ಹುತಾತ್ಮ ಮೇಜರ್ ಅಕ್ಷಯ್: ಗುರುವಾರ ಬೆಂಗಳೂರಿನಲ್ಲಿ ಅಂತ್ಯಕ್ರಿಯೆ
ಬೆಂಗಳೂರು, ನವೆಂಬರ್ 30: ಕಾಶ್ಮೀರದ ಜಮ್ಮು ಹೊರವಲಯದ ನಗ್ರೋಟಾದಲ್ಲಿ ಉಗ್ರರು ನಡೆಸಿದ ದಾಳಿಯಲ್ಲಿ ಬೆಂಗಳೂರಿನ ಮೇಜರ್ ಅಕ್ಷಯ್ ಗಿರೀಶ್ ಕುಮಾರ್(31) ಹುತಾತ್ಮರಾಗಿದ್ದು ಅವರ ಪಾರ್ಥೀವ ಶರಿರವನ್ನು ಭಾರತೀಯ ವಾಯುಪಡೆ ವಿಮಾನದಲ್ಲಿ ನಾಳೆ ಬೆಂಗಳೂರಿಗೆ ತರಲಿದೆ. ಯಲಹಂಕದ ಜೇಡ್ ಗಾರ್ಡನ್ನಲ್ಲಿರುವ ಅವರ ನಿವಾಸಕ್ಕೆ ಒಪ್ಪಿಸಲಿದೆ ಎಂದು ದೆಹಲಿಯ ಉನ್ನತ ಸೇನಾಧಿಕಾರಿಗಳು ತಿಳಿಸಿದ್ದಾರೆ.
ತದ ನಂತರ ಸರ್ಕಾರದ ಸಕಲ ಗೌರವಗಳೊಂದಿಗೆ ಅಕ್ಷಯ್ ಕುಮಾರ್ ಅಂತ್ಯಕ್ರಿಯೆಯನ್ನು ನಡೆಸಲಾಗುವುದು ಎಂದು ಸೇನಾಧಿಕಾರಿ ತಿಳಿಸಿದರು.
ಅಕ್ಷಯ್ ಹಾಗೂ ಪತ್ನಿಸಂಗೀತಾ , 2 ವರ್ಷದ ಮಗುವಿನೊಂದಿಗೆ ಅವರು ನಗ್ರೋಟಾದಲ್ಲಿ ನೆಲೆಸಿದ್ದರು. ಮಂಗಳವಾರ ಭಯೋತ್ಪಾದಕರ ದಾಳಿ ಸಂಭವಿಸಿದಾಗ ಮೇಜರ್ ಸೇರಿದಂತೆ ಏಳು ಯೋಧರು ಹುತಾತ್ಮರಾಗಿದ್ದರು ಅವರಲ್ಲಿ ಅಕ್ಷಯ್ ಅವರೂ ಒಬ್ಬರು. ರಕ್ಷಣಾ ಇಲಾಖೆಯಿಂದ ಮಾಹಿತಿ ತಿಳಿದ ನಂತರ ಯಲಹಂಕದಲ್ಲಿ ನೆಲೆಸಿದ್ದ ತಂದೆ ಗಿರೀಶ್ ಮತ್ತು ತಾಯಿ ವಿಮಾನದಲ್ಲಿ ಜಮ್ಮುವಿಗೆ ತೆರಳಿದ್ದರು.[ನಗ್ರೋಟಾ ಸೇನಾ ನೆಲೆ ಮೇಲೆ ಉಗ್ರರ ದಾಳಿ: 7 ಯೋಧರು ಹುತಾತ್ಮ]
ಗುರುವಾರ ಐಎಎಫ್ ವಿಮಾನದಲ್ಲಿ ಪಾರ್ಥವ ಶರೀರವನ್ನು ಬೆಂಗಳೂರಿಗೆ ತರಲಿರುವ ಪೋಷಕರು ಮತ್ತು ಉನ್ನತಾಧಿಕಾರಿಗಳು ಯಲಹಂಕದ ರುದ್ರಭೂಮಿಯಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯ ಸಂಸ್ಕಾರ ನೆರವೇರಿಸಲಿದ್ದಾರೆ.[ಜಮ್ಮು ಕಾಶ್ಮೀರದಲ್ಲಿ ದಾಳಿ: ಮೂವರು ಉಗ್ರರಿಗೆ ಚಿರಶಾಂತಿ]
ನಗ್ರೋಟಾ ಸೇನಾ ಕ್ಯಾಂಪ್ ಮೇಲೆ ನಡೆದ ಉಗ್ರರ ದಾಳಿಯಲ್ಲಿ ಹುತಾತ್ಮನಾದ ಬೆಂಗಳೂರಿನ ಯೋಧ ಮೇಜರ್ ಅಕ್ಷಯ್ ಗಿರೀಶ್ ಕುಮಾರ್ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತೀವ್ರ ಸಂತಾಪ ಸೂಚಿಸಿದ್ದಾರೆ. ದೇಶಕ್ಕಾಗಿ ಪ್ರಾಣತ್ಯಾಗ ಮಾಡಿರುವ ಗಿರೀಶ್ ಅವರು ನಮ್ಮ ನಾಡಿನ ಹೆಮ್ಮೆಯ ಪುತ್ರ ಎಂದು ಪ್ರಶಂಸಿಸಿರುವ ಅವರು, ಅವರ ಆತ್ಮಕ್ಕೆ ಶಾಂತಿ ಸಿಗಲಿ. ಕುಟುಂಬದವರಿಗೆ ದುಃಖ ಭರಿಸುವ ಶಕ್ತಿ ದೊರೆಯಲಿ ಎಂದು ಪ್ರಾರ್ಥಿಸಿದ್ದಾರೆ. ತಂದೆ ಕ್ಯಾಪ್ಟನ್ ಗಿರೀಶ್ ಅವರಿಗೆ ದೂರವಾಣಿಯ ಮೂಲಕ ಕರೆ ಮಾಡಿ ಸಾಂತ್ವನ ಹೇಳಿದ್ದಾರೆ.