಗ್ ಮಾಡುವ ಯುವಜನರ ನಡುವೆ ಈ ತಂಡ ಭಿನ್ನವಾಗಿ ನಿಲ್ಲುತ್ತದೆ.
ತಂಡದ ಸದಸ್ಯರು ಯಾರ್ಯಾರು?
ವಿರೇಂದ್ರ, ಚನ್ನಬಸ್ಸಪ್ಪ ನಾದ, ಸೊನಾಲಿ, ವಿಕ್ರಮ್, ಸುನೀತಾ, ವೆಂಕಟೇಶ್, ಸಂಜಯ್, ಅನಿಷ್,ಸುಧಾ, ಅನಿಲ್, ಮಾಧುರಿ, ಬ್ರಿಜೇಶ್, ಪದ್ಮಾ, ಕಿರಣ್, ಶರತ್, ರಿತು, ಚೈತನ್ಯ ಮತ್ತು ಈಕ್ಷೀತ್ ಒಳಗೊಂಡ 18 ಜನ ಯುವಕರ ತಂಡ ಸ್ವಚ್ಛತಾ ಕಾರ್ಯ ನೆರವೇರಿಸಿದೆ.
ಸಿಕ್ಕ ಕಸವೆಷ್ಟು?
ಎರಡು ಚೀಲ ಪ್ಲಾಸ್ಟಿಕ್ ಬಾಟಲ್ ಗಳು, 18 ಚೀಲ ಕಸ ಕಡ್ಡಿ ಮತ್ತು ಪ್ಲಾಸ್ಟಿಕ್ ಪೇಪರ್ ಗಳು ಸಿಕ್ಕವು, ಸ್ವಯಂ ಸೇವಕರ ಕಾರ್ಯದಿಂದ ಬೆಟ್ಟ ಸಂಪೂರ್ಣ ಸ್ವಚ್ಛವಾಯಿತು.
ಕಸ ಮರುಪೂರಣ
ಬೆಟ್ಟದಲ್ಲಿ ಸಂಗ್ರಹಿಸಿದ ಕಸವನ್ನು ಎಲ್ಲಿಯೋ ಬಿಸಾಡಲಿಲ್ಲ. ದೊಡ್ಡಬಳ್ಳಾಪುರದಲ್ಲಿರುವ ಕಸ ಮರುಸಂಸ್ಕರಣ ಘಟಕಕ್ಕೆ 75 ಕೆಜಿ ಕಸವನ್ನು ನೀಡಲಾಯಿತು.
ಅರಣ್ಯ ಇಲಾಖೆ ಸಹಕಾರ
ಯುವಕರ ಈ ಮಾದರಿ ಕಾರ್ಯಕ್ಕೆ ಅರಣ್ಯ ಇಲಾಖೆ ಸಹಕಾರ ನೀಡಿತ್ತು. ಅರಣ್ಯ ಇಲಾಖೆ ಸಂಪೂರ್ಣ ಸಹಕಾರವೇ ನಮ್ಮ ಯಶಸ್ಸಿಗೆ ಕಾರಣ ಎಂದು ಯುವಕರು ಧನ್ಯವಾದ ಅರ್ಪಿಸಲು ಮರೆಯಲಿಲ್ಲ.
ಮುಂದುವರಿಯಲಿದೆ ಸಮಾಜ ಸೇವೆ
ಯುವಕರ ತಂಡಕ್ಕೆ ಇಂಥ ಕಾರ್ಯಗಳಲ್ಲಿ ತೊಡಗಿಕೊಳ್ಳುವುದರಲ್ಲೇ ನೆಮ್ಮದಿಯಿದೆ. ಸಾಮಾಜಿಕ ಕಾರ್ಯವನ್ನು ಮುಂದುವರಿಸಿಕೊಂಡು ಹೋಗುತ್ತೇವೆ ಎಂದು ಸದಸ್ಯರು ಹೇಳುತ್ತಾರೆ.