ಅಡುಗೆ ಅನಿಲ ಸೋರಿಕೆ: ಉಪಹಾರ ದರ್ಶಿನಿಯಲ್ಲಿ ಬೆಂಕಿ
ಬೆಂಗಳೂರು, ಜನವರಿ 18 : ಬೆಂಗಳೂರಿನ ಜಯನಗರದ ಉಪಹಾರ ದರ್ಶಿನಿಯಲ್ಲಿ ಅಡುಗೆ ಅನಿಲ ಸೋರಿಕೆಯಿಂದ ಗುರುವಾರ ಸಂಜೆ ಬೆಂಕಿ ಅನಾಹುತ ಸಂಭವಿಸಿದೆ.
4ನೇ ಬ್ಲಾಕ್ ನಲ್ಲಿರುವ ಉಪಹಾರ ದರ್ಶಿನಿ ಹೋಟೆಲ್ ನಲ್ಲಿ ಬೆಂಕಿ ಅವಘಡ ಸಂಭವಿಸಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಕೂಡಲೇ ಅಗ್ನಿಶಾಮಕ ಸಿಬ್ಬಂದಿಗಳು ಬಂದು ಬೆಂಕಿಯನ್ನು ನಂದಿಸಿದ್ದಾರೆ. ಆದರೆ ಬರುವಷ್ಟರಲ್ಲೇ ಹೋಟೆಲ್ ಮುಕ್ಕಾಲು ಭಾಗ ಸುಟ್ಟು ಕರಕಲಾಗಿತ್ತು.
ಈಗಾಘಲೇ ಬೆಂಗಳೂರಿನ ಹಲವಾರು ಬಾರ್ ಮತ್ತು ರೆಸ್ಟೋರೆಂಟ್ ಗಳಲ್ಲಿ ಅದರಲ್ಲೂ ರೂಫ್ ಟಾಪ್ ಬಾರ್ ಮತ್ತು ರೆಸ್ಟೋರೆಂಟ್ ಗಳಲ್ಲಿ ಅಗ್ನಿ ಅನಾಹುತ ಸಂಭವಿಸದಂತೆ ರಾಜ್ಯ ಸರ್ಕಾರ ಹಲವಾರು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದರೂ ಮತ್ತೊಂದು ಹೋಟೆಲ್ ನಲ್ಲಿ ಅಗ್ನಿ ಅನಾಹುತ ಸಂಭವಿಸಿರುವುದು ಜನರಲ್ಲಿ ಆತಂಕ ಮೂಡಿಸಿದೆ.
ಬಿಬಿಎಂಪಿ ಹಾಗೂ ಅಗ್ನಿಶಾಮಕ ದಳ ಇಲಾಖೆ ಜಂಟಿಯಾಗಿ ಬೆಂಗಳೂರಿನ ಅನೇಕ ರೂಫ್ ಟಾಪ್ ಬಾರ್ ಅಂಡ್ ರೆಸ್ಟೋರೆಂಟ್ ಹಾಗೂ ಹೋಟೆಲ್ ಗಳಲ್ಲಿ ಅಗ್ನಿ ಸುರಕ್ಷತಾ ಕ್ರಮಗಳನ್ನು ಅನುಸರಿಸುವ ಕುರಿತಂತೆ ನಿರಂತರ ತಪಾಸಣೆ ನಡೆಸುತ್ತಿದೆ.
ಈಗಾಗಲೇ 57 ಬಾರ್ ಅಂಡ್ ರೆಸ್ಟೋರೆಂಟ್ ಗಳಿಗೆ ನೋಟಿಸ್ ಜಾರಿ ಮಾಡಿತ್ತು. ಇಷ್ಟೆಲ್ಲಾ ಮುಂಜಾಗೃತಾ ಕ್ರಮದ ನಡುವೆಯೂ ಬೆಂಗಳೂರಿನ ಹೋಟೆಲ್ ವೊಂದರಲ್ಲಿ ಅಗ್ನಿ ಅನಾಹುತ ಸಂಭವಿಸಿರುವುದು ಸುರಕ್ಷತಾ ಕ್ರಮಗಳು ಎಷ್ಟರ ಮಟ್ಟಿಗೆ ಅನುಸರಿಸಲಾಗಿದೆ ಎಂಬ ಸಂಶಯವನ್ನು ಹುಟ್ಟುಹಾಕಿದೆ.