ಅಖಂಡ ಶ್ರೀನಿವಾಸಮೂರ್ತಿ 'ಕೈ' ತಪ್ಪಲಿದೆ ಪುಲಿಕೇಶಿ ನಗರ ಟಿಕೆಟ್?
ಬೆಂಗಳೂರು, ಅ.23 : ಜೆಡಿಎಸ್ ಪಕ್ಷದಿಂದ ಅಮಾನತುಗೊಂಡಿರುವ ಏಳು ಶಾಸಕರು ಕಾಂಗ್ರೆಸ್ ಸೇರುವುದು ಖಚಿತವಾಗಿದೆ. ಎಲ್ಲಾ ಶಾಸಕರಿಗೆ ಸ್ವ ಕ್ಷೇತ್ರದಲ್ಲೇ ಟಿಕೆಟ್ ನೀಡಬಹುದು ಎಂಬುದು ಸದ್ಯದ ಮಾಹಿತಿ. ಆದರೆ, ಪುಲಿಕೇಶಿ ನಗರ ಕ್ಷೇತ್ರದ ಟಿಕೆಟ್ ಹಂಚಿಕೆ ಮಾತ್ರ ಕಗ್ಗಂಟಾಗುವುದು ಖಚಿತವಾಗಿದೆ.
ಜೆಡಿಎಸ್ನ ಅಖಂಡ ಶ್ರೀನಿವಾಸಮೂರ್ತಿ ಕ್ಷೇತ್ರದ ಶಾಸಕರು. ರಾಜ್ಯಸಭೆ ಚುನಾವಣೆಯಲ್ಲಿ ಪಕ್ಷದ ವಿಪ್ ಉಲ್ಲಂಘನೆ ಮಾಡಿದ ಅವರನ್ನು ಪಕ್ಷದಿಂದ ಅಮಾನತು ಮಾಡಲಾಗಿದೆ. ಅವರು ಕಾಂಗ್ರೆಸ್ ಸೇರುವುದು ಖಚಿತವಾಗಿದೆ. ಆದರೆ, ಟಿಕೆಟ್ ಸಿಗಲಿದೆಯೇ? ಎಂಬುದು ಮಾತ್ರ ಖಾತ್ರಿಯಾಗಿಲ್ಲ.
ಬಾಲಕೃಷ್ಣಗೆ ಟಿಕೆಟ್ ಬೇಡ, ಡಿಕೆಶಿ ಮುಂದೆಯೇ ಜಟಾಪಟಿ
ಪುಲಿಕೇಶಿ ನಗರ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ಪಡೆಯಲು ಪೈಪೋಟಿ ಇದೆ. ಲೋಕಸಭೆ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಬೆಂಬಲಿಗರಾದ ಬಿ.ಪ್ರಸನ್ನ ಕುಮಾರ್ ಟಿಕೆಟ್ ಪಡೆಯಲು ಪ್ರಯತ್ನ ನಡೆಸಿದ್ದಾರೆ. ಕಳೆದ ಚುನಾವಣೆಯಲ್ಲಿ ಅವರು ಅಖಂಡ ಶ್ರೀನಿವಾಸ ಮೂರ್ತಿ ಅವರ ವಿರುದ್ಧ ಸ್ಪರ್ಧಿಸಿದ್ದರು.
ಜೆಡಿಎಸ್ ಏಳು ಶಾಸಕರು ಕಾಂಗ್ರೆಸ್ಗೆ, ಖರ್ಗೆಗೆ ದೂರು
ಮತ್ತೊಂದು ಕಡೆ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ಅವರು ಪುಲಿಕೇಶಿ ನಗರ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎಂಬ ಗುಸು-ಗುಸು ಸುದ್ದಿ ಹರಿದಾಡುತ್ತಿದೆ. ಈ ಹಿನ್ನಲೆಯಲ್ಲಿ ಕ್ಷೇತ್ರದ ಕಾಂಗ್ರೆಸ್ ಮುಖಂಡರು ಮಲ್ಲಿಕಾರ್ಜುನ ಖರ್ಗೆ ಭೇಟಿ ಮಾಡಿ, ಟಿಕೆಟ್ ಕೈತಪ್ಪದಂತೆ ನೋಡಿಕೊಳ್ಳಿ ಎಂದು ಮನವಿ ಮಾಡಿ ಬಂದಿದ್ದಾರೆ.
ಬಿ.ಪ್ರಸನ್ನ ಕುಮಾರ್ ಸೋಲು ಕಂಡಿದ್ದರು
2013ರ ಚುನಾವಣೆಯಲ್ಲಿ ಪುಲಿಕೇಶಿ ನಗರ ಕ್ಷೇತ್ರದಿಂದ ಸ್ಪರ್ಧಿಸಿದ್ದ ಬಿ.ಪ್ರಸನ್ನ ಕುಮಾರ್ 38,769 ಮತಗಳನ್ನು ಪಡೆದು ಎರಡನೇ ಸ್ಥಾನ ಪಡೆದಿದ್ದರು. ಈ ಬಾರಿ ಕ್ಷೇತ್ರದಿಂದ ಪುನಃ ಟಿಕೆಟ್ ಬಯಸಿದ್ದಾರೆ. ಆದರೆ, ಅಖಂಡ ಶ್ರೀನಿವಾಸಮೂರ್ತಿ ಅವರು ಕಾಂಗ್ರೆಸ್ ಸೇರಲಿರುವುದು ಪ್ರಸನ್ನ ಕುಮಾರ್ ಅವರಿಗೆ ಟಿಕೆಟ್ ಕೈ ತಪ್ಪಲಿದೆಯೇ ಎಂಬ ಪ್ರಶ್ನೆ ಹುಟ್ಟು ಹಾಕಿದೆ.
ಕೆಪಿಸಿಸಿ ಅಧ್ಯಕ್ಷರಿಂದ ಸ್ಪರ್ಧೆ?
ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ಅವರು ಈ ಚುನಾವಣೆಯಲ್ಲಿ ಕ್ಷೇತ್ರ ಬದಲಾವಣೆ ಮಾಡಲಿದ್ದಾರೆ ಎಂಬ ಸುದ್ದಿ ಹಬ್ಬಿದೆ. ಕಳೆದ ಚುನಾವಣೆಯಲ್ಲಿ ಅವರು ತುಮಕೂರಿನ ಕೊರಟಗೆರೆ ಕ್ಷೇತ್ರದಲ್ಲಿ ಜೆಡಿಎಸ್ನ ಸುಧಾಕರ್ ಲಾಲ್ ವಿರುದ್ಧ ಸೋಲು ಕಂಡಿದ್ದರು. ಈ ಬಾರಿ ಬೆಂಗಳೂರು ನಗರದ ಪುಲಿಕೇಶಿ ನಗರ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಲಿದ್ದಾರೆ ಎಂಬ ಗುಸು-ಗುಸು ಕೇಳಿಬರುತ್ತಿದೆ.
ಟಿಕೆಟ್ ಸಿಕ್ಕುವ ಖಾತ್ರಿ ಇದೆ
ಮಾಧ್ಯಮಗಳ ಜೊತೆ ಮಾತನಾಡಿರುವ ಜೆಡಿಎಸ್ ರೆಬಲ್ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವರು, 'ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಭೇಟಿ ಮಾಡಿದ ಸಮಯದಲ್ಲಿ ಸ್ವ ಕ್ಷೇತ್ರದಲ್ಲೇ ಟಿಕೆಟ್ ಸಿಗುವ ಖಾತ್ರಿ ಸಿಕ್ಕಿದೆ. ನಮ್ಮ ಹಿತ ಕಾಯುತ್ತೇವೆ' ಎಂದು ಅವರು ಭರವಸೆ ನೀಡಿದ್ದಾರೆ' ಎಂದು ಹೇಳಿದ್ದಾರೆ.
ಹೈಕಮಾಂಡ್ ಸೂತ್ರ ಬೇರೆ
ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಪಕ್ಷ ಸೇರುವ ಯಾವುದೇ ನಾಯಕರಿಗೆ ಮುಂದಿನ ಚುನಾವಣೆಯಲ್ಲಿ ಟಿಕೆಟ್ ನೀಡುವ ಖಾತ್ರಿ ನೀಡಬೇಡಿ ಎಂದು ಪರಮೇಶ್ವರ ಮತ್ತು ಸಿದ್ದರಾಮಯ್ಯ ಅವರಿಗೆ ಸೂಚಿಸಿದ್ದಾರೆ. ಆದ್ದರಿಂದ, ಟಿಕೆಟ್ ಹಂಚಿಕೆಗೆ ಹೈಕಮಾಂಡ್ ಬೇರೆ ಸೂತ್ರ ಅನುಸರಿಸುವುದು ಖಾತ್ರಿಯಾಗಿದೆ.