ಮಡಿವಾಳ ಅಂಡರ್ ಪಾಸ್ ಗೆ ಶೀಘ್ರದಲ್ಲೇ ಹೊಸ ಲುಕ್
Recommended Video
ಬೆಂಗಳೂರು, ಡಿಸೆಂಬರ್ 11 : ಅತಿ ಹೆಚ್ಚು ಸಂಚಾರ ದಟ್ಟಣೆ ಇರುವ ಮಡಿವಾಳ ಮಾರುಕಟ್ಟೆ ಬಳಿಯ ಅಂಡರ್ ಪಾಸ್ ಸದ್ಯದಲ್ಲೇ ಹೊಸ ರೂಪ ಪಡೆಯಲಿದೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಅಂಡರ್ ಪಾಸ್ ದುರಸ್ತಿ ಕಾಮಗಾರಿ ಕೈಗೆತ್ತಿಕೊಂಡಿದ್ದು, ಶೀಘ್ರದಲ್ಲಿಯೇ ಹೊಸ ಲುಕ್ ಪಡೆದುಕೊಳ್ಳಲಿದೆ. ವಿಪರೀತ ವಾಹನ ದಟ್ಟಣೆ ಇರುವ ಈ ಅಂಡರ್ ಪಾಸ್ ಇತ್ತೀಚಿನ ದಿನಗಳಲ್ಲಿ ದುರಸ್ಥಿಗೆ ತಲುಪಿತ್ತು.
ಜತೆಗೆ ಕೆಲವು ತಿಂಗಳ ಹಿಂದೆ ಸುರಿದ ಭಾರಿ ಮಳೆಗೆ ಅಂಡರ್ ಪಾಸ್ ಒಳಗೆ ನೀರು ಸಮಸ್ಯೆಯೂ ಉಂಟಾಗಿತ್ತು. ಬೆಂಗಳೂರಿನಲ್ಲಿರುವ ಸಾಕಷ್ಟು ಅಂಡರ್ ಪಾಸ್ ಗಳು ಜೀವ ಕಳೆದುಕೊಂಡಿದೆ. ಅತಿ ಹೆಚ್ಚು ಸಂಚಾರ ದಟ್ಟಣೆ ಇರುವ ಸಂದರ್ಭದಲ್ಲಿ ಒಂದು ರಸ್ತೆಯಿಂದ ಇನ್ನೊಂದು ರಸ್ತೆಗೆ ದಾಟಲು ಅರ್ಧದಿಂದ ಒಂದು ಗಂಟೆಯವರೆಗೆ ನಿಲ್ಲಬೇಕಾಗುತ್ತದೆ.
ಇಂತಹ ಸಂದರ್ಭದಲ್ಲಿ ಅಂಡರ್ ಪಾಸ್ ಬಳಕೆ ಮಾಡಲು ಮುಂದಾದರೆ ನಗರದಲ್ಲಿರುವ ಸಾಕಷ್ಟು ಅಂಡರ್ ಪಾಸ್ ಗಳಿಗೆ ಬೀಗ ಹಾಕಲಾಗಿದೆ. ಇನ್ನು ಕೆಲವು ಅಂಡರ್ ಪಾಸ್ ಗಳ ಸ್ಥತಿ ನೋಡಿದರೆ ಅದರೊಳಗೆ ಹೋಗುವುದು ಹಾಗಿರಲಿ ನೋಡಲು ಕೂಡ ಸಾದ್ಯವಿಲ್ಲ, ಅಂತಹ ಪರಿಸ್ಥಿತಿಯಲ್ಲಿದೆ. ಈಗ ಕಳೆದ ಒಂದು ವರ್ಷದಿಂದ ಬಿಬಿಎಂಪಿಯು ನಗರದಲ್ಲಿರುವ ಎಲ್ಲ ಅಂಡರ್ ಪಾಸ್ ಗಳನ್ನು ಸರಿಪಡಿಸಲಾಗುತ್ತಿದೆ.
ಅಂಡರ್ ಪಾಸ್ ಸ್ಥಿತಿ
ನೀರು ನಿಂತಿದ್ದ ಕಾರಣ ರಸ್ತೆಗೆ ಹಾಕಿದ್ದ ಡಾಂಬರು ಸಂಪೂರ್ಣ ಕಿತ್ತುಹೋಗಿ ಶೋಚನೀಯ ಸ್ಥಿತಿ ತಲುಪಿತ್ತು. ಇದೀಗ ರಸ್ತೆ ಗುಂಡಿಯನ್ನು ಮುಚ್ಚಲಾಗಿದ್ದರೂ, ರಸ್ತೆಯು ಸಂಪೂರ್ಣವಾಗಿ ಸರಿಯಾಗಿಲ್ಲ. ಹೀಗಾಗಿ ಸಂಪೂರ್ಣ ದುರಸ್ತಿ ಮಾಡುವ ಕಾರ್ಯಕ್ಕೆ ಬಿಬಿಎಂಪಿ ಮುಂದಡಿ ಇಟ್ಟಿದೆ. ಸದ್ಯದಲ್ಲೇ ಅಂಡರ್ ಪಾಸ್ ಕಾಮಗಾರಿ ಪ್ರಾರಂಭವಾಗಲಿದೆ.
ಅಂಡರ್ ಪಾಸ್ ಬಳಿ ಕಾಮಗಾರಿ
ರಸ್ತೆಗೆ ಡಾಂಬರು ಹಾಕುವುದು, ಡಿವೈಡರ್ ಗಳ ಬದಲಾವಣೆ, ಅಂಡರ್ ಪಾಸ್ ನ ಗೋಡೆಗಳ ದುರಸ್ತಿಯು ಕಾಮಗಾರಿಯ ಪ್ರಮುಖ ಭಾಗವಾಗಿದೆ. ಈಗಾಗಲೇ ಡಿವೈಡರ್ ಬದಲಾಯಿಸುವ ಕಾಮಗಾರಿ ಅರಂಭವಾಗಿದ್ದು, ಡಿಸೆಂಬರ್ 20 ರೊಳಗೆ ಡಾಂಬರು ಅಥವಾ ಕಾಂಕ್ರೀಟ್ ಹಾಕುವ ಕಾರ್ಯ ಮುಕ್ತಾಯವಾಗಲಿದೆ.
ಅಂಡರ್ ಪಾಸ್ ನಿರ್ಮಾಣ ವಾಹನ ಸಂಚಾರ ಸರಾಗ
ಭಾರಿ ವಾಹನ ದಟ್ಟಣೆ ಇರುವ ಈ ಮಡಿವಾಳ ಮಾರುಕಟ್ಟೆ ಬಳಿ 2010 ರಲ್ಲಿ ಅಂಡರ್ ಪಾಸ್ ನಿರ್ಮಿಸಲಾಗಿತ್ತು. ಆ ಬಳಿಕ ಸಣ್ಣ ಪುಟ್ಟ ನಿರ್ವಹಣೆ ಮಾಡಲಾಗಿದೆಯೇ ಹೊರತು ಸಂಪೂರ್ಣ ದುರಸ್ಥಿ ಮಾಡುವ ಕಾರ್ಯವನ್ನು ಕೈಗೆತ್ತಿಕೊಂಡಿರಲಿಲ್ಲ. ಇದೀಗ ಏಳು ವರ್ಷಗಳ ಬಳಿಕ ಅಂಡರ್ ಪಾಸ್ ಗೆ ಹೊಸ ರೂಪ ಕೊಟ್ಟು, ವಾಹನ ಸಂಚಾರ ಸರಾಗ ಮಾಡುವ ಯೋಜನೆಯನ್ನು ಬಿಬಿಎಂಪಿ ಕೈಗೆತ್ತಿಕೊಂಡಿದೆ.
ರಸ್ತೆ ಕಾಮಗಾರಿ ಕೈಗೆತ್ತಿಕೊಳ್ಳುವ ವೇಳೆಯಲ್ಲಿ ಬೆಂಗಳೂರು ಸಂಚಾರ ಪೊಲೀಸರ ಸಹಕಾರ ಅತ್ಯಗತ್ಯ. ಹೀಗಾಗಿ ಪಾಲಿಕೆಯು ಸಂಚಾರ ಪೊಲೀಸ್ ವಿಭಾಗಕ್ಕೆ ದುರಸ್ತಿ ಕಾರ್ಯದ ಬಗ್ಗೆ ಮಾಹಿತಿ ರವಾನಿಸಿದೆ. ರಾತ್ರಿ ವೇಳೆ ಮಾತ್ರ ಕಾಮಗಾರಿ ನಡೆಸಿ, ಹಗಲಿನಲ್ಲಿ ವಾಹನಗಳ ನೇರ ಸಂಚಾರಕ್ಕೆ ಅವಕಾಶ ಮಾಡಿಕಡುವ ಕುರಿತು ಪೊಲೀಸರಿಗೆ ಪಾಲಿಕೆ ಅಧಿಕಾರಿಗಳು ಭರವಸೆ ನೀಡಿದ್ದಾರೆ. ಅದೇ ರೀತಿ ಜಂಕ್ಷನ್ ಕಾಮಗಾರಿಗೂ ಇದೇ ವೇಳೆ ನಡೆಯಲರಿಉವ ಕಾರಣ, ವಾಹನ ಸಂಚಾರಕ್ಕೆ ಅಡಚಣೆ ಆಗದ ರೀತಿಯಲ್ಲಿ ಮುಗಿಸುವುದಾಗಿ ಬಿಬಿಎಂಪಿ ಅಧಿಕಾರಿಗಳು ಹೇಳಿದ್ದಾರೆ.
ಅಂಡರ್ ಪಾಸ್ ಗೆ 58 ಲಕ್ಷ ಮೀಸಲು
ಒಂದೊಂದೇ ಪಥ: ಮೊದಲು ಒಂದು ಬದಿಯ ಕಾಮಗಾರಿಯನ್ನು ಮುಗಿಸಿದ ಬಳಿಕ ಮತ್ತೊಂದು ಬದಿಯ ಕಾಮಗಾರಿಯನ್ನು ಕೈಗೆತ್ತಿಕೊಳ್ಳುವುದಾಗಿ ಬಿಬಿಎಂಪಿ ಅಧಿಕಾರಿಗಳು ಹೇಳಿದ್ದಾರೆ.
ಬದಲಿಗೆ ಅಂಡರ್ ಪಾಸ್ ನ ಎಡ ಪಥವನ್ನು ದುರಸ್ತಿ ಮಾಡಲಾಗುತ್ತದೆ. ಅದಕ್ಕೆ ಮೂರು ದಿನಗಳ ಕಾಲಾವಕಾಶ ಬೇಕಾಗುತ್ತದೆ. ಅದು ಮುಗಿಸಿ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಿದ ಬಳಿಕ ಮತ್ತೊಂದು ಪಥದ ಕಾಮಗಾರಿ ಶುರುವಾಗಲಿದೆ. ಪಾಲಿಕೆ ಅಧಿಕಾರಿಗಳು ನೀಡಿದ ಮಾಹಿತಿ ಪ್ರಕಾರ, ಈ ಕಾಮಗಾರಿಗೆ 58 ಲಕ್ಷ ರೂ. ಮೀಸಲಿಡಲಾಗಿದೆ. ಇದರಲ್ಲಿ ಎಲ್ಲ ಕಾಮಗಾರಿಗಳೂ ಮುಗಿಯಲಿದೆ.