ಬೆಂಗಳೂರು ದೇಶದ ಸೈಕಲ್ ರಾಜಧಾನಿಯಾಗಲಿ!
ಬೆಂಗಳೂರು, ಅ. 26 : ಹೊಗೆ, ಧೂಳಿನಿಂದ ಬೆಂಗಳೂರು ಮುಕ್ತವಾಗಿರಬೇಕು, ಎಲ್ಲೆಲ್ಲೂ ಹಸಿರು ಕಂಗೊಳಿಸುತ್ತಿರಬೇಕು, ಟ್ರಾಫಿಕ್ ಗಜಿಬಿಜಿಯಿಲ್ಲದೆ ಗಾರ್ಡನ್ ಸಿಟಿಯಲ್ಲಿ ಅಡ್ಡಾಡುವುದು ತಮಾಷೆಯಾಗಿರಬೇಕು, ಬೆಂಗಳೂರಿನ ನಾಗರಿಕರು ಆರೋಗ್ಯದಿಂದಲೂ ಇರಬೇಕು ಎಂದು ನಿಮಗೇನಾದರೂ ಅನಿಸಿದರೆ ಅ.27ರಂದು ಭಾನುವಾರ ಬೆಳಿಗ್ಗೆ 7.00ಕ್ಕೆ ಕಬ್ಬನ್ ಪಾರ್ಕಿಗೆ ಬನ್ನಿ!
ಬೆಂಗಳೂರಿನಲ್ಲಿ ಪ್ರತಿ ತಿಂಗಳ 4ನೇ ದಿನದಂದು ಬಸ್ ದಿನವನ್ನಾಗಿ ಆಚರಿಸಲಾಗುತ್ತಿದೆ. ಇನ್ನು ಮುಂದೆ ಪ್ರತಿ ತಿಂಗಳ ಕೊನೆಯ ಭಾನುವಾರದಂದು 'ಸೈಕಲ್ ದಿನ'ವನ್ನಾಗಿ ಆಚರಿಸುವ ಸಮಯ ಬಂದಿದೆ. ಬೆಂಗಳೂರಿನ ಆರೋಗ್ಯದ ಬಗ್ಗೆ ಕಾಳಜಿ ಇರುವವರು ಈ ಆಂದೋಲನದಲ್ಲಿ ಭಾಗವಹಿಸಬಹುದು.
ಡೈರೆಕ್ಟೊರೇಟ್ ಆಫ್ ಅರ್ಬನ್ ಲ್ಯಾಂಡ್ ಟ್ರಾನ್ಸ್ ಪೋರ್ಟ್ (DULT) ಸಂಸ್ಥೆ ಬೆಂಗಳೂರಿನ ಸೈಕಲ್ ಓಡಿಸುವವರ ಸಮುದಾಯ, ನಾಗರಿಕ ಸಂಘಗಳು, ಸ್ವಯಂಸೇವಾ ಸಂಸ್ಥೆ, ತೋಟಗಾರಿಕೆ ಇಲಾಖೆ ಮತ್ತು ಬಿಎಂಟಿಸಿ ಸಹಭಾಗಿತ್ವದಲ್ಲಿ ಅ.27ರಂದು 'ಫೀಲ್ ಬೆಂಗಳೂರು ಸೈಕಲ್ ಡೇ' ಎಂಬ ವಿಶಿಷ್ಟಬಗೆಯ ಕಾರ್ಯಕ್ರಮವನ್ನು ಆಯೋಜಿಸಿದೆ.
ಬೆಳಿಗ್ಗೆ 7ರಿಂದ 11ರವರೆಗೆ ಕಬ್ಬನ್ ಪಾರ್ಕಿನಲ್ಲಿ ನಡೆಯಲಿರುವ ಈ ಆಂದೋಲನದಲ್ಲಿ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. 8.05ಕ್ಕೆ ಹಡ್ಸನ್ ಸರ್ಕಲ್ ಗೇಟ್ ಬಳಿ ಸೆರೆಮೋನಿಯಲ್ ರೈಡ್ ಮತ್ತು 8.35ಕ್ಕೆ ಕೇಂದ್ರ ಗ್ರಂಥಾಲಯದ ಬಳಿ ಹೆರಿಟೇಜ್ ರೈಡ್ ಆಯೋಜಿಸಲಾಗಿದೆ.
ಯಾರು ಭಾಗವಹಿಸಬಹುದು
ಸೈಕಲ್ ಓಡಿಸಿದರೆ ನಾವು ಕೂಡ ಆರೋಗ್ಯವಂತರಾಗಿರುತ್ತೇವೆ ಎಂದು ಭಾವಿಸುವ ಎಲ್ಲರೂ ಇದರಲ್ಲಿ ಭಾಗವಹಿಸಬಹುದು. ಸೈಕಲ್ ಇರುವವರು ಕಬ್ಬನ್ ಪಾರ್ಕಿಗೆ ತೆಗೆದುಕೊಂಡು ಬರಬಹುದು. ಇಲ್ಲದವರು ತಮ್ಮ ಗುರುತಿನ ಚೀಟಿ ತೋರಿಸಿ ಕಬ್ಬನ್ ಪಾರ್ಕಿನಲ್ಲಿ ನಾಳೆ ನೀಡಲಾಗುವ ಬಾಡಿಗೆ ಸೈಕಲ್ ಬಳಸಬಹುದು. ಆದರೆ, ಬಾಡಿಗೆ ಸೈಕಲ್ ಗಳು ಕಡಿಮೆ ಸಂಖ್ಯೆಯಲ್ಲಿರುತ್ತವೆ.
ದೂರವಿರುವವರು ಏನು ಮಾಡಬಹುದು
ಕಬ್ಬನ್ ಪಾರ್ಕಿನಿಂದ ದೂರ ವಾಸಿಸುತ್ತಿರುವವರು ಹೇಗೆ ಭಾಗವಹಿಸಬೇಕು? ಎಂದು ಚಿಂತಿಸುತ್ತಿರಬಹುದು. ಇದಕ್ಕಾಗಿ ಬಿಎಂಟಿಸಿ ಅವಕಾಶ ಮಾಡಿಕೊಟ್ಟಿದೆ. ತಮ್ಮ ಸೈಕಲ್ ಅನ್ನು ಯಾವುದೇ ಹೆಚ್ಚಿಗೆ ಶುಲ್ಕವಿಲ್ಲದೆ ಬಿಎಂಟಿಸಿಯ ವೋಲ್ವೋ ಬಸ್ಸಿನಲ್ಲಿ ಹೇರಿಕೊಂಡು ಕಬ್ಬನ್ ಪಾರ್ಕಿಗೆ ಬರಬಹುದು.
ಯಾರ್ಯಾರು ಭಾಗವಹಿಸುತ್ತಿದ್ದಾರೆ
ಬೆಂಗಳೂರು ಮಹಾಪೌರ ಕಟ್ಟೆ ಸತ್ಯನಾರಾಯಣ ಅವರು ಹಡ್ಸನ್ ಸರ್ಕಲ್ ಬಳಿ ನಡೆಯಲಿರುವ ಸೆರೆಮೋನಿಯಲ್ ರೈಡ್ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವುದು ಖಚಿತವಾಗಿದೆ. ಹಲವು ಖ್ಯಾತನಾಮರು ಕೂಡ ಭಾಗವಹಿಸುವ ನಿರೀಕ್ಷೆಯಿದೆ. ಮತ್ತು ನೀವಂತೂ ಇದ್ದೇ ಇರುತ್ತೀರಿ.
ಕೊರಗಿಕೊಂಡು ಕೂಡುವ ಅಗತ್ಯವಿಲ್ಲ
ಬೆಂಗಳೂರಿನಲ್ಲಿ ಸೈಕಲ್ ಟ್ರಾಕ್ ರೂಪಿಸಿದರೂ ಬಳಕೆಯಾಗದೆ ಬಿದ್ದಿದೆ, ಅಲ್ಲೆಲ್ಲ ಪಾರ್ಕಿಂಗ್ ಮಾಡಲಾಗುತ್ತಿದೆ ಎಂದು ದೂರುತ್ತ ತಮ್ಮ ಸೈಕಲ್ ಅನ್ನು ಆಯುಧ ಪೂಜೆ ದಿನ ಮಾತ್ರ ತೊಳೆದು ಬಳಸುವವರು ಹೇರಳ. ಆದರೆ, ನಾವು ಕೂಡ ನಿಯಮಿತವಾಗಿ ಸೈಕಲ್ ಓಡಿಸುತ್ತೇವೆ, ಸೈಕಲು ಬಳಸುವವರು ಸಾಕಷ್ಟು ಸಂಖ್ಯೆಯಲ್ಲಿ ಇದ್ದಾರೆ ಎಂದು ತೋರಿಸಿದರೆ ತಾನೆ ಏನನ್ನಾದರೂ ಮಾಡಲು ಸಾಧ್ಯ?
ಬೆಂಗಳೂರು ಸೈಕಲ್ ಕ್ಯಾಪಿಟಲ್ ಆಗಬೇಕು
ಇಂದಿನ ಕಾಲದಲ್ಲಿ ಅಸಾಧ್ಯವೆಂಬುದು ಇಲ್ಲವೇ ಇಲ್ಲ. ಮನಸ್ಸಿದ್ದಲ್ಲಿ ಮಾರ್ಗ. ಹತ್ತು ಜನ ನಿರಂತರವಾಗಿ ಸೈಕಲು ಬಳಸಲು ಶುರು ಮಾಡಿದರೆ, ಮರುದಿನ ಇಪ್ಪತ್ತು ಜನ ಬಂದು ಸೇರುತ್ತಾರೆ. ಈ ಸಂಖ್ಯೆ ಜಾಸ್ತಿಯಾಗಿ ಬೆಂಗಳೂರು ಒಂದಿಲ್ಲ ಒಂದು ದಿನ ಭಾರತದ ಸೈಕಲ್ ಕ್ಯಾಪಿಟಲ್ ಆಗಬೇಕು ಎಂಬುದು ಈ ಅಭಿಯಾನದ ಮಹತ್ ಉದ್ದೇಶ.