ಪರಿಸರ ಮಾಲಿನ್ಯದ ವಿರುದ್ಧ 'ವಿರಳ ಸಂಚಾರ ದಿನ'ಕ್ಕೆ ಚಾಲನೆ
ಬೆಂಗಳೂರು, ಫೆಬ್ರವರಿ 11: ಪರಿಸರ ಮಾಲಿನ್ಯ ತಡೆಗಟ್ಟುವ ಆಶಯದೊಂದಿಗೆ ಸರಕಾರ ಹಮ್ಮಿಕೊಂಡಿರುವ ವಿರಳ ಸಂಚಾರ ದಿನ (ಲೆಸ್ ಟ್ರಾಫಿಕ್ ಡೇ)ಕ್ಕೆ ಶನಿವಾರ ವಿಧಾನಸೌಧ ಮುಂಭಾಗದಲ್ಲಿ ಚಾಲನೆ ನೀಡಲಾಯಿತು.
ವಿಧಾನಸೌಧ ಮುಂಭಾಗ ಬೆಳಿಗ್ಗೆ 9ಗಂಟೆಗೆ ವಿರಳ ಸಂಚಾರ ದಿನದ ಅಂಗವಾಗಿ ಹಮ್ಮಿಕೊಂಡ ಸೈಕಲ್ ಜಾಥಾಗೆ ಚಿತ್ರನಟಿ ರೂಪಿಕಾ, ಸಾರಿಗೆ ಸಚಿವ ಎಚ್.ಎಂ. ರೇವಣ್ಣ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮೇಯರ್ ಸಂಪತ್ ರಾಜ್ ಚಾಲನೆ ನೀಡಿದರು.
ಸಾರಿಗೆ ಇಲಾಖೆ, ಪೊಲೀಸ್ ಇಲಾಖೆ ಹಾಗೂ ವಾಯು ಮಾಲಿನ್ಯ ನಿಯಂತ್ರಣ ಮಂಡಳಿಯ ಸಹಯೋಗದೊಂದಿಗೆ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಪ್ರತೀ ತಿಂಗಳ ಎರಡನೇ ಭಾನುವಾರ 'ವಿರಳ ಸಂಚಾರ ದಿನ'ದ ಆಚರಣೆ ನಡೆಯಲಿದೆ.
ಎಲೆಕ್ಟ್ರಿಕ್ ಕಾರಿನಲ್ಲಿ ಬಂದ ರೇವಣ್ಣ
ವಿರಳ ಸಂಚಾರ ದಿನ ಅಭಿಯಾನಕ್ಕೆ ತಮ್ಮ ನಿವಾಸದಿಂದ ವಿಧಾನಸೌಧಕ್ಕೆ ಎಲೆಕ್ಟ್ರಿಕ್ ಕಾರಿನಲ್ಲಿ ಸಾರಿಗೆ ಸಚಿವ ಎಚ್.ಎಂ. ರೇವಣ್ಣ ಬಂದು ತಲುಪಿದರು.
ಸ್ವಂತ ವಾಹನ ಸ್ಥಗಿತಗೊಳಿಸಿ, 'ಮಾಲಿನ್ಯ ತಡೆಗಟ್ಟಿ ಇಂಧನ ಉಳಿಸಿ' ಎಂಬ ಸಂದೇಶಕ್ಕೆ ಈ ಮೂಲಕ ರೇವಣ್ಣ ಜೀವ ತುಂಬಿದರು.
ಪರಿಸರ ಮಾಲಿನ್ಯವಾಗದ ವಾಹನ ಬಳಸಿ
ಖಾಸಗೀ ಹಾಗೂ ಸ್ವಂತ ವಾಹನ ಕಡಿಮೆ ಮಾಡಿ, ಸರ್ಕಾರಿ ವಾಹನ ಬಳಸುವಂತೆ ಜಾಥಾದಲ್ಲಿ ಜನರಿಗೆ ಮನವಿ ಮಾಡಲಾಯಿತು. ಮೆಟ್ರೋ, ಬಿಎಂಟಿಸಿ, ಕೆಎಸ್ಆರ್ಟಿಸಿ ವಾಹನ ಬಳಕೆ ಮಾಡಿ. ಜತೆಗೆ ಪರಿಸರಕ್ಕೆ ಮಾಲಿನ್ಯವಾಗದ ವಾಹನಗಳನ್ನು ಬಳಕೆ ಮಾಡುವಂತೆ ಸಾರ್ವಜನಿಕರಿಗೆ ಸೂಚಿಸಲಾಯಿತು. ಸೈಕಲ್ ಜಾಥದ ಮೂಲಕ ಸಾರ್ವಜನಿಕರಿಗೆ ಪರಿಸರ ಮಾಲಿನ್ಯದ ಬಗ್ಗೆ ಅರಿವು ಮೂಡಿಸಲಾಯಿತು.
ದಿನದ ಪಾಸು ದರ ಇಳಿಕೆ
ಭಾನುವಾರದಂದು ಬಿಎಂಟಿಸಿ ಬಸ್ ಗಳ ಸಂಖ್ಯೆಯನ್ನು ಹೆಚ್ಚಿಸಲಾಗುತ್ತಿದ್ದು, ದಿನದ ಪಾಸಿನ ಬೆಲೆಯನ್ನು 75 ರಿಂದ 65 ಕ್ಕೆ ಇಳಿಕೆ ಮಾಡಿ ಸಾರ್ವಜನಿಕರಿಗೆ ಹೆಚ್ಚೆಚ್ಚು ಸರ್ಕಾರಿ ಸಾರಿಗೆಯನ್ನು ಬಳಸಲು ಉತ್ತೇಜಿಸಲಾಗುವುದು ಎಂದು ಬಿಎಂಟಿಸಿ ಅಧ್ಯಕ್ಷ ನಾಗರಾಜ್ ಯಾದವ್ ಈಗಾಗಲೇ ತಿಳಿಸಿದ್ದಾರೆ.
ಮೆಟ್ರೋದಲ್ಲಿ ರಿಯಾಯಿತಿ
ಇನ್ನು ನಮ್ಮ ಮೆಟ್ರೋದಲ್ಲಿ ಕೂಡ ಮೆಟ್ರೋ ಸ್ಮಾರ್ಟ್ ಕಾರ್ಡ್ ಹೊಂದಿರುವವರಿಗೆ ಈಗಾಗಲೇ ನೀಡುತ್ತಿರುವ ಶೇ. 15 ರಿಯಾಯಿತಿ ಹೊರತುಪಡಿಸಿ, ಶೇ. 25 ಅಷ್ಟು ರಿಯಾಯಿತಿ ನೀಡಲಾಗುವುದು ಎಂದು ನಮ್ಮ ಮೆಟ್ರೋ ಎಂಡಿ ಮಹೇಂದ್ರ ಜೈನ್ ಅವರು ಮಾಹಿತಿ ನೀಡಿದ್ದಾರೆ.
ವಿರಳ ಸಂಚಾರ ದಿನದಂದು ಸಾರ್ವಜನಿಕ ಸಾರಿಗೆಯನ್ನು ಜನರು ಹೆಚ್ಚು ಬಳಕೆ ಮಾಡಿ ರಸ್ತೆಯಲ್ಲಾಗುವ ಸಂಚಾರ ದಟ್ಟಣೆ ನಿಯಂತ್ರಣವಾಗಬೇಕು. ಪ್ರತಿನಿತ್ಯ ಓಡಾಡುವವರ ಸಂಖ್ಯೆಗಿಂತ ಭಾನುವಾರ ಶೆ.70 ರಷ್ಟು ಹೆಚ್ಚು ಮಂದಿ ಮೆಟ್ರೋದಲ್ಲಿ ಪ್ರಯಾಣಿಸುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.
ಕ್ಯಾಬ್ ದರ ಇಳಿಸಲು ಮನವಿ
ಸಾರಿಗೆ ಇಲಾಖೆ ಆಯುಕ್ತ ಬಿ. ದಯಾನಂದ್ ಹೇಳುವ ಪ್ರಕಾರ ಓಲಾ ಹಾಗೂ ಊಬರ್ ಕಂಪನಿ ಮಾಲೀಕರ ಬಳಿ ವಿರಳ ಸಂಚಾರದ ದಿನಗಳಂದು ಕ್ಯಾಬ್ ಗಳ ದರವನ್ನು ಕಡಿಮೆ ಮಾಡುವಂತೆ ಮನವಿ ಮಾಡಲಾಗಿದೆ. ಸಾರ್ವಜನಿಕ ಸಾರಿಗೆ ಅಥವಾ ಸೈಕಲ್ ಬಳಸುವಂತೆ ಸಾರ್ವಜನಿಕರಲ್ಲಿ ಕೂಡ ಮನವಿ ಮಾಡಿದ್ದೇವೆ ಎಂದು ದಯಾನಂದ್ ಹೇಳಿದ್ದಾರೆ.