ಜೆಎಚ್ ಪಟೇಲರ ಪುತ್ರ ಮಹಿಮಾ ಈಗ ಜೆಡಿಯು ಅಧ್ಯಕ್ಷ
ಬೆಂಗಳೂರು, ನವೆಂಬರ್ 28: ಮಾಜಿ ಮುಖ್ಯಮಂತ್ರಿ ದಿವಂಗತ ಜೆ.ಎಚ್.ಪಟೇಲ್ ಪುತ್ರ, ಚನ್ನಗಿರಿ ಕ್ಷೇತ್ರದ ಮಾಜಿ ಶಾಸಕ ಮಹಿಮಾ ಪಟೇಲ್ ಅವರು ಈಗ ರಾಜ್ಯ ಸಂಯುಕ್ತ ಜನತಾದಳದ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ.
ದಾವಣಗೆರೆ ಜಿಲ್ಲೆ ವಿಧಾನಸಭಾ ಕ್ಷೇತ್ರಗಳ ಪರಿಚಯ
ನವೆಂಬರ್ 18ರಂದು ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಸಮ್ಮುಖದಲ್ಲಿ ಅಧಿಕೃತವಾಗಿ ಜೆಡಿಯು ಸೇರಿದ್ದರು. ಈ ಮುಂಚೆ ಕಾಂಗ್ರೆಸ್ ನಲ್ಲಿದ್ದ ಮಹಿಮಾ ಅವರು 2014ರ ಲೋಕಸಭೆ ಚುನಾವಣೆ ಟಿಕೆಟ್ ಸಿಗದ ಕಾರಣ, ಕಾಂಗ್ರೆಸ್ ತೊರೆದು ಜೆಡಿಎಸ್ ಸೇರಿದ್ದರು.
ಜೆಡಿಯು ರಾಷ್ಟ್ರೀಯ ಅಧ್ಯಕ್ಷ ನಿತೀಶ್ ಕುಮಾರ್ ಅವರು ಮಹಿಮಾ ಅವರನ್ನು ಜೆಡಿಯುನ ಕರ್ನಾಟಕ ಘಟಕದ ಅಧ್ಯಕ್ಷರಾಗಿ ನೇಮಿಸಿದ್ದಾರೆ. ನವೆಂಬರ್ 30ರಂದು ಅಧಿಕಾರ ಸ್ವೀಕರಿಸಲಿದ್ದಾರೆ.
ಎನ್ ಡಿಎ ಮೈತ್ರಿಕೊಟದೊಳಗೆ ಜೆಡಿಯು ಸೇರ್ಪಡೆ
ಬೆಂಗಳೂರಿನ ಶೇಷಾದ್ರಿಪುರದಲ್ಲಿರುವ ಶಿರೋಮಣಿ ಡಾ. ವರದರಾಜ್ ಕಲಾ ಮಂದಿರದಲ್ಲಿ ಪದಗ್ರಹಣ ಸಮಾರಂಭ ನಡೆಯಲಿದೆ. ರಾಷ್ಟ್ರೀಯ ಮಹಾ ಪ್ರಧಾನ ಕಾರ್ಯದರ್ಶಿ ಕೆ.ಸಿ ತ್ಯಾಗಿ, ಬಿಹಾರ ಜೆಡಿಯು ರಾಜ್ಯಾಧ್ಯಕ್ಷ ಬಿಶಿಷ್ಟ ನಾರಾಯಣ ಸಿಂಗ್ ಮುಂತಾದವರು ಪಾಲ್ಗೊಳ್ಳಲಿದ್ದಾರೆ.
2009ರಲ್ಲಿ ಮಾಜಿ ಮುಖ್ಯಮಂತ್ರಿ ಜೆ.ಎಚ್.ಪಟೇಲರ ಪುತ್ರರಾದ ಮಹಿಮಾ ಪಟೇಲ್ ಹಾಗೂ ತ್ರಿಶೂಲಪಾಣಿ ಪಟೇಲ್ ಅವರು ಕಾಂಗ್ರೆಸ್ ಸೇರಿದ್ದರು.
ಈಗ ಜೆಡಿಯುನ ರಾಜ್ಯಾಧ್ಯಕ್ಷರಾಗಿದ್ದಾರೆ
'ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಜೆಡಿಎಸ್ ತೊರೆದು ಸ್ವರ್ಣಯುಗ ಪಕ್ಷ ಸ್ಥಾಪಿಸಿದೆ. ಚುನಾವಣೆಗೂ ಸ್ಪರ್ಧಿಸಿದೆ. ಆದರೆ, ಯಶ ಸಿಗಲಿಲ್ಲ. ಈಗ ಕಾಂಗ್ರೆಸ್ ನಲ್ಲಿ ಸ್ವರ್ಣಯುಗ ವಿಲೀನಗೊಳಿಸಿದ್ದೇನೆ. ಕಾಂಗ್ರೆಸ್ ನಿಂದ ದೇಶಕ್ಕೆ ಉತ್ತಮ ಭವಿಷ್ಯವಿದೆ' ಎಂದು ಮಹಿಮಾ ಅಂದು ಹೇಳಿದ್ದರು. ಆದರೆ, ದಾವಣಗೆರೆಯಿಂದ ಲೋಕಸಭೆಗೆ ಸ್ಪರ್ಧಿಸಲು ಟಿಕೆಟ್ ಸಿಗದ ಕಾರಣ ಕಾಂಗ್ರೆಸ್ ತೊರೆದು ಮತ್ತೆ ಜೆಡಿಎಸ್ ಗೆ 2014ರಲ್ಲಿ ಮರಳಿದ್ದರು. ಈಗ ಜೆಡಿಯುನ ರಾಜ್ಯಾಧ್ಯಕ್ಷರಾಗಿದ್ದಾರೆ.
ರಾಹುಲ್ ಗಾಂಧಿಯವರ ಚಿಂತನೆ ಮೆಚ್ಚಿದ್ದೆ
ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರ ಚಿಂತನೆಯಿಂದ ಆಕರ್ಷಿತನಾಗಿ ಕಾಂಗ್ರೆಸ್ ಸೇರಿದ್ದೆ. ಆದರೆ, ಕಾಂಗ್ರೆಸ್ ನಲ್ಲೀಗ ಟಿಕೆಟ್ ಗಾಗಿ ಮನೆ ಬಾಗಿಲು ಕಾಯುವ ಸ್ಥಿತಿ ಇದೆ. ಟಿಕೆಟ್ ಗಾಗಿ ಮನೆ ಬಾಗಿಲು ಕಾಯುವಂತಹ ಮನಸ್ಥಿತಿ ತಮ್ಮದಲ್ಲ. ಕಾಂಗ್ರೆಸ್ ಗೆ ಸೋಲಿನ ಭೀತಿ ಇರುವುದರಿಂದ ಹಣ ಇದ್ದವರಿಗೆ ಟಿಕೆಟ್ ನೀಡಲಾಗಿದೆ ಎಂದು ಆರೋಪಿಸಿ ಕಾಂಗ್ರೆಸ್ ನಿಂದ ಮಹಿಮಾ ಅವರು ಹೊರನಡೆದಿದ್ದರು.
ತೃತೀಯ ರಂಗ ಸೇರುವ ಬಯಕೆ
ತೃತೀಯ ರಂಗ ಸೇರುವ ಬಗ್ಗೆ ಗಂಭೀರ ಚಿಂತನೆ ನಡೆಸಿದ್ದ ಮಹಿಮಾ ಪಟೇಲ್ ಅವರು ಕಾಂಗ್ರೆಸ್ ತೊರೆದ ಬಳಿಕ ಮತ್ತೆ ಜೆಡಿಎಸ್ ಗೆ ಮರಳಿದ್ದರು. ಶಾಮನೂರು ಶಿವಶಂಕರಪ್ಪ ಪುತ್ರ ಎಸ್ಎಸ್ ಮಲ್ಲಿಕಾರ್ಜುನ್ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಿದ್ದರಿಂದ ಕಾಂಗ್ರೆಸ್ ತೊರೆದ ನಂತರ ಜೆಡಿಎಸ್ ನಿಂದ ಟಿಕೆಟ್ ಆಕಾಂಕ್ಷಿಯಾಗಿದ್ದ ಮಹಿಮಾ ಅವರು ಎಲ್ಲೆಡೆ ನಿರಾಶೆ ಅನುಭವಿಸಿದ್ದರು.
ಬಿಹಾರದ ಅಭಿವೃದ್ಧಿಗೆ ಪ್ರೇರಣೆ
ಬಿಹಾರದ ಸಿಎಂ ಆಗಿ ನಿತೀಶ್ ಕುಮಾರ್ ಅವರು ಕೈಗೊಂಡ ಕ್ರಮವನ್ನು ಮೆಚ್ಚಿರುವ ಮಹಿಮಾ ಅವರು ತಮ್ಮ ತಂದೆ ಹಾಕಿಕೊಟ್ಟ ಸಮಾಜವಾದದ ಹಿನ್ನೆಲೆಯಲ್ಲಿ ಕಾರ್ಯ ನಿರ್ವಹಿಸುವುದಾಗಿ ಹೇಳಿದ್ದಾರೆ. ರಾಜ್ಯದೆಲ್ಲೆಡೆ ಪ್ರವಾಸ ಕೈಗೊಂಡು ಜನರ ಕಷ್ಟ ನಷ್ಟಗಳನ್ನು ಅರಿತು ಮುಂದಿನ ಹೆಜ್ಜೆ ಇಡುವುದಾಗಿ ಹೇಳಿದರು.