ಮಹದಾಯಿ ವಿವಾದ, ನ. 19ರಂದು ನವದೆಹಲಿಯಲ್ಲಿ ಪ್ರತಿಭಟನೆ
ಬೆಂಗಳೂರು, ನವೆಂಬರ್ 13 : ಕಳಸಾ-ಬಂಡೂರಿ ಹಾಗೂ ಮಹದಾಯಿ ನದಿ ನೀರು ಹಂಚಿಕೆ ವಿವಾದವನ್ನು ಬಗೆಹರಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಲು ನವೆಂಬರ್ 19ರಂದು ನವದೆಹಲಿ ಪ್ರತಿಭಟನೆ ನಡೆಸಲು ಕಳಸಾ-ಬಂಡೂರಿ ಮಲಪ್ರಭಾ ಜೋಡಣೆ ಹೋರಾಟ ಕೇಂದ್ರ ಸಮಿತಿ ಮುಂದಾಗಿದೆ.
ಬೆಂಗಳೂರಿನಲ್ಲಿ ಭಾನುವಾರ ನಡೆದ ಕಳಸಾ-ಬಂಡೂರಿ ಮಲಪ್ರಭಾ ಜೋಡಣೆ ಅಂತಿಮ ನಿರ್ಣಾಯ ಸಭೆಯಲ್ಲಿ ಹೋರಾಟ ಕೇಂದ್ರ ಸಮಿತಿ ಈ ತೀರ್ಮಾನವನ್ನು ಕೈಗೊಂಡಿದೆ.
ಬಳಿಕ ಮಾತನಾಡಿದ ಜನ ಸಮಾನ್ಯ ವೇದಿಕೆ ಅಧ್ಯಕ್ಷ ಡಿ.ಅಯ್ಯಪ್ಪ ''ಕುಡಿಯುವ ನೀರಿನ ಯೋಜನೆ ಪೂರ್ಣಗೊಳಿಸಲು ಕೇಂದ್ರ ಹಾಗೂ ರಾಜ್ಯ ಸರಕಾರ ಗಂಭೀರವಾಗಿ ಪರಿಗಣಿಸುತ್ತಿಲ್ಲ. ಇದರಿಂದ ಜನರು ಸಂಕಷ್ಟಕ್ಕೆ ಒಳಗಾಗಿದ್ದು, ರಾಜಕಾರಣ ಬಿಟ್ಟು ಸಮಸ್ಯೆಯನ್ನು ನಿವಾರಿಸುವಂತೆ ಪ್ರಧಾನಿ ಹಾಗೂ ಕೇಂದ್ರ ಸರಕಾರವನ್ನು ಒತ್ತಾಯಿಸಲು ರಾಮಲೀಲಾ ಮೈದಾನದಲ್ಲಿ ಪ್ರತಿಭಟನೆ ನಡೆಯಲಿದೆ'' ಎಂದರು.
ವರ್ಷಗಳಿಂದ ರೈತರು ಹಾಗೂ ಜನರಿಗೆ ಕೇವಲ ಭರವಸೆಗಳನ್ನು ಮಾತ್ರ ನೀಡುವಲ್ಲಿ ರಾಜಕೀಯ ಪಕ್ಷಗಳು ಸೀಮಿತವಾಗಿವೆ. ಸರಕಾರಗಳು ಕೂಡ ತಮ್ಮ ಜವಾಬ್ದಾರಿಯನ್ನು ನಿರ್ವಹಿಸುತ್ತಿಲ್ಲ.
ಕೇಂದ್ರ ಸರಕಾರ 15 ದಿನಗಳಲ್ಲಿ ತನ್ನ ಸ್ಪಷ್ಟ ನಿರ್ಧಾರವನ್ನು ಪ್ರಕಟಿಸದಿದ್ದರೆ ಬೆಂಗಳೂರಿನಲ್ಲಿ ನಿರಂತರವಾಗಿ ಹೋರಾಟ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.