ಜ.20ರಿಂದ ಲಾಲ್ ಬಾಗ್ ನಲ್ಲಿ ಗಣರಾಜ್ಯೋತ್ಸವ ಫಲಪುಷ್ಪ ಪ್ರದರ್ಶನ
ಬೆಂಗಳೂರು, ಜನವರಿ 18: ಬೆಂಗಳೂರಿನ ಲಾಲ್ ಬಾಗ್ ನಲ್ಲಿ ಜನವರಿ 20 ರಿಂದ 29 ರವರೆಗೆ ಗಣರಾಜ್ಯೋತ್ಸವ ಫಲಪುಷ್ಪ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿದೆ. ಈ ವರ್ಷದ ಪ್ರದರ್ಶನ ವಿಶೇಷವಾಗಿದ್ದು, ತೋಟಗಾರಿಕೆ ಪಿತಾಮಹ ಡಾ.ಎಂ.ಎಚ್.ಮರೀಗೌಡರ ಜನ್ಮ ಶತಮಾನೋತ್ಸವ ವರ್ಷವಾಗಿದೆ. ಅವರ ನೆನಪಿನಲ್ಲಿ ನಡೆಯುತ್ತದೆ.
ತೋಟಗಾರಿಕಾ ಇಲಾಖೆ ಮತ್ತು ಮೈಸೂರು ಉದ್ಯಾನ ಕಲಾಸಂಘ ಸಹಯೋಗದಲ್ಲಿ ಹಮ್ಮಿಕೊಳ್ಳುತ್ತಿರುವ ಈ ಫಲಪುಷ್ಪ ಪ್ರದರ್ಶನದ ಉದ್ಫಾಟನೆ ಜನವರಿ 20ರಂದು ಬೆಳಗ್ಗೆ 11ಕ್ಕೆ ಲಾಲ್ ಬಾಗ್ ನ ಗಾಜಿನಮನೆಯಲ್ಲಿ ಹಮ್ಮಿಕೊಳ್ಳಲಾಗಿದೆ.
ತೋಟಗಾರಿಕಾ ಮತ್ತು ಕೃಷಿ ಮಾರುಕಟ್ಟೆ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಉದ್ಫಾಟಿಸಲಿದ್ದು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಚಿಕ್ಕಪೇಟೆ ಶಾಸಕ ಆರ್. ವಿ. ದೇವರಾಜ್ ಅವರು ವಹಿಸಲಿದ್ದಾರೆ.[ಅನಂತ ಕುಮಾರ್ ನೇತೃತ್ವದಲ್ಲಿ ಸಾಗಿದ ಹಸಿರು ತೇರು]
ಮುಖ್ಯ ಅತಿಥಿಗಳಾಗಿ ಕೇಂದ್ರ ಸಚಿವ ಅನಂತಕುಮಾರ್, ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್, ಬೆಂಗಳೂರು ಮಹಾನಗರಪಾಲಿಕೆ ಮಹಾಪೌರರಾದ ಜಿ.ಪದ್ಮಾವತಿ ಸೇರಿದಂತೆ ಅನೇಕರು ಭಾಗವಹಿಸಲಿದ್ದಾರೆ.
ಹೂತೋಟಗಳು, ತರಕಾರಿ ತೋಟ, ತಾರಸಿ ತೋಟ, ಉದ್ಯಾನವನ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದ್ದು, ಜೊತೆಗೆ ತರಕಾರಿ ಕೆತ್ತನೆ, ಡಚ್ ಹೂವಿನ ಜೋಡಣೆ, ಒಣ ಹೂವಿನ ಜೋಡಣೆ, ಥಾಯ್ ಆರ್ಟ್, ಜಾನೂರು ಮತ್ತು ಕುಬ್ಜ ಮರಗಳ ಪ್ರದರ್ಶನ ಸ್ಪರ್ಧೆಗಳನ್ನು ಸಾರ್ವಜನಿಕರಿಗೆ ಹಮ್ಮಿಕೊಳ್ಳಲಾಗಿದೆ.[ಸಿದ್ದರಾಮಯ್ಯ ಲಾಲ್ಬಾಗಿನಲ್ಲಿ ಮಾವಿನಹಣ್ಣು ಚಪ್ಪರಿಸಿದರಯ್ಯ]
75ಕ್ಕೂ ಹೆಚ್ಚು ಬಗೆಯ ವೈವಿಧ್ಯಮಯ ವಾರ್ಷಿಕ ಹೂಗಳಿಂದ ಕೂಡಿದ ಈ ಪ್ರದರ್ಶನದಲ್ಲಿ ವಿಶೇಷವಾಗಿ ಹೂಬಿಡುವ ಆಕರ್ಷಕ ಅಂಥೋರಿಯಂ, ಆರ್ಕಿಡ್ಸ್, ವಿಂಕಾ, ಬೋಗನ್ವಿಲ್ಲಾ, ಇಂಪೇಷನ್ಸ್, ಲಿಲ್ಲಿ, ಅಗಾಪಾಂಥಸ್, ಹೆಲಿಕೋನಿಯಾ, ಎಗೋನಿಯಾ, ಕಾರ್ನೇಷನ್, ಗುಲಾಬಿ, ಸೈಕ್ಲೊಮನ್, ಪೆಟೂನಿಯಾ, ಪಾಯಿನ್ ಸೆಟಿಯಾ, ಹೂ ಗಿಡಗಳನ್ನು ಪ್ರದರ್ಶಿಸಲಾಗುತ್ತದೆ.
ಇಕೆಬಾನ, ತರಕಾರಿ ಕೆತ್ತನೆ, ಪುಪ್ಷಭಾರತಿ, ಬೋನ್ಸಾಯ್, ಡಚ್ ಹೂವಿನ ಜೋಡಣೆ, ಥಾಯ್ ಆರ್ಟ್, ಜಾನೂರು ಒಣಹೂವಿನ ಜೋಡಣೆಯ ಕಲೆಗಳ ಸ್ಪರ್ಧೆಗಳ ಪ್ರದರ್ಶನವನ್ನು ಜನವರಿ 21 ಮತ್ತು 22 ರಂದು ಡಾ. ಎಂ.ಎಚ್. ಮರಿಗೌಡ ಸ್ಮಾರಕ ಭವನ, ಲಾಲ್ ಬಾಗ್ ನಲ್ಲಿ ಏರ್ಪಡಿಸಲಾಗಿದೆ.[ಫಲಪುಷ್ಪ ಪ್ರದರ್ಶನ: ಆನ್ ಲೈನ್ ಬುಕ್ಕಿಂಗ್ ಗೆ ಅವಕಾಶ]
21ರಂದು ಮಧ್ಯಾಹ್ನ 1 ಗಂಟೆಗೆ ಕವಯಿತ್ರಿ ಡಾ.ಲತಾಶೇಖರ್ ಉದ್ಫಾಟಿಸಲಿದ್ದಾರೆ. ಪ್ರದರ್ಶನದ ಅಂಗವಾಗಿ ಆಯೋಜಿಸಿರುವ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ಕಾರ್ಯಕ್ರಮವನ್ನು ಜನವರಿ 25ರ ಮಧ್ಯಾಹ್ನ 3ಕ್ಕೆ ಹಮ್ಮಿಕೊಳ್ಳಲಾಗಿದೆ.