ಜಾತ್ರೆಯಂತಾದ ಇಂದಿರಾ ಕ್ಯಾಂಟೀನ್ ನಲ್ಲಿ ಜನವೋ ಜನ
ಬೆಂಗಳೂರು, ಆಗಸ್ಟ್ 17: ಇಂದಿರಾ ಕ್ಯಾಂಟೀನ್ ಎಂಬುದು ಎರಡನೇ ದಿನಕ್ಕೆ ಜಾತ್ರೆ ಆದಂತಾಗಿದೆ. ಅಂದರೆ ಜನವೋ ಜನ. ಮೊದಲನೇ ದಿನ ಹೀಗಿತ್ತು- ಹಾಗಿತ್ತು ಎಂದು ಮಾಧ್ಯಮಗಳಲ್ಲಿ ಸಿಕ್ಕ ಪ್ರಚಾರದಿಂದ ಕುತೂಹಲಕ್ಕೆ ಬಿದ್ದ ವಿವಿಧ ವರ್ಗದ ಜನರು ಕ್ಯಾಂಟೀನ್ ಗೆ ಧಾವಿಸಿದ್ದರು. ಸಮಯ ಇಷ್ಟು ಎಂದು ನಿಗದಿ ಮಾಡಿದ್ದರೂ ಬಹಳ ಬೇಗ ಆಹಾರ ಪದಾರ್ಥಗಳು ಖಾಲಿಯಾಗಿದ್ದವು.
ಇಂದಿರಾ ಕ್ಯಾಂಟೀನ್ ನಲ್ಲಿ ಏನೆಲ್ಲ ತಿನ್ಬೋದು ಪಟ್ಟಿ ನೋಡಿ
ಅದೇನು ಜನರೇ ಅಷ್ಟು ಮಂದಿ ಬಂದರೋ ಅಥವಾ ಉಣಬಡಿಸುವವರಿಗೆ ಎಷ್ಟು ಎಂಬ ಅಳತೆಯ ಅಂದಾಜು ಸಿಗಲಿಲ್ಲವೋ ಗೊತ್ತಾಗಲಿಲ್ಲ. ಜಯನಗರ ವಾರ್ಡ್ ವ್ಯಾಪ್ತಿ ಕನಕನಪಾಳ್ಯಈಗ ಕುತೂಹಲದ ಕೇಂದ್ರವಾಗಿದೆ. ಏಕೆಂದರೆ ಸ್ವತಃ ರಾಹುಲ್ ಗಾಂಧಿ ಬಂದು ಉದ್ಘಾಟನೆ ಮಾಡಿದ ಕ್ಯಾಂಟೀನ್ ಇದು ಎಂಬ ವಿಪರೀತ ನಿರೀಕ್ಷೆ ಇದೆ.
ಇನ್ನು ಸ್ವತಃ ಸಿದ್ದರಾಮಯ್ಯ ಅವರಿಗೆ ಪರೀಕ್ಷೆ ಇದು. ಮಧ್ಯಾಹ್ನ 1.30ಕ್ಕೆ ಕ್ಯಾಂಟೀನ್ ಬಳಿ ಹೋಗುವ ಹೊತ್ತಿಗೆ ಉದ್ದೋಉದ್ದದ ಸಾಲು. ಗೇಟಿನ ಆಚೆ ಎರಡು ಸುರುಳಿ ಸುತ್ತಿದ್ದಂತೆ ಕಾಣುತ್ತಿತ್ತು ಜನಸಂದಣಿ. ಒಳ ಹೋಗುವ ಹೊತ್ತಿಗಾಗಲೇ ಮತ್ತಷ್ಟು ಮಾಧ್ಯಮ ಪ್ರತಿನಿಧಿಗಳು ಜಮೆ ಆಗಿದ್ದರು. ಬೆಳಗ್ಗೆ ಹಾಗೂ ಮಧ್ಯಾಹ್ನ ಆವರೆಗೆ ಎಷ್ಟು ಮಂದಿ ಆಗಿದ್ದರು ಎಂಬ ಕುತೂಹಲ ನಮಗಿತ್ತು.
ನಾನೂರು ಮಂದಿ ತಿಂಡಿಗೆ
ಗುರುವಾರ ಬೆಳಗ್ಗೆ ನಾನೂರು ಮಂದಿ ತಿಂಡಿಗೆ ಆದರು. ಊಟಕ್ಕೆ ಈವರೆಗೆ ಇನ್ನೂರೈವತ್ತು ಮಂದಿ ಆಗಿದ್ದಾರೆ ಎಂದು ಕ್ಯಾಷಿಯರ್ ತಿಳಿಸಿದರು. ತಲೆ ಎತ್ತಿ ನೋಡಿದರೆ ಇಷ್ಟು ದಪ್ಪದ ಟಿವಿ ಕಾಣಿಸಿತು. ಅದೇ ಇರಬೇಕು ಎಲ್ ಇಡಿ ಡಿಸ್ ಪ್ಲೇ. ಆದರೆ ಎರಡನೇ ದಿನ ಯಾವುದೇ ಚಟುವಟಿಕೆ ಇಲ್ಲದೆ ಸುಮ್ಮನಿತ್ತು.
ಮೊಸರನ್ನ ಪರವಾಗಿಲ್ಲ
ಅಷ್ಟೊತ್ತಿಗೆ ಮೊಸರನ್ನ ಮಾತ್ರ ಇತ್ತು ಎಂಬ ಕಾರಣಕ್ಕೆ ನಾಲ್ಕೈದು ಮಂದಿ ಕ್ಯಾಂಟೀನ್ ಒಳಗೆ ಅದನ್ನೇ ತಿನ್ನುತ್ತಿದ್ದರು. ಅಡುಗೆ ಮನೆಯಿಂದ ಅಡುಗೆ ತರಿಸಬೇಕು ಎಂಬ ಧಾವಂತ ಕಾಣುತ್ತಿತ್ತು. "ಊಟ ಹೇಗಿದೆ ಅಂತ ತಿಳಿದುಕೊಳ್ಳುವ ಕುತೂಹಲ ಇತ್ತು. ಆದ್ದರಿಂದ ನೋಡೋಕೆ ಬಂದೆ. ಒಂದು ಗಂಟೆ ಕಾಯ್ದಿದ್ದಕ್ಕೆ ಟೋಕನ್- ಈಗ ಊಟ ಸಿಕ್ಕಿದೆ. ಮೊಸರನ್ನ ಪರವಾಗಿಲ್ಲ ಎಂದು ಹೇಳಿದರು ವಿಜಯನಗರದ ಶಿವಕುಮಾರ್.
ಬಿಪಿಎಲ್ ಕಾರ್ಡ್ ದಾರರಿಗೆ ಮಾತ್ರ ಇರಬೇಕು
ಸರಕಾರ ಒಳ್ಳೆ ಯೋಜನೆ ಮಾಡಿದೆ. ಆದರೆ ಇಲ್ಲಿಗೆ ಬಡವರು ಹೆಚ್ಚು ಬರುವಂತಾಗಬೇಕು. ಕಾರು- ದ್ವಿಚಕ್ರ ವಾಹನದಲ್ಲಿ ಬರುವವರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಬಿಪಿಎಲ್ ಕಾರ್ಡ್ ದಾರರಿಗೆ ಅಂತಲೇ ಮಾಡಿ, ಕಾರ್ಡ್ ತೋರಿಸಿದರೆ ಊಟ-ತಿಂಡಿ ಸಿಗಬೇಕು ಎಂದರು ಸಾಮಾಜಿಕ ಕಾರ್ಯಕರ್ತ ಗುರುಪ್ರಸಾದ್.
ಇಷ್ಟು ಬೇಗ ಖಾಲಿಯಾಯಿತಾ?
ಮಧ್ಯಾಹ್ನ 3.30ರ ತನಕ ಅಥವಾ ಐನೂರು ಮಂದಿಗೆ ಊಟ-ತಿಂಡಿ ಅಂತ ಹೇಳಿ ಮಧ್ಯಾಹ್ನ ಒಂದೂ ಮೂವತ್ತಕ್ಕೆ ಖಾಲಿ ಅಂತಿದ್ದಾರೆ. ನಾವಿಲ್ಲಿ ಇನ್ನೂ ನೂರೈವತ್ತು ಮಂದಿ ಇದೀವಿ ಅಂತ ಸಾಲಿನಲ್ಲಿ ನಿಂತಿದ್ದವರು ಆಕ್ಷೇಪಣೆ ಹೇಳುತ್ತಿದ್ದರು.
ಮುಖ್ಯಮಂತ್ರಿಗಳ ನಿದ್ದೆ ಕೆಡುವಂತೆ ಆಗಬಾರದು
ಇಂದಿರಾ ಕ್ಯಾಂಟೀನ್ ಅನ್ನೋದು ಕಾಂಗ್ರೆಸ್ ನ ವಿರೋಧಿಗಳಿಗಷ್ಟೇ ಕುತೂಹಲ ಹುಟ್ಟಿಸಿಲ್ಲ. ಎಲ್ಲ ವರ್ಗದ ಜನರಲ್ಲೂ ಒಂದು ಪ್ರಶ್ನೆಗೆ ಕಾರಣವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಯಾರೂ ಹಸಿದು ಮಲಗುವಂತಾಗಬಾರದು ಅಂತ ಹೇಳಿಬಿಟ್ಟಿದ್ದಾರೆ. ನಾವೂ ಒಂದು ಮಾತು ಹೇಳಿಬಿಡೋಣ: ಈ ಯೋಜನೆಯಿಂದಲೇ ಮುಖ್ಯಮಂತ್ರಿಗಳ ನಿದ್ದೆ ಕೆಡುವಂತೆ ಆಗಬಾರದು.