ಕಿಂಗ್ ಫಿಷರ್ ಉದ್ಯೋಗಿಗಳಿಗೆ ಮದ್ಯದ ದೊರೆ ಮಲ್ಯ 'ಪ್ರೇಮ'ದ ಪತ್ರ!
Recommended Video
ಬೆಂಗಳೂರು, ಜೂನ್ 26 : ಸಾವಿರಾರು ಕೋಟಿ ರುಪಾಯಿ ಗುಳುಂ ಮಾಡಿ ದೇಶಬಿಟ್ಟು ಪರಾರಿಯಾಗಿರುವ, ಇದೀಗ ಕೋರ್ಟಿನಿಂದ 'ಘೋಷಿತ ಅಪರಾಧಿ' ಎಂಬ ಹಣೆಪಟ್ಟಿ ಕಟ್ಟಿಕೊಂಡಿರುವ, ಮದ್ಯದ ದೊರೆ ಡಾ. ವಿಜಯ್ ಮಲ್ಯ ಅವರು ತಮ್ಮ ಕಿಂಗ್ ಫಿಷರ್ ಏರ್ ಲೈನ್ಸ್ ಉದ್ಯೋಗಿಗಳಿಗೆ ಕೊಡಬೇಕಾಗಿರುವ (ಉಳಿಸಿಕೊಂಡಿರುವ) ಸಂಬಳ ಎಷ್ಟು?
ಎರಡು ವರ್ಷಗಳ ಹಿಂದೆಯೇ ಒಂದು ಅಂದಾಜಿನ ಪ್ರಕಾರ, ಕೆಲಸ ಕಳೆದುಕೊಂಡಿರುವ 3 ಸಾವಿರಕ್ಕೂ ಹೆಚ್ಚು ಉದ್ಯೋಗಿಗಳಿಗೆ ಬರಬೇಕಾಗಿದ್ದುದುದು 300 ಕೋಟಿ ರುಪಾಯಿಗಳಷ್ಟು. ಅವರಲ್ಲಿ 2 ಸಾವಿರಕ್ಕೂ ಹೆಚ್ಚು ಉದ್ಯೋಗಿಗಳು ಬೇರೆ ದಾರಿ ಕಾಣದೆ, ಹೊಟ್ಟೆಪಾಡಿಗಾಗಿ ಬೇರೆ ಕಡೆ ಕೆಲಸ ಅರಸಿ ಹೋಗಿದ್ದಾರೆ.
ಪ್ರಧಾನಿ ಮೋದಿಗೆ ವಿಜಯ್ ಮಲ್ಯ ಬರೆದ ಪತ್ರ ಬಹಿರಂಗ!
ಪೈಲಟ್ ಗಳು ಗಗನಸಖಿಯರು ಬೇರೆ ಏರ್ ಲೈನ್ಸ್ ನಲ್ಲಿ ಕೆಲಸ ಕಂಡುಕೊಂಡಿದ್ದರೆ, ಉಳಿದವರು ಎಲ್ಲೆಲ್ಲಿ ಹೋಗಿದ್ದಾರೋ? ಉದ್ಯೋಗಿಗಳನ್ನು ದುರುಪಯೋಗಪಡಿಸಿಕೊಳ್ಳುವುದು ನಿಮ್ಮ ರಕ್ತದಲ್ಲಿಯೇ ಇದೆ ಎಂದು ಹಲವಾರು ಮಹಿಳಾ ಉದ್ಯೋಗಿಗಳು ಮುಕ್ತ ಪತ್ರ ಬರೆದು ಮಲ್ಯನ ಮುಖಕ್ಕೆ ಮಂಗಳಾರತಿ ಮಾಡಿದ್ದರು.
ಮಲ್ಯಗೆ ಸೇರಿರುವ 12,500 ಕೋಟಿ ರು ಆಸ್ತಿ ಜಪ್ತಿಗೆ ಸಿದ್ಧತೆ
ಇನ್ನೇನು ಬಂಧನ ಸನ್ನಿಹಿತವಾಗುತ್ತಿದೆ ಎಂಬುದು ಅರಿವಾಗುತ್ತಿದ್ದಂತೆ ಟ್ವಿಟ್ಟರ್ ನಲ್ಲಿ ಪ್ರತ್ಯಕ್ಷವಾಗಿರುವ ಮಲ್ಯ ಸಾಹೇಬರು ತಮ್ಮ ಮೌನವನ್ನು ಮುರಿದಿದ್ದು, ಮಾಧ್ಯಮಗಳಿಗೆ ಐದಾರು ಪುಟಗಳ ಪತ್ರ ಬರೆದಿದ್ದಾರೆ. ಅದರಲ್ಲಿ ಕಿಂಗ್ ಫಿಷರ್ ಉದ್ಯೋಗಿಗಳ ಕುರಿತಾಗಿ ಬರೆದಿರುವ ಪತ್ರದ ಸಾರಾಂಶ ಕೆಳಗಿನಂತಿದೆ.
ಉದ್ಯೋಗಿಗಳ ಬಗ್ಗೆ ನನಗೆ ಸಹಾನುಭೂತಿಯಿದೆ
ಕಿಂಗ್ ಫಿಷರ್ ಏರ್ ಲೈನ್ಸ್ ನ ಕೆಲ ಉದ್ಯೋಗಿಗಳು ತಮಗೆ ಸಂಬಳ ಸಿಗದಿರುವ ಬಗ್ಗೆ, ತತ್ಪರಿಣಾಮವಾಗಿ ತಾವು ಎದುರಿಸುತ್ತಿರುವ ಸಂಕಷ್ಟದ ಬಗ್ಗೆ ಮೇಲಿಂದ ಮೇಲೆ ದೂರು ನೀಡಿದ್ದಾರೆ. ಅವರ ಬಗ್ಗೆ ನನಗೆ ಸಹಾನುಭೂತಿ ಇದೆ. (ಇದೇ ಸಹಾನುಭೂತಿಯನ್ನು ಈಮೊದಲೇ ತೋರಿದ್ದರೆ ಸಾವಿರಾರು ಉದ್ಯೋಗಿಗಳು ಬೀದಿಗೆ ಬೀಳುತ್ತಿರಲಿಲ್ಲ, ಸಾವಿರಾರು ಜನ ಮತ್ತು ಅವರ ಕುಟುಂಬ ಹಿಡಿಶಾಪ ಹಾಕುತ್ತಿರಲಿಲ್ಲ.)
ನನಗೆ ಉದ್ಯೋಗಿಗಳ ಬಗ್ಗೆ ಕಾಳಜಿಯಿಲ್ಲದಿದ್ದರೆ
ನಾನು ಈ ವಿಷಯ ಪ್ರಸ್ತಾಪಿಸದಿದ್ದರೆ ತಪ್ಪಾಗುತ್ತದೆ. ನನ್ನ ಮಾಲಿಕತ್ವದಲ್ಲಿ ಮತ್ತು ನನ್ನ ಸಮರ್ಥ ನಾಯಕತ್ವದಲ್ಲಿ, ಯುಬಿ ಗ್ರೂಪ್ ಒಂದಾನೊಂದು ಕಾಲದಲ್ಲಿ ಉಚ್ಛ್ರಾಯ ಸ್ಥಿತಿಯಲ್ಲಿದ್ದಾಗ 66 ಸಾವಿರ ಉದ್ಯೋಗಿಗಳಿದ್ದರು. ಅವರಲ್ಲಿ ಹಲವರು 20-30 ವರ್ಷ ಕಂಪನಿಗಾಗಿ ಸೇವೆ ಸಲ್ಲಿಸಿದ್ದಾರೆ. ನನಗೆ ನನ್ನ ಉದ್ಯೋಗಿಗಳ ಬಗ್ಗೆ ಅಷ್ಟು ಕಾಳಜಿ ಇಲ್ಲದಿದ್ದರೆ ಅವರ ಕಾಳಜಿಯನ್ನೂ ತೆಗೆದುಕೊಳ್ಳುತ್ತಿರಲಿಲ್ಲ, ನಮಗೆ ಅಷ್ಟೊಂದು ದಶಕಗಳ ಕಾಲ ಉತ್ತಮ ಕೆಲಸ ಮಾಡಿದ ಟ್ರಾಕ್ ರೆಕಾರ್ಡ್ ಕೂಡ ಇರುತ್ತಿರಲಿಲ್ಲ.
ನನ್ನ ವಿರುದ್ಧವೇ ನನ್ನ ಉದ್ಯೋಗಿಗಳ ಆಕ್ರೋಶ
ಕಿಂಗ್ ಫಿಷರ್ ಏರ್ ಲೈನ್ ಉದ್ಯೋಗಿಗಳೇ ಸ್ವತಃ ಸ್ವಯಂಸ್ಫೂರ್ತಿಯಿಂದಿರುತ್ತಿದ್ದರು ಮತ್ತು ಯಾವಾಗಲೂ ಸಂತೋಷದಿಂದಿರುತ್ತಿದ್ದರು. ಭಾರತದ ಏರ್ ಲೈನ್ ಉದ್ಯಮದ ಇತಿಹಾಸದಲ್ಲಿ ಅತ್ಯುತ್ತಮ ಸೇವೆಯನ್ನು ಕಿಂಗ್ ಫಿಷರ್ ಏರ್ ಲೈನ್ ನೀಡಲು ಇದರಿಂದ ಸಾಧ್ಯವಾಯಿತು. ಆದರೆ, ದುರಾದೃಷ್ಟಕರ ಘಟನೆಗಳಿಂದಾಗಿ ಮತ್ತು ಹಣಕಾಸಿನ ತೊಂದರೆ ಎದುರಿಸಿದ್ದರಿಂದ, ನನ್ನ ವಿರುದ್ಧವೇ ನನ್ನ ಉದ್ಯೋಗಿಗಳು ಆಕ್ರೋಶ ವ್ಯಕ್ತಪಡಿಸುವಂತಾಯಿತು.
ದುರಾದೃಷ್ಟವಶಾತ್ ಖರ್ಚು ನಿಭಾಯಿಸಲಾಗಲಿಲ್ಲ
ನನ್ನ ಉದ್ಯೋಗಿಗಳಿಗೆ ಸಂಬಳ ನೀಡದಿರುವುದು ನನ್ನ ಗಮನಕ್ಕೆ ಬಂದಿತ್ತು. 2012ರ ಡಿಸೆಂಬರ್ ನಲ್ಲಿ ಡಿಜಿಸಿಎನಿಂದ ಕೆಎಫ್ಎ ವಿಮಾನ ಹಾರಾಟಕ್ಕೆ ನಿರ್ಬಂಧ ಹೇರಿದ ಮೇಲೆ ಮತ್ತು 2012ರ ಡಿಸೆಂಬರ್ 31ರಂದು ವಿಮಾನ ಹಾರಾಟದ ಪರವಾನಗಿ ಕೂಡ ಮುಗಿದುಹೋಗಿದ್ದರಿಂದ ಏರುತ್ತಿದ್ದ ಖರ್ಚುಗಳನ್ನು ನಿಭಾಯಿಸುವುದು ಕಂಪನಿಗೆ ಸಾಧ್ಯವೇ ಇದ್ದಿದ್ದಿಲ್ಲ. ನಾನು ಕಾನೂನಾತ್ಮಕವಾಗಿ ಮಾಡಬೇಕಾಗಿಲ್ಲದಿದ್ದರೂ 2014ರಲ್ಲಿ ಯುಬಿಎಚ್ಎಲ್ ಕಂಪನಿ ಸರ್ವೋಚ್ಚ ನ್ಯಾಯಾಲಯವನ್ನು ಸಂಪರ್ಕಿಸಿ ಸಂಬಳದ ಒಂದು ಭಾಗ ನೀಡುವಂತೆ ಅರ್ಜಿ ಹಾಕಿದ್ದೆ. ದುರಾದೃಷ್ಟವಶಾತ್ ಆ ಅರ್ಜಿ ಇನ್ನೂ ಸುಪ್ರೀಂ ಕೋರ್ಟ್ ನಲ್ಲಿಯೇ ಇದೆ. ಇನ್ನೂ ವಿಚಾರಣೆಗೆ ಬಂದಿಲ್ಲ.
ಬಡ್ಡಿ ಹಣದಿಂದಲೇ ಸಂಬಳ ನೀಡಿ ಪುಣ್ಯ ಕಟ್ಟಿಕೊಳ್ಳಿ
ಕರ್ನಾಟಕ ಹೈಕೋರ್ಟಿನಲ್ಲಿ ಡೆಪಾಸಿಟ್ ಮಾಡಲಾಗಿರುವ 1,280 ಕೋಟಿ ರುಪಾಯಿಯಿಂದ, 2013ರಿಂದೀಚೆಗೆ ಬಂದಿರುವ ಬಡ್ಡಿಯ ಹಣವನ್ನು (1,880 ಕೋಟಿ ರು.) ಬಳಸಿ ಕಿಂಗ್ ಫಿಷರ್ ಏರ್ ಲೈನ್ಸ್ ನ ಹಳೆಯ ಉದ್ಯೋಗಿಗಳಿಗೆ ಸಂಬಳ ಮತ್ತು ಅವರಿಗೆ ನ್ಯಾಯಯುತವಾಗಿ ಬರಬೇಕಾಗಿರುವ ಹಣವನ್ನು ನೀಡುವಂತಾದರೆ ನನಗೆ ತುಂಬಾ ಸಂತೋಷವಾಗುತ್ತದೆ. ಆದರೆ, ತಿಳಿವಳಿಕೆಯ ಕೊರತೆಯಿಂದಾಗಿ, ಕಿಂಗ್ ಫಿಷರ್ ಏರ್ ಲೈನ್ ಉದ್ಯೋಗಿಗಳೊಂದಿಗೆ ಇದ್ದ ಸಂಬಂಧ ಅರಿವಿನ ಕೊರತೆಯಿಂದಾಗಿ ನನ್ನ ಮೇಲೆ ಅನವಶ್ಯಕವಾಗಿ ಗೂಬೆಯನ್ನು ಕೂರಿಸಲಾಗುತ್ತಿದೆ.
ಮಾಧ್ಯಮಗಳಿಗೆ ಬರೆದಿರುವ ಪತ್ರದಲ್ಲಿ ಮತ್ತೇನಿದೆ
ಮಾಧ್ಯಮಗಳಿಗೆ ಬರೆದಿರುವ ಆ ಪತ್ರದಲ್ಲಿ ಬ್ಯಾಂಕುಗಳಿಗೆ ತಾವು ತೆರಬೇಕಾಗಿರುವ ಹಣ, ಸಿಬಿಐ ತಮ್ಮ ವಿರುದ್ಧ ಹಾಕಿರುವ ಚಾರ್ಜ್ ಶೀಟ್, ಜಾರಿ ನಿರ್ದೇಶನಾಲಯ ಹಾಕಿರುವ ಅಪರಾಧಗಳ ಪಟ್ಟಿ, ಕರ್ನಾಟಕ ಹೈಕೋರ್ಟ್ ಮುಂದೆ ತಾವು ನೀಡಿರುವ ಸೆಟ್ಲ್ ಮೆಂಟ್ ಆಫರ್... ಮೊದಲಾದ ವಿಷಯಗಳ ಬಗ್ಗೆ ವಿಜಯ್ ಮಲ್ಯ ವಿವರವಾಗಿ ಬರೆದಿದ್ದಾರೆ. ಜೊತೆಗೆ, ಪ್ರಧಾನಿ ನರೇಂದ್ರ ಮೋದಿ ಅವರಿಗೂ 2016ರಲ್ಲಿಯೇ ಬರೆದಿದ್ದ ಆರೇಳು ಪುಟಗಳ ಪತ್ರವನ್ನು ಬಹಿರಂಗಪಡಿಸಿದ್ದಾರೆ.