ಮಹಾರಾಷ್ಟ್ರ ಶಾಲೆ ಪಠ್ಯದಲ್ಲಿ ರಾಜ್ಕುಮಾರ್ ಕುರಿತು ಪಾಠ
ಬೆಂಗಳೂರು, ನ. 25: ಕನ್ನಡದ ಕಣ್ಮಣಿ ಎನ್ನಿಸಿಕೊಂಡಿರುವ ಡಾ. ರಾಜ್ಕುಮಾರ್ ಕುರಿತು ಕರ್ನಾಟಕದಲ್ಲಿಯೇ ಶಾಲೆ ಪಠ್ಯದಲ್ಲಿ ಇನ್ನೂ ಅಳವಡಿಸಿಲ್ಲ. ಆದರೆ, ಮಹಾರಾಷ್ಟ್ರ ಸರ್ಕಾರ ಈಗಾಗಲೇ ಪಠ್ಯದಲ್ಲಿ ಅಳವಡಿಸಿದೆ.
ಮಹಾರಾಷ್ಟ್ರದಲ್ಲಿ ಕನ್ನಡ ಮಾಧ್ಯಮದ 8ನೇ ತರಗತಿ ಪಠ್ಯದಲ್ಲಿ 'ನಟಸಾರ್ವಭೌಮ' ಹೆಸರಿನ ಪಾಠ ಅಳವಡಿಸಲಾಗಿದೆ. ಪಾಠದಲ್ಲಿ ಡಾ. ರಾಜ್ಕುಮಾರ್ ಅವರ ಜೀವನ, ಹೋರಾಟ ಹಾಗೂ ಕನ್ನಡ ಭಾಷೆ ಮತ್ತು ಚಲನಚಿತ್ರಕ್ಕೆ ನೀಡಿರುವ ಕೊಡುಗೆ ಕುರಿತು ವಿವರಿಸಲಾಗಿದೆ.
ಕರ್ನಾಟಕ ಹಾಗೂ ಮಹಾರಾಷ್ಟ್ರ ಗಡಿ ಪ್ರದೇಶದ ಜನರು ಹಾಗೂ ಶಿಕ್ಷಕರು ಇದರಿಂದ ಸಂತಸ ವ್ಯಕ್ತಪಡಿಸಿದ್ದಾರೆ. ಎರಡೂ ರಾಜ್ಯಗಳಲ್ಲಿ ಈ ಪ್ರಯತ್ನ ಮುಂದುವರಿಸುವ ಮೂಲಕ ಭಾಷಾ ವಿವಾದಗಳನ್ನು ಬಗೆಹರಿಸಬೇಕು ಎಂದು ಒತ್ತಾಯಿಸಿದ್ದಾರೆ.
ಕರ್ನಾಟಕದಲ್ಲಿ ಡಾ. ರಾಜ್ಕುಮಾರ್ ಅತ್ಯಂತ ಜನಪ್ರಿಯ ವ್ಯಕ್ತಿ. ಕನ್ನಡ ಸಂಸ್ಕೃತಿಯ ಸಂಕೇತ ಎಂದೇ ಕರೆಸಿಕೊಂಡವರು. ಕರ್ನಾಟಕದ ಜೊತೆ ಜಲ, ಗಡಿ ಹಾಗೂ ಭಾಷೆಯ ವಿಷಯದಲ್ಲಿ ಸದಾ ಜಗಳ ಕಾಯುತ್ತಿರುವ ಮಹಾರಾಷ್ಟ್ರ ಡಾ. ರಾಜ್ಕುಮಾರ್ ಕುರಿತು ಪಠ್ಯದಲ್ಲಿ ಅಳವಡಿಸಿರುವುದು ಕನ್ನಡಿಗರಲ್ಲಿ ಸಂತಸ ತರಿಸಿದೆ.